Sunday, May 06, 2007

ಅದು ಹೇಗೆ ಗಾಂಚಲಿ ಆಗುತ್ತದೆ..... !!!

ರೇಖಾ ಬಗ್ಗೆ ಬರೆದು ನಾನು ಅವಳು ಕನ್ನಡದಲ್ಲಿ ಮಾತನಾಡಲಿಲ್ಲ ಅಂತ ಅದನ್ನು ಗಾಂಚಲಿ ಅಂದು ಬರೆದಿದ್ದೇನೋ ಸರಿ, ಆದರೆ ಸ್ವಲ್ಪ ಯೋಚಿಸಿದಾಗ ಕನ್ನಡ ಮುಕುಟ ಮಣಿಗಳು ಎಂದು ನಾವು ಕರೆಯುವ ಅನೇಕ ಕನ್ನಡ ಕವಿಗಳ ಮಾತುಗಳಲ್ಲಿ ೫೦% ಆಂಗ್ಲ ಇರುತ್ತಿದ್ದವು. ಅದರಲ್ಲೂ ಆ ಕವಿವೃಂದ ಬೇಟಿ ಮಾಡಿದರೆ ಅವರ ಮಾತುಗಳೆಲ್ಲಾ ಹೆಚ್ಚಾಗಿ ಆಂಗ್ಲದಲ್ಲಿ ಇದ್ದವು. ಅಷ್ಟಕ್ಕೆ ಏಕೆ, ಅವರ ಮನೆಯಲ್ಲಿ ತಮ್ಮ ಮಕ್ಕಳ ಜೊತೆ, ಇಲ್ಲ್ಲಾ ಇನ್ನೊಬ್ಬ ಕವಿಗಳ ಜೊತೆ ವ್ಯವಹರಿಸೊಕ್ಕೆ ಬರೀ ಇಂಗ್ಲೀಷ್ ಬಳಸಿದ್ದು ಸುಳ್ಳು ಅಲ್ಲ. ಹಾಗೇ ಅಂತ ಅವರಿಗೂ ಗಾಂಚಲಿ ಅಂತ ಕರೆಯಬಹುದೇ ???.

ಎಲ್.ಎಸ್.ಶೇಷಗಿರಿರಾಯರು ಇದನ್ನು ಚೆನ್ನಾಗಿ ಹೇಳಿದ್ದಾರೆ, ಅವರಿಗೆ ಹೃದಾಯಘಾತವಾದಾಗ , ಹೇಗಿದ್ದಿರಿ ಅಂದಾಗ
ಚೆನ್ನಾಗಿದ್ದೇನೆ ಅಂತ ಕನ್ನಡದಲ್ಲಿ ಅನ್ನುವ ಬದಲು ಆಂಗ್ಲದಲ್ಲಿ ಉತ್ತರಿಸಿದರು. ಇದು ಯಾಕೆ ಅಂದರೂ ಅಂತ ಅವರಿಗೂ ಗೊತ್ತಿಲ್ಲ,ಅವರ ಸುಪ್ತ ಆಂಗ್ಲಕರಣವಾಗಿರಬಹುದು. ಇದನ್ನೇ ಮುಂದುವರೆಸುತ್ತ ರೇಖ ಹೇಳಿದ್ದರಲ್ಲಿ ತಪ್ಪಿಲ್ಲ ಅಂತ ವಾದಿಸಬಹುದು. ಆದರೆ ಇದರಲ್ಲಿ ಗಮನಿಸಬೇಕಾದ ಅಂಶವಿದೆ.

೧) ಮನದಾಳವನ್ನು ಕನ್ನಡದಲ್ಲಿ ಹೇಳಲು ಆಗುವದಿಲ್ಲ ಎಂದು ನಮ್ಮ ಹಿರಿಯರು ಮತ್ತು ಸಮಾಜದಲ್ಲಿ ಪ್ರಭಾವಿ ವ್ಯಕ್ತಿಗಳು ತೋರಿಸಿಕೊಟ್ಟರೆ ಅದು ಸಮಾಜದ ಮೇಲೆ ಬಹಳ ದುಷ್ಪರೀಣಾಮ ಬೀರುತ್ತದೆ. ಅಷ್ಟು ಕನ್ನಡ ಸೇವೆ ಮಾಡಿ, ಅಷ್ಟು ತಿಳಿದುಕೊಂಡ ಜ್ಞಾನಿಗಳೇ ಇಂಗ್ಲೀಷ್ ಬಳಸಿರಬೇಕಾದರೆ ನಾವು ಮಾಡಿದರೆ ತಪ್ಪೇನು ಎಂದು ಉದಾಸೀನ ನಮ್ಮ ಸಮಾಜದಲ್ಲಿ ಮೂಡುತ್ತದೆ.

೨) ಪ್ರತಿ ಜನರಿಗೆ ತಾನು ಹೇಳುವ ವಿಚಾರ ಬೇರೆಯವರಿಗೆ ಅರ್ಥ ಆಗಬೇಕು ಎಂಬ ಚಟ ಇರುತ್ತದೆ, ಇದಕ್ಕೆ ಎನು ಬೇಕಾದರೂ ಮಾಡಬೇಕೆಂಬ ಛಲ ಮೂಡಿ, ತಾವು ಹೇಳುವ ವಿಷಯವನ್ನು ಆಂಗ್ಲದಲ್ಲಿ ಹೇಳಲು ಹೋಗುತ್ತಾರೆ. ಇದಕ್ಕೆ ನಮ್ಮ ಹಿಂದಿನ ಕವಿಗಳು ಕೊಡುವ ನೆವ ಅಂದರೆ, ಆಂಗ್ಲ ಭಾಷೆ "Langauge of Phrases", ಬಹಳ ಚೆನ್ನಾಗಿ ಹೇಳಬಹುದು, ಕನ್ನಡದಲ್ಲಿ ಅದು ಸಾಧ್ಯವಿಲ್ಲ ಎಂದು. ಅದ್ದರಿಂದ ಗಮನಿಸಿ ನೋಡಿ ಆ ಶತಮಾನದವರೂ ಇವತ್ತಿಗೂ ತಮ್ಮ ಭಾಷಣದಲ್ಲಿ ಕನ್ನಡದಲ್ಲಿ ಹೇಳಿದ್ದರೂ ಕೂಡ ಅದನ್ನೇ flowery English ನಲ್ಲಿ ಹೇಳಿ ನಾನು ಹೇಳಿದ್ದರ ಅರ್ಥ ಇದು ಎಂದು ಮನವರಿಕೆ ಮಾಡಿಕೊಡುತ್ತಾರೆ.

೩) ಇನ್ನೂ ಕೆಲವರು ತಾನು ಬುದ್ಧಿವಂತ, ಓದಿದವನು ಎಂದು ಬೇರೆಯವರಿಗೆ ತಿಳಿಯಲು ಇಂಗ್ಲೀಷ್ ಬಳಸುತ್ತಾರೆ. ಕನ್ನಡದಲ್ಲಿ ಹೇಳಿದ್ದರೆ ತನ್ನನ್ನು ಹಳ್ಳಿಗುಗ್ಗು ಎಂದು ಎಲ್ಲಿ ಅಂದು ಕೊಳ್ಳುತ್ತಾರೆ ಎಂಬ ಭಯ ಮೂಡಿ ಕಷ್ಟ ಪಟ್ಟಿ ಆದರೂ ಬಳಸುತ್ತಾರೆ. ನಮ್ಮ ದೌರ್ಭಾಗ್ಯವೆಂದರೆ ಇವರೇ ಹೆಚ್ಚು ಇರುವುದು, ಇವರಿಗೆ ಮೇಲೆ ಹೇಳಿದವರು ದಾರಿ ತಪ್ಪಿಸಿದರೆ, ಕೋತಿಗೆ ಹೆಂಡ ಕುಡಿಸಿದ ಹಾಗೆ ಆಗುತ್ತದೆ. ಇದನ್ನೇ ರೇಖಾ ಮಾಡಿದ್ದು, ಅವಳನ್ನು ಅನುಸರಿಸುವ ಯುವ ಪಡೆಗೆ ತಪ್ಪು ವಿಷಯ ರವಾನಿಸದ ಹಾಗೆ ಆಗುತ್ತದೆ.
ಅದಕ್ಕೆ ನಾನು ಅದನ್ನು ಗಾಂಚಲಿ ಅಂತ ಹೇಳಿದ್ದು,

ಕನ್ನಡವೆಂದರೆ ಕೇವಲ ಪದ್ಯ-ಗದ್ಯ ಬರೆದು ಜ್ಞಾನಪೀಠ ಪಡೆಯುವ ಭಾಷೆ ಅಲ್ಲ, ನಮ್ಮ ದೈನಿಂದಿನದ ಭಾಷೆ. ಇದರಲ್ಲಿ ಆಗದೇ ಇರುವುದು ಎನು ಇಲ್ಲಾ ಅಂತ ನಮ್ಮ ಸಮಾಜದ ಮಹನೀಯರು ತೋರಿಸಿಕೊಡಬೇಕು.

2 comments:

ಬಾನಾಡಿ said...

ಮನದೊಳಗಿನ ಭಾಷೆಯಾವುದು, ಮನೆಯೊಳಗಿನ ಭಾಷೆಯಾವುದು ಎಂದು ನೀವು ಚೆನ್ನಾಗಿ ಹೇಳಿದ್ದೀರಿ. ಆದರೆ ಮನದಲ್ಲಿ ಮಾತೃಭಾಷೆಗೆ ಮಮತೆಯಿಲ್ಲದಿದ್ದರೆ ಅದು ಮನೆಯೊಳಗೂ ಇರುವುದಿಲ್ಲ. ಕೆಲವರಿಗೆ ಆಡಲು ಒಂದು ಭಾಷೆ, ಬರೆಯಲು ಒಂದು ಭಾಷೆ, ಓದಲು ಒಂದು ಭಾಷೆ ಮತ್ತೆ ನೋಡಲು ಒಂದು ಭಾಷೆ ಯಿರುತ್ತದೆ. ಉದಾ. ಇಂಗ್ಲೀಷ್, ಕನ್ನಡ, ಮರಾಠಿ, ಹಿಂದಿ ಇತ್ಯಾದಿ

ಪವ್ವಿ said...

ಹೌದು ನಿಮ್ಮ ಮಾತು ಸತ್ಯ, ನಿಮ್ಮ ಅಭಿಮಾನಕ್ಕೆ ಧನ್ಯವಾದ.ನಿಮ್ಮ ಅನಿಸಿಕೆಗಳನ್ನು ಮುಂದುವರೆಸುತ್ತ, ನಾವು ಅನೇಕ ಬಾರಿ ಕನ್ನವನ್ನು ಮನೆಯಲ್ಲಿ ಕಾಲು ಮುರಿದು ಬೀಳಿಸಿರುತ್ತೆವೆ. ನನಗೆ ಪ್ರಜ್ಞಾಪೂರ್ವಕ ಮಾಡುವರಕ್ಕಿಂತ
ಅಪ್ರಜ್ಞಾಪೂರ್ವಕವಾಗಿ ಮಾಡುವ ಸಮಾಜದ ಗಣ್ಯರ ಬಗ್ಗೆ ಬೇಸರವಾಗುತ್ತದೆ.