Saturday, July 18, 2009

ಬದಲಾವಣೆ ಬೇಡ ಅನ್ನುವುದೇ ಅವನತಿ ....

ನಮ್ಮ ಕನ್ನಡ ಚಲನಚಿತ್ರಗಳು ಕ್ವಾಲಿಟಿ ಇಲ್ಲ ಕಣ್ರಿ, ಹಿಂದೆ ಪುಟ್ಟಣ್ಣ ಎಂಥ ಚಿತ್ರಗಳನ್ನು ತೆಗಿತಾ ಇದ್ರು ಅಂತೀರಾ , ಹಾಡುಗಳು ಅಷ್ಟೆ ಎಷ್ಟು ಚೆನ್ನಾಗಿ ಇರ್ತ ಇದ್ದವು, ಈಗ ನೋಡಿ ಚಿತ್ರಗಳಲ್ಲಿ ಎಲ್ಲ ಮಾಯ. ವಿದೇಶದಲ್ಲಿ ಶೂಟಿಂಗ್, ಅಬ್ಬರದ ಸಂಗೀತಾ, ಅರ್ಥ ಆಗದ ಸಾಹಿತ್ಯ.ಮಚ್ಚು-ಲಾಂಗ್, ಕಾಲ ಅಂದ್ರೆ ಅವತ್ತಿನದೇ ಕಣ್ರಿ ಅಂತ ಬೊಡಮಜ್ಜಿ ತರ ಪ್ರವರ ಹೇಳುತ್ತಾರೆ. ಅಷ್ಟಕ್ಕೂ ಇವರು ಹೇಳೋ ವಿಷಯ ಪರಭಾಷಿಕರ ಮುಂದೆ ನಮ್ಮ ಕನ್ನಡ ಚಿತ್ರವನ್ನು ತೆಗೆಳಿ ತಾವು ಯಾಕೆ ಕನ್ನಡ ಚಿತ್ರಗಳನ್ನು ನೋಡುತ್ತ ಇಲ್ಲ ಅಂತ.

ಇವರಿಗೆ ಯಾವಾಗ ನೀವು ಕಡೆಯ ಚಿತ್ರ ನೋಡಿದ್ದು ಅಂದ್ರೆ , ಮುಂಗಾರು ಮಳೆ ಅಂತಾರೆ. ಆ ಚಿತ್ರನೂ ಕೂಡ ಅವರು ಮೊದಲು ನೋಡಿರೊಲ್ಲ, ಅದರಲ್ಲೂ ಕಲ್ಲು ಹುಡುಕುವ ಪ್ರಯತ್ನ ಮಾಡಿರುತ್ತಾರೆ. ತುಂಬಾ ಪ್ರಚಾರ ಬಂದ ಮೇಲೆ, ಗೆದ್ದಿತ್ತಿನ ಬಾಲ ಹಿಡಿಯುವ ಹಾಗೆ ಈ ಜನ ಪಂಚವಾರ್ಷಿಕ ಯೋಜನೆಯಲ್ಲಿ ಒಂದು ಕನ್ನಡ ಚಿತ್ರ ನೋಡಿರುತ್ತಾರೆ. ಆದ್ರೆ ಇಡೀ ಶತಮಾನದ ಕನ್ನಡ ಚಿತ್ರ ಬಗ್ಗೆ ನೋಡದೆ , ಸರಿಯಾಗಿ ಅರ್ಥ ಮಾಡಿಕೊಳ್ಳದೇ ದಿವ್ಯ ದೃಷ್ಟಿಯಿಂದ ತಮ್ಮ ಫರ್ಮಾನು ಕೊಡುತ್ತಾರೆ. ಅಷ್ಟಕ್ಕೂ ಈ ಜನ ನೋಡೊದು ಇದೇ ತರ ಬೇರೆ ಭಾಷೆಯ ಚಿತ್ರಗಳನ್ನು, ಕೇಳುವುದು ಬೇರೆ ಭಾಷೆಯ ಅರ್ಥವಾಗದ ಸಂಗೀತವನ್ನು . ಮನರಂಜನೆಗೆ ಭಾಷೆ ಇಲ್ಲ ಅಂತ ಒಣ ಮಾತುಗಳು ಬೇರೆ ...

ಅದರಲ್ಲಿ ಒಬ್ಬ ಮಹತಾಯಿ ಹೀಗೆ ಹೇಳುತ್ತಾಳೆ ...
i really really feel ashamed to watch kannada channels in tv except chandana and mukta mukta serial in etv..

ಇದೆಲ್ಲಾ ನೋಡಿದರೆ ನನಗೆ ಅನಿಸುವುದು ಎನಪ್ಪ ಅಂದರೆ, ಇವರು LIC ಇಂದ ಬಳಲುತ್ತ ಇದ್ದಾರೆ, ಇಲ್ಲ ಇವರಿಗೆ ಕನ್ನಡ ಬಗ್ಗೆ ಮಡಿವಂತಿಕೆ ಇದೆ, ಇಲ್ಲ ಬದಲಾವಣೆಯನ್ನು ಜನರೇಷನ್ ಗ್ಯಾಪನಿಂದ ಸ್ವೀಕರಿಸದ ಜನ.


೧೪ ಜುಲೈ ವಿಜಯ ಕರ್ನಾಟಕದಲ್ಲಿ ಅರ್ಚನಾ ಹೆಬ್ಬಾರ್ ಅವರ ಲೇಖನ
ಇದಕ್ಕೆ ಹೊರತಲ್ಲ ಬಿಡಿ. ಅವಸರದ ಅವನತಿಯತ್ತ ಕನ್ನಡ ಚಿತ್ರ ಸಾಹಿತ್ಯ ಅಂತ ಲೇಖನದಲ್ಲಿ ಅವರ ಅಭಿಪ್ರಾಯಗಳು ನಾನು ಮೇಲೆ ಹೇಳಿದಕ್ಕೆ ವಿಭಿನ್ನ ಅಲ್ಲ ಬಿಡಿ. ಇನ್ನು ಒಂದು ಹೆಜ್ಜೆ ಮುಂದೆ ಹೋದರೆ ಆ ಲೇಖನ ಮುಕ್ಕಾಲು ಭಾಗ ನೀರು ಇರುವ ಗ್ಲಾಸಿನಲ್ಲಿ ಕಾಲು ಭಾಗ ನೀರು ಇಲ್ಲವಲ್ಲ ಅನ್ನೊ ಪ್ರಲಾಪ ಇದೆ.
ಅದರಿಂದ ೭೫% ನೀರು ಇರುವ ವಾಸ್ತ್ವವ ಮರೆಯಾಗುತ್ತ, ಎನು ಇಲ್ಲ ಎಲ್ಲಾ ಮುಗಿದೇ ಹೊಯಿತು, ಅವಸರ,ಅವನತಿ ಅನ್ನೊ ಪದ ಪುಂಜಕ್ಕೆ ಹೋಗಿ ಓದುಗರನ್ನು ಬೆಚ್ಚಿ ಬೀಳಿಸುತ್ತದೆ.

ಇವರು ಹೇಳೊ ಹಾಗೆ ಇವರು ಕನ್ನಡ ಚಿತ್ರದ ಹಾಡುಗಳನ್ನು ಕೇಳುವುದೇ ಆಫಿಸಿಗೆ ಹೋಗುವ ಕ್ಯಾಬಿನಲ್ಲಿ ( ಅಂದರೆ ಬೇರೆ ಸಮಯದಲ್ಲಿ ಕೇಳುವದಿಲ್ಲ ಅಂತ ಅಂದುಕೊಳ್ಖ್ಳಬಹುದೇ ??), ಆ ಒಂದು ಗಂಟೆಯಲ್ಲಿ ಎಷ್ತು ಕೇಳಬಹುದು ??, ಎನೋ ಒಂದು ಕನ್ನಡ ಹಾಡುಗಳನ್ನು ಕೇಳಿಸುವ ಅವರ ಡ್ರೈವರ ಅಣ್ಣಾಗೆ ಒಂದು ಥ್ಯಾಂಕ್ಸ ಹೇಳಬೇಕು. ಈ ಒಂದು ಗಂಟೆಯಲ್ಲಿ ಕನ್ನಡ ಹಾಡುಗಳನ್ನು ಕೇಳಿ ಇವರಿಗೆ ಮಾನಸಿಕ ತುಮುಲ ಆಗುವ ಹಾಗೆ ಆಗಿದೆ ಅಂದರೆ ನಂಬಲೇಬೇಕು..

ಯಾಕೆ ಆ ಮಾನಸಿಕ ತುಮುಲ ಆಗಿದೆ ಅಂತ ಸ್ವಲ್ಪ ತಿಳಿದುಕೊಳ್ಳೊಣ...

ಹಾಡುಗಳು ಕೇವಲ flowery words ನಲ್ಲಿ ಇರಬೇಕು

ಹಾಡುಗಳ ಸಾಹಿತ್ಯದಲ್ಲಿ ಪದಪುಂಜಗಳು ಹೇರಳ ಇರಬೇಕು, ಉಪಮಾ-ಉಪಮೇಯ ಇರಬೇಕು.
ಸಂಸ್ಕೃತಮಯ ಶಭ್ದಗಳು ಇರಬೇಕು. ಅವುಗಳ ಅರ್ಥ ಕೇವಲ ಒಂದು ವರ್ಗಕ್ಕೆ ಮಾತ್ರ ಆಗಬೇಕು ಅನ್ನೊದು ಇವರ ಅಭಿಮತ. ಚಿತ್ರದಲ್ಲಿ ಹೀರೋ ಹಳ್ಳಿ ಹೈದ ಆದರೂ ಇಂಪಾಲ ಜೇನಿನ ಕಂಪಾಲಾ ಅಂತ ಹಾಡಬೇಕು. ಈ ಸಾಹಿತ್ಯ ನಮ್ಮ ಆಡು ಭಾಷೆಯಲ್ಲಿ ಇದ್ದರೆ ಅದು ತಪ್ಪು. ಲಗ್ನ ಆಗುಮ ಅನ್ನಬಾರದು , ಕಲ್ಯಾಣ ಆಗೋಣವೇ ಅನ್ನಬೇಕು, ಆಗಲೇ ಅದು ಶಿಷ್ತಾಚಾರ. ಸ್ವಾಮಿ ಇದು ಯಾವ ನ್ಯಾಯ. ??


ಇನ್ನೊ ಒಂದು ಸನಾತನಿ ವರ್ಗ ಇದೆ, ಇವರಿಗೆ ಸಂಸ್ಕೃತದಿಂದ ಬಂದರೇನೆ ತೀರ್ಥ, ಇಕ್ಕು ಮಡಗು, ಮಾಡ್ಲ ಅನ್ನೊ ಗ್ರಾಮ್ಯ ಪದಗಳ ಬಗ್ಗೆ ತುಂಬಾ ಸಿಟ್ಟು, ಬರುತ್ತದೆ, ಹೊಗುತ್ತದೆ ಅನ್ನೊ ಮಾತುಗಳು weird ಅನಿಸುತ್ತದೆ ಅಂತೆ.

ನಿಜಕ್ಕೂ ಹೇಳಬೇಕು ಎಂದರೆ ಅಚ್ಚ ಕನ್ನಡ ಶಬ್ದಗಳೇ ಎಂದರೆ ಹಳ್ಳಿ ಶಭ್ದಗಳು, ಹಾಕ್ಮ, ಬಾರ್ಮ,ಆಗುಮ ಅನ್ನೊ ಕ್ರಿಯಾಪದಳನ್ನು ಹಾಡಿನಲ್ಲಿ ಬಳಸಿದರೆ ತಪ್ಪೇನು.


ಗ್ರಾಹಕ ಆಧರಿತ ವ್ಯಾಪಾರ

ಚಲನಚಿತ್ರ ಅನ್ನುವುದು ಒಂದು ವ್ಯಾಪಾರ, ಇದರಲ್ಲಿ ಎಲ್ಲಾ ಸಾಲ ಹಾಕಿ ದುಡ್ದು ಹಾಕುವವರು ಜುಟ್ಟಿಗೆ ಮಲ್ಲಿಗೆ ಹೂವಿನ ಬಗ್ಗೆ ಯೋಚನೆ ಮಾಡುವದಿಲ್ಲ, ಅವರಿಗೆ ಹೊಟ್ಟೆ ಹಿಟ್ಟಿನ ಚಿಂತೆ. ಅವರ ಗಮನ ಹೆಚ್ಚು ಜನರಿಗೆ ಮುಟ್ಟಬೇಕು ಅವರಿಗೆ ಹತ್ತಿರ ಆಗಿರಬೇಕು ಅಂತ ಆಗಿರುತ್ತದೆ.

ಕನ್ನಡ ಚಲನಚಿತ್ರಗಳಲ್ಲಿ ಕ್ಲಾಸ್ ಮತ್ತು ಮಾಸ್ ಅಂತ ಎರಡು ಕ್ಯಾಟಾಗರಿ ಇದೆ, ಅವುಗಳ ಪ್ಯಾಕೇಜ್ ಭಿನ್ನ ಆಗಿರುತ್ತದೆ ಮತ್ತು ಅವುಗಳ target audience ಕೂಡ ಬೇರೆ ಇರುತ್ತದ ಅಂತ ಮರೆಯಬಾರದು.


ಸುಮ್ಮನೆ ಚಿತ್ರಗಳನ್ನು ನೊಡದೆ ಕ್ವಾಲಿಟಿ ಇಲ್ಲ ಅಂತ ತೀರ್ಮಾನು ಕೊಡುವ, ಎಮಪಿ೩ ಮಾಡಿಕೊಂಡು ಪೈರಸಿಗೆ ಸಹಾಯ ಮಾಡುತ್ತಿರುವ ಐಟಿ-ಬಿಟಿ ಜನಗಳಿಗಿಂತ , ಹಳ್ಳಿ ಜನರೇ ವಾಸಿ. ತಮಗೆ ಬರುವ ಅಲ್ಪ ಸ್ವಲ್ಪ ಸಂಬಳದಲ್ಲಿ ತಪ್ಪದೇ ಚಲನಚಿತ್ರಗಳನ್ನು ನೋಡುತ್ತಾರೆ, ಸಿ,ಡಿಯನ್ನು ಕೊಂಡುಕೊಳ್ಳುತ್ತಾರೆ.

ಅಂತಹ ಸಕ್ಕರೆ ಮನಸ್ಸಿನ ಜನರ ಭಾಷೆ-ಸಾಹಿತ್ಯ ಬಳಸಿದರೆ ತಪ್ಪೇನು ??.

ಗ್ರಾಹಕ ಆಧರಿತ ಸೇವೆ ಜಗತ್ತಿನಲ್ಲಿ ಎಲ್ಲಾ ಕಡೆ ಇದೆ, ಅದಕ್ಕೆ ಕನ್ನಡ ಚಿತ್ರ ಹೊರತಲ್ಲ. ಹಾಗೆಂದ ಮಾತ್ರಕ್ಕೆ ಕನ್ನಡದಲ್ಲಿ ಅದೇ ರೀತಿ ಹಾಡು ಬರುತ್ತ ಇದೆ ಅಂತ ಅರ್ಥ ಅಲ್ಲ.


ಉಚ್ಚಾರಣೆ ಸುಲಭ ಇರಬೇಕು, ಜನಸಾಮನ್ಯರು ಹಾಡು ಗುಂಗುವ ಹಾಗೆ ಇರಬೇಕು.

ಉಪಮಾ-ಉಪಮೇ ಪದಗಳನ್ನು ಬಳಸದೇ ನಮ್ಮ ಸಾಮನ್ಯ ಜನರ ಬಾಯಲ್ಲಿ ಉಚ್ಚಾರಣೆ ಆಗುವ ಹಾಡುಗಳೇ ನಂಬರ್ ಒನ್ ಆಗುವುದು. ಅದೇ ಹೆಚ್ಚು ಜನರಿಗೆ ಇಷ್ತ ಆಗುವುದು. ಹಾಡುಗಳು ಜನಸಾಮನ್ಯರನ್ನು ಮುಟ್ಟಬೇಕೇ ವಿನಹ ಜ್ಞಾನಪೀಠ ಸಾಹಿತ್ಯಕ್ಕೆ ಸ್ಪರ್ಧೆಗೆ ಅಲ್ಲ. ಹಾಗೆ ಅಂತ ಜನಸಾಮನ್ಯ ಮೆಚ್ಚಿದ್ದನ್ನು (ಉದಾ ಜಿಂಕೆ ಮರೀನಾ ಹಾಡು) ಕಳಪೆ ಗುಣಮಟ್ಟ ಅಂತ ಮೂದಲಿಸುವುದು ಮೆಜಾರಿಟಿಗೆ ಮಾಡಿದ ಅವಮಾನವೇ ಸರಿ , ಜನಸಾಮನ್ಯರಲ್ಲಿ ಒಬ್ಬರು ಆಗದೇ ಇರುವದಕ್ಕೆ , ಇಲ್ಲ ಇವರು ಇಷ್ಟ ಪಡದೇ ಇರುವದಕ್ಕೆ ಆ ಹಾಡುಗಳು ಕಳಪೆ ಮಟ್ಟದ್ದು ಆಗಲು ಸಾಧ್ಯವಿಲ್ಲ. ಹಾಗೇ ಉತ್ತಮ ಗುಣಮಟ್ಟದ್ದು
ಯಾವುದು ಅಂತ ಬರೆದು ಸ್ವಲ್ಪ ನಮ್ಮ ಜನಸಾಮನ್ಯರಿಗೆ ತಿಳಿಸಿದರೆ ಬಹಳ ಸಹಾಯ ಆಗುತ್ತದೆ.

ಹಿಂದೆ ತಮ್ಮ ಪಾಂಡಿತ್ಯವನ್ನು ಹಾಡುಗಳ ಸಾಹಿತ್ಯದ ಮೂಲಕ ಅನೇಕ ಜನರು ಹರಿದುಬಿಟ್ಟರು, ಕನ್ನಡದಲ್ಲಿ ಅನೇಕ ಒಳ್ಳೆ ಹಾಡುಗಳು ಅವರ ದಸೆಯಿಂದ ಬಂದವು. ಮೊದಲ ಬಾರಿಗೆ ಆ ತರಹದ ಸಾಹಿತ್ಯವನ್ನು ಬದಿಗರಿಸಿ ಜನಸಾಮನ್ಯರು ಬಳಸುವ ಆಡುಭಾಷೆಯನ್ನೇ ಚಿತ್ರ ಸಾಹಿತ್ಯ ಮಾಡಿದ ಕೀರ್ತಿ ಹಂಸಲೇಖ ಅವರಿಗೆ ಸಲ್ಲುತ್ತದೆ.

ಅರ್ಚಾನ ರಾಜ್-showman ಚಿತ್ರದ ಹಾಡುಗಳನ್ನು ದೂರಿದ್ದಾರೆ, ಅದರೇ ಅವರು ಆ ಚಿತ್ರದಲ್ಲಿ ನಾಯಕ ಒಬ್ಬ ಸಾಮನ್ಯ ಮನುಷ್ಯ, ಇಂಜಿನಿಯರ್ ಓದುಗನಲ್ಲ, ಕನ್ನಡ ಸಾಹಿತ್ಯದ ಗಂಧ ಗಾಳಿ ಅರಿತಿರುವನಲ್ಲ. ಅವನು ಹಾಡಿದರೆ ಪಾರೋ ..ಹೇ ಪಾರೋ ಅಂತ ಹಾಡುಗಳೆ ಬರುವುದು. ಅದರಲ್ಲಿ ನಾಯಕ ತನ್ನ ಪ್ರೇಮದ ಬಗ್ಗೆ ಹೇಳುತ್ತ ಇರುತ್ತಾನೆ,ಅವನ ಮನಸಿನ ತುಮಲವನ್ನು ಅವನ ಭಾಷೆಯಲ್ಲಿ ಹೇಳಿದರೆ ತಪ್ಪಾ.
ಅಷ್ಟಕ್ಕೂ ಚಿತ್ರ ಸಾಹಿತ್ಯ ಎನು GMS/UMTSaa 3GPP standardsaa ಫಾಲೊ ಮಾಡೊಕ್ಕೆ, ಹೀಗೆ ಇರಬೇಕು ಅಂತ ಹೇಳೊಕ್ಕೆ ...


ಕರ್ನಾಟಕ ಸಂಗೀತವು ಕಳಪೇಯೇ ??

ಕರ್ನಾಟಕ ಸಂಗೀತದ ದಾಸರ ಪದಗಳು ಕೂಡ ತಮಿಳ್-ತೆಲ್ಗು ಜನರ ನಾಲಿಗೆಗೆ ಸಿಕ್ಕಿ ಸಿಲುಕಿ, ಎಳೆದು , ಹರೆದು ಆಆಅ-ಉಉಉ ಅಂತ ಕೇಳುವುದು ಬಿಟ್ಟರೆ ಅರ್ಥ ಜನಸಾಮನ್ಯರಿಗೆ ಅರ್ಥ ಆಗುವುದೇ
ಇಲ್ಲ. ರಾಗ,ತಾಳದ ಗಂಧ ಇಲ್ಲದವರಿಗೆ ಎನೆಂದರೆ ಎನೂ ಅರ್ಥ ಆಗುವದಿಲ್ಲ, ಹಾಗೆಂದ ಮಾತ್ರಕ್ಕೆ ಅವು ಕಳಪೇಯೇ ??



Gen X

ಇಲ್ಲಿ ಇನ್ನೊಂದು ಅಂಶ ಇದೆ, ಅದು ಎನೆಂದರೆ ಅರ್ಚನ ಅವರ ಯುಗಕ್ಕೂ ಇಂದಿನ ಯುಗಕ್ಕೂ ಇರುವ ವಯಸ್ಸಿನ ಅಂತರ. ಇವತ್ತಿಗೂ ನಾವು ಶಿಲಾಯುಗದಲ್ಲೇ ಇರಬೇಕು ಅಂದರೆ ಆಗುತ್ತದೆಯೇ, ಕಾಲಕ್ಕೆ ತಕ್ಕ
ಹಾಗೆ ನಡೆಯಬೇಕು ಅಲ್ಲವೇ ?.

ಇವತ್ತು ಹಾಡುಗಳು ಬರೀ ಕ್ಯಾಬಿನಲ್ಲಿ ಒಂದು ಗಂಟೆ ಕುಳಿತು ಕೇಳಿ ಹೋಗುವದಕ್ಕೆ ಸೀಮಿತವಾಗಿಲ್ಲ. ಅದರ ಬಳಕೆ ಅನೇಕ ಕಡೆ ಆಗುತ್ತ ಇದೆ, ಕಾಲೇಜಿನ ಡ್ಯಾನ್ಸ, ಮೊಬೈಲ್ ಟ್ಯೂನ್, ಕಾಲರ್ ಟ್ಯೂನ್ ಅಷ್ಟು ಯಾಕೆ
ಪಬ್ಬಿನ ಡ್ಯಾನ್ಸ ಫ್ಲೋರ್ನನಲ್ಲೂ ಹಾಡುಗಳು ಬೇಕು. ಇಂತಹ ಕಡೆ ಇವರು ಮೆಚ್ಚಿದ ಮಾನಸ ಸರೋವರ ಹಾಡು ಹಾಕಲು ಆಗುತ್ತದೆಯೇ ?. ಕನ್ನಡ ಹಾಡುಗಳು ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತ ಇರಬೇಕು
ಅಂತ ಹೇಳುವುದು ಯಾವ ನ್ಯಾಯ ??
ಹಾಗೆ ಒಂದು ವೇಳೆ ನಮ್ಮ ಭಾಷೆ ಆದನ್ನು ಪೂರೈಸದಿದ್ದರೆ ಜನ ಬೇರೆ ಭಾಷೆ ಕಡೆ ವಾಲುತ್ತಾರೆ ಅಷ್ಟೇ...

ಶೇಕ್ ಶೇಕ್ ಶೇಕ್ ಇವರ್ ಬಾಡಿ ಇದು ಸಂಪೂರ್ಣ ಆಂಗ್ಲಪದಗಳೇ ಇರುವ ಹಾಡು. ಇದು ಸೇಜ ಸೇಜ ಸೇಜ ಬಾರೆ ಅನ್ನೋ ಕನ್ನಡಿಕರೀಣ ಆಗಿ ಅರ್ಚನ ಅವರಿಗೆ ಕಿವಿಗೆ
ಹೇಗೆ ಬಿತ್ತೊ ನಾ ಕಾಣೆ... ಅಣ್ಣಮ್ಮನ ಡ್ಯಾನ್ಸ, ಟಪಾಲಗೋಚಿಯಲ್ಲಿ ಹೊಸ ರಿಮಿಕ್ಸ ನಮಗೆ ಬೇಕು. ಬೇರೆ ಭಾಷೆಯವರು ತಮ್ಮ ಹಾಡುಗಳಿಗೆ ಹುಚ್ಚೆದ್ದು ಕುಣಿಯುತ್ತ ಇದ್ದರೆ
ನಾವು ಪ್ಯಾದೆಗಳ ತರಹ ಇರಬೇಕಾ ?

ರಘು ದಿಕ್ಷೀತ್, ಅರ್ಬನ್ ಲ್ಯಾಡ್ಸ್, ಅಶ್ವಾಸ, ಜಂಭ ಹೊಸ ರಾಕ್ ಬ್ರಾಂಡಗಳು ಕನ್ನಡ ಹಾಡನ್ನು ಹಾಡಬಾರದೇ ??


ಕಲ್ಪನೆಗಳು-ವಾಸ್ತವಗಳು

ಮುಂದುವರೆಯುತ್ತ ಅವರ ಕಲ್ಪನೆಗಳಿಗೆ ಅವರೇ ಉತ್ತರ ಕಂಡುಕೊಳ್ಳಲು ಹೊರಟಿದ್ದಾರೆ, ಅದರ ಪ್ರಕಾರ ಹೀಗೆ ನಮ್ಮ ಸಾಹಿತ್ಯ್ವವು ಹೀಗೆ ಅವನತಿಗೊಳ್ಳಲು ಇವು ಕಾರಣವಂತೆ ...

೧) ಕನ್ನಡ ಭಾಷೆಯ ಪಾಶ್ಚತೀಕರಣ
ಕನ್ನಡ ಭಾಷೆಯ ಹಾಡುಗಳನ್ನು ಬೇರೆ ಬೇರೆ ರೀತಿಯಲ್ಲಿ ಹಾಡಬಹುದು, ಉದಾ ದಾಸರ ನಾಮಗಳನ್ನು ಅರ್ಥ ಆಗದ ಹಾಗೆ ಕರ್ನಾಟಕ ಸಂಗೀತದಲ್ಲಿ, ಇಲ್ಲ ರಾಕ್ ರೀತಿಯಲ್ಲಿ ಇಲ್ಲಾ ರೆಗ್ಗೆ ರೀತಿಯಲ್ಲಿ ಹಾಡಬಹುದು.

ಇಲ್ಲಿ ನನಗೆ ಅರ್ಥ ಆಗದ ಒಂದು ಪ್ರಶ್ನೆ ಇದೆ, ಮೇಲೆ ಅರ್ಚನ ಹಳ್ಳಿ ಭಾಷೆ ಬಳಸಿ ಹೇಳಿರುವದನ್ನು ಕಳಪೆ ಅಂತ ಹೇಳಿದ್ದಾರೆ, ಅದರಲ್ಲಿ ಪಾಶ್ಚತ್ಯ ಎನು ಕಾಣಿಸಿತೋ ನಾ ಕಾಣೆನು. ಹಳ್ಳಿ ಬೇಡ ದಿಲ್ಲಿ ಜನರಲ್ಲಿ
ಇವತ್ತು ಎಸಿಡಿಸಿ-GUNIT-Eminiem ಹಾಡುಗಳನ್ನು ಕೇಳುತ್ತ ಬೆಳೆಯುವ ಯುವ ಸಮಾಜ ಇದೆ, ಅವರಿಗೆ ಮಾನಸ ಸರೋವರ ಬೇಡ, ಇದು ವಾಸ್ತವ ಅವರಿಗೆ ಶೇಕ್-ರಾಕ್ ಶೈಲಿನಲ್ಲಿ ಬೇಕು, ಆ ರೀತಿಯಲ್ಲಿ ಹಾಡುಗಳು ಬಂದರೆ ತಪ್ಪೇನಿದೆ, ಎಲ್ಲಾ ಒಂದೇ ರೀತಿಯಲ್ಲಿ ಹಾಡುವದಕ್ಕೆ ಚಿತ್ರಹಾಡುಗಳು ಭಾವಗೀತೆ ಅಲ್ಲವಲ್ಲ.

ನಮ್ಮ ಜನಪದ ಗೀತೆಗಳು ಪಾಶ್ಚತ್ಯಗೊಂಡಿರುವದಕ್ಕೆಯೇ ಗುಡುಗುಡಿಯಾ ಹಾಡಿಗೆ ವಿದೇಶದಲ್ಲಿ ಹುಚ್ಚೆದ್ದು ಕುಣಿದಿದ್ದು. ನಮ್ಮ ಭಾಷೆಯ ಹಾಡುಗಳನ್ನು ಬೇರೆಯವರಿಗೆ ಹಂಚಲು,ಅವರನ್ನು ನಮ್ಮ ಸಂಗೀತ ಸಮಾಜಕ್ಕೆ ತರಲು ಇದು ಅವಶ್ಯ. ಇಲ್ಲದಿದ್ದರೆ ನಾವು ಭಾವಗೀತೆಗಳ ತರ ಮಾತ್ರ ಹಾಡ್ತಿವಿ ಅಂತ ಪಟ್ಟು ಹಿಡಿದರೆ ಲಾಸ್ ಆಗುವುದು ನಮ್ಮ ಭಾಷೆಗೆ ಮತ್ತು ನಮ್ಮ ಸಂಸ್ಕೃತಿಗೆ.

ಇಂಗ್ಲೀಷ ಹಾಡಿನಲ್ಲಿ ಎಷ್ತೋಂದು ವೈವಿಧ್ಯತೆ ಇದೆ, ಎಕೆಂದರೆ ಅದು ಬೇರೆ ಬೇರೆ ರೀತಿಯಲ್ಲಿ ಇರುವದನ್ನು ಒಪ್ಪಿದೆ ಮತ್ತು ಹಾಗೆ ಬೆಳದಿದೆ. ಇವತ್ತಿನ ಸಮಾಜದಲ್ಲಿ ವೈವಿಧ್ಯತೆ ಇರುವ ಮತ್ತು ಕಾಲಕ್ಕೆ ತಕ್ಕ ಹಾಗೆ
ಭಾಷೆ ಮಾತ್ರ ಬದುಕಲು ಸಾಧ್ಯ.

೨) ಹಾಡು ಬರೆಯುವವರ ಕನ್ನಡ ಶಬ್ಧಗಳ ಕೊರತೆ.

ಇಲ್ಲಿ ಕೂಡ ಅರ್ಚನ ಹೇಳುತ್ತ ಇರುವುದು ಅದನ್ನೇ ಸನಾತನಿ ಸಂಸ್ಕ್ರುತ ಪದಗಳನ್ನು ಮಾತ್ರ ಬಳಸಬೇಕು, ಸ್ಲ್ಯಾಂಗ್ ಬಳಸಬಾರದು ಅಂತ. ಇವತ್ತು ಕನ್ನಡದಲ್ಲಿ ಸ್ಲಾಂಗ್ ಭಾಷೆಗೆ
ಮಹತ್ತರ ಸ್ಥಾನ ಇದೆ, ಆ ಕಾರಣಕ್ಕೆ ೧ ದಶಕದ ಹಿಂದೆ ನಾನು ಅದರ ಪ್ರಚಾರಕ್ಕೆ ಮೊದಲಾದೆ. ಬೇರೆ ಭಾಷೆಯವರು ನಮ್ಮಿಂದ ಆಮದು ಪಡೆಯಬಹುದಾದ ಸ್ವಂತಿಕೆ ಇರುವ
ಶಭ್ದಗಳು ಅಂದರೆ ಇವೆ. ನೈಜ ಆ ಪದಗಳನ್ನು ಬಿಟ್ಟು ಉಪಸರ್ಗಹೊಂದಿದ ಸಂಸ್ಕೃತ ಪದಗಳನ್ನೇ ಬಳಸಬೇಕು ಅವು ಮಾತ್ರ ಕನ್ನಡ ಶಭ್ದಗಳು ಅಂತ ಹೇಳುವುದು ಯಾವ ಪರಿಯ
ನ್ಯಾಯ.
ಕಿಚಾಕಾಯಿಸು,ಜಮಾಯಿಸು, ಪಟಾಯಿಸು ಇದು ನೈಜ ಕನ್ನಡ ಪದಗಳು. ಇವುಗಳಲ್ಲಿ ಸಂಸ್ಕೃತ ಅಂಶ ಇಲ್ಲದೇ ಇರುವುದೇ , ಅರ್ಚನ ಅವರಿಗೆ ಈ ಪದಗಳನ್ನು ಬಳಸಿದರೆ ಗಲಾಟೆ ವಾತವರಣ ಅಗುತ್ತದೆ ಅಂತ ಅನಿಸಿದೆ ಅಂತ ಕಾಣೊತ್ತೆ. ನನಗೂ ಈ ಮೊದಲು ಗೊತ್ತಿರಲಿಲ್ಲ, ಮೊಸ್ಟಲೀ ಜನಸಾಮನ್ಯರಿಗೂ ಗೊತ್ತಿರಲಿಲ್ಲ. ಮುಂದೆ ಇದು ನಿಜವಾದರೆ
ಈ ಪದಗಳನ್ನು ತೆಗೆದು ಹಾಕಿ, ಬ್ಯಾನ್ ಮಾಡಿ, ಇದರಿಂದ ಶಭ್ದ ಮಾಲಿನ್ಯ ಆಗುತ್ತಿದೆ ಅಂತ ಪರಿಸರವಾದಿಗಳು ಮುಗ್ಗಿ ಬಿದ್ದರೆ ಆಶ್ಛರ್ಯವಿಲ್ಲ ಬಿಡಿ.

೩) ಕಥಾವಸ್ತುವಿನ ಕೊರತೆ

ಇದಕ್ಕೂ ಚಿತ್ರ ಸಾಹಿತ್ಯಕ್ಕೂ ಸಂಗೀತಕ್ಕೂ ಸಂಭಂದವಿಲ್ಲ, ಎಷ್ಟೋ ಚಿತ್ರಗಳ ಸಂಗೀತ ಉತ್ತಮವಾಗಿದ್ದರೂ ಪೇಲವ ಕಥಯಿಂದ ಇಷ್ತ ಆಗಿರೊಲ್ಲ, ಉದ್ ಪಟ್ರೆ ಲವ್ಸ ಪದ್ಮ. ಹಾಗೆ ಕಥೆ ಚೆನ್ನಾಗಿದ್ದು ಸಂಗೀತ ಚೆನ್ನಾಗಿರುವದಿಲ್ಲ.

೩ಅ) ಹೆಸರು
ಮೇಲೆ ನಾನು ಹೇಳಿದ ಹಾಗೆ ಅರ್ಚನ ಕೂಡ ಚಿತ್ರ ನೋಡದೇಯೆ ಹೆಸರಿಂದಲೇ ಕನ್ನಡದಲ್ಲಿ ಬರುವ ೯೯% ಪ್ರತಿಶತ ಚಿತ್ರಗಳು ಕುಟುಂಬ ಸಮೇತ ನೋಡುವ ಹಾಗೆ ಇರುವದಿಲ್ಲ ಅನ್ನುತ್ತಾರೆ. ಅದಕ್ಕೆ ಅವರೂ ಕೊಡುವ ಹೆಸರೂ ಸ್ಲಂಬಾಲ. ಚಿತ್ರದ ಬಗ್ಗೆ ಸ್ವಲ್ಪವೂ ಗೊತ್ತಿರದೇ ಪೂರ್ವಪೀಡಿತರಾಗಿ(prejudice) ಆಗಿ ಯೋಚಿಸಿದರೆ ಹೀಗೆ ಆಗುವುದು. ಆ ಚಿತ್ರ ಕುಟುಂಬ ಸಮೇತರಾಗಿ ನೋಡಲು ಇಲ್ಲವೇ, ಆ ಹೆಸರು ಯಾಕೆ ಬಂತು ಅಂತ ಒಂದು ಹೇಳುವದಕ್ಕೆ ಆ ಚಿತ್ರದಲ್ಲಿ ಒಂದು ಸನ್ನೀವೇಶವೇ ಇದೆ.

೩ಬ) ಅಸಹಜತೆ
ಇದು ಒಳ್ಳೆ ironic ಆಯಿತು, ಮೇಲೆ ಆಗುಮ,ಹೋಗುಮಾ ಅಂತ ಪದಗಳು ಬರುತ್ತ ಇವೆ, ಮಾನಸ ಸರೋವರ ತರ ಸಾಗಲಿ ತೇಲು ತರಂಗದೋಳು ಬರುತ್ತ ಇಲ್ಲ ಅನ್ನುತ್ತಾರೆ. ಅಲ್ಲ ಹಾಗೆ ಬಂದರೆ ಅಲ್ಲವೇ ಅಸಹಜತೆ ಉಂಟಾಗುವುದು. ಇವರೇ ಹೇಳಿದ ಹಾಗೆ ವ್ಯವಸ್ಥಯಲ್ಲಿ ಸಿಕ್ಕ ರೌಡಿ ಸಾಗಲಿ ತರ ಹಾಡು ಹಾಡಿದರೆ ಅದನ್ನು ಹೇಗೆ ಸ್ವೀಕರಿಸಬೇಕೋ ನಾ ಕಾಣೆ.

೩ಡಿ) ಕಲಾಮಾಧ್ಜ್ಯಮ ಅಲ್ಲ ವ್ಯಾಪಾರ ಆಗಿದೆ.
ಅದರಲ್ಲಿ ತಪ್ಪೇನಿದೆ ??? ಚಿತ್ರಗಳು ಒಂದು ಮನರಂಜಾನ ಉದ್ಯಮಗಳ ಸರಕೇ. ಹಾಲಿವುಡನಲ್ಲಿ ಕೂಡ ಅದನ್ನು ಹಾಗೆ ಕಂಡಿರುವುದು, ಅದಕ್ಕೆ ಅಷ್ತು ಯಶಸ್ಸು ಆಗಿರುವುದು. commericia;l ಚಿತ್ರಗಳು ಕಮ್ಮಿ ಆಗಬೇಕು, ಕಲಾತ್ಮಕ ಚಿತ್ರಗಳು , ಥಿಯೇಟರಿನಲ್ಲಿ ಪ್ರದರ್ಶನ ಅಗದೇ ಸ್ವರ್ಣಕಮಲ ಗೆಲ್ಲುವ ಹಾಗೆ ಬರಬೇಕು ಎಂಬುದು ಲೇಖರ ಅಂಬೋಣ. ಕಲಾತ್ಮಕ ಚಿತ್ರಗಳು ಮುಖ್ಯ, ಅವು ಊಟಕ್ಕೆ ಉಪ್ಪಿದ್ದ ಹಾಗೆ, ಆದರೆ ಅದೇ ಊಟ ಆಗಲು ಸಾಧ್ಯವಿಲ್ಲ ನೋಡಿ....


ಬರೀ ೨೫% ಖಾಲಿ ಯಾಕೆ ಕಾಣುತ್ತದೆ ??


ಲೇಖಕರು ಹೇಳುವಾ ಹಾಗೆ ಕನ್ನಡದಲ್ಲಿ ಸಾಹಿತ್ಯ ಅವನತಿ ಅಲ್ಲ ನಿಜಕ್ಕೂ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ಬೇಕಿದ್ದರೆ ಒಮ್ಮೆ ಬೇರೆ ಭಾಷೆಗಳ ಹಾಡು ಕೇಳಲಿ, ಅವರಿಗೆ ತಿಳಿಯುತ್ತದೆ. ಜಯಂತ ಕಾಯ್ಕಿಣಿ ಬರೆದಿರುವ ಪ್ರತಿ ಹಾಡಿನಲ್ಲು ಒಂದು ಮಾಂತ್ರಿಕತೆ ಇದೆ. ಇದರಿಂದ ಪ್ರಭಾವಿತಗೊಂಡು ಯೋಗರಾಜ್ ಭಟ, ಕಲ್ಯಾಣ್, ಕವಿರಾಜ್, ಹೃದಯಶಿವ ಕೂಡ ತುಂಬಾ ಚೆನ್ನಾಗಿ ಬರೆಯುತ್ತಿದ್ದಾರೆ. ತೆರೆಗೊಂಡ ಪ್ರತಿಚಿತ್ರದಲ್ಲೂ ೨-೩ ಹಾಡು ಜನಪ್ರಿಯ ಆಗುತ್ತ ಇರುವುದೇ ಇದಕ್ಕೆ ಸಾಕ್ಷಿ. ಹಳೆ ಪಾತ್ರೆ ಅಂತ ಮೂದಲಿಸಿದ್ದ ಜಂಗ್ಲಿ ಚಿತ್ರದಲ್ಲೂ ನೀನೆಂದರೆ ನನ್ನೊಳಗೆ, ಈ ಮಜವಾದ ಮಬ್ಬು ಕವಿದ ಸಂಜೆಗೆ ಉತ್ತಮ ಸಾಹಿತ್ಯ ಇರುವ ಹಾಡುಗಳು ಇವೆ.ಅದೇ ನಿರ್ದೇಶಕರ ಇಂತಿ ನಿನ್ನ ಪ್ರೀತಿಯ ಹಾಡುಗಳನ್ನು ಕೇಳಿಲ್ಲವೇ ??. ಉತ್ತಮ ಸಾಹಿತ್ಯ ಇರುವ ಕನ್ನಡ ಹಾಡುಗಳು ಅರ್ಚನ ಅವರಿಗೆ ಕಿವಿಗೆ ಬೀಳದ್ದೆ ಇರುವುದು ಜಾಣಕಿವುಡೇ ಸರಿ ಬಿಡಿ.

ಕೊಸರು

ಕನ್ನಡ ಚಿತ್ರ ಹಾಡುಗಳು ಎನ್ನುವುದು ಒಂದು ಮದುವೆ ಊಟ ಇದ್ದ ಹಾಗೆ, ಅದರಲ್ಲಿ ಕೊಸಂಬರಿ,ಪಲ್ಯ,ಗೊಜ್ಜು,ಅನ್ನ ಎಲ್ಲ ಬೇರೆ ಬೇರೆಯಾಗಿ ಇರುತ್ತದೆ. ನಿಮಗೆ ಕೊಸಂಬರಿ ಬೇಡವಾದರೆ ತಿನ್ನಬೇಡಿ, ಹಾಗೆಂದ ಮಾತ್ರಕ್ಕೆ ಊಟದಲ್ಲಿ ಬರೀ ಅನ್ಬ ಮಾತ್ರ ಇರಬೇಕು ಬೇರೆನೂ ಇರಬಾರದು ಎನ್ನಬೇಕೆ ??