Friday, July 17, 2009

ಎದ್ದೇಳು ಮಂಜುನಾಥ- Review


ಒಳ್ಳೆ ಕೆಲ್ಸಕ್ಕೆ ೧೦೮ ವಿಷ್ನ ಅನ್ನೊ ಹಾಗೆ ಮೊದಲ ದಿನ ಚಿತ್ರ ನೋಡಬೇಕು ಅಂತ ಹೊರಟವನಿಗೆ ದೊಡ್ಡ ಟ್ರಾಫಿಕ್ ಜ್ಯಾಮ್ ಎದುರಾಯಿತು, ಶೋ ಶುರುವಾಗುವದಕ್ಕೆ ಕೇವಲ ೩೦ ನಿಮಿಷ ಇತ್ತು.
ಆದರೂ ತಲುಪುವೆ ಅನ್ನೊ ಆತ್ಮವಿಶ್ವಾಸ ಇತ್ತು. ಹೇಗೋ ಸರಿಯಾಗಿ ತಲುಪಿದೆ ಕೂಡ, ಜೊತೆಗೆ ಟಿಕೆಟ್ ಬೇರೆ ಸಿಕ್ಕಿತು. ಒಂದು ಸಣ್ಣ ವಿಶಿಲ್ ಹಾಕುತ್ತ ಒಳೆಗೆ ಹೋದೆ.

ಇಷ್ಟೆಲ್ಲಾ ಕಷ್ಟ ಪಟ್ಟಿದ್ದು ಎದ್ದೇಳು ಮಂಜುನಾಥ ಚಿತ್ರ ನೋಡೊಕ್ಕೆ. ಸುಮಾರು ೨ ವರುಶಗಳಿಂದ ಈ ಚಿತ್ರಕ್ಕೆ ಕಾಯುತ್ತ ಇದ್ದೆ, ಅದು ಮಠ ನೋಡಿದ ಮೇಲೆ ಮುಂದೆ ಗುರು-ಜಗ್ಗಿ ಯಾವ ಚಿತ್ರ ಬರುತ್ತದೆ ಅಂತ
ಕಾಯುತ್ತ ಕುಳಿತವರಲ್ಲಿ ನಾನು ಒಬ್ಬ. ಅದೂ ದಿನ ಕಳೆದ ಹಾಗೆ ನಿರೀಕ್ಷೆ ಹೆಚ್ಚಾಗೊತ್ತೆ, ಹಾಗೆ ಆಗಿ ನೋಡಿದ ಗಾಳಿಪಟ ಇಷ್ಟ ಆದರೆ, ಪ್ರೀತಿ ಯಾಕೆ ಭೂಮಿ ಮೇಲೆ ಇದೆ ಸಾಕಪ್ಪ ಸಾಕು ಅನಿಸಿತ್ತು.

ಹೆಸರೇ ಹೇಳುವ ಹಾಗೆ ಇದು ಮಂಜನ ಚಿತ್ರ, ಜಗ್ಗೇಶ್ ಅವರ ೨೫ನೇ ಚಿತ್ರ, ಅದ್ದರಿಂದ ಎಂದು ಕೊಡದ ಅಭಿನಯ ಕೊಟ್ಟಿರುತ್ತಾರೆ ಅಂತ ಅನಿಸುತ್ತ ಇತ್ತು. ಚಿತ್ರ ಶುರುವಾಗುವುದೇ ಯಜ್ಞಾ ಶೆಟ್ಟಿಯಿಂದ.
ಹಳೇ ಬಟ್ಟೆಯಲ್ಲಿ ಸೊರಗಿದ ಮುಖದಲ್ಲಿ ನನ್ನ ಗಂಡನನ್ನು ನೋಡಿದಿರಾ ಅಂತ ಎಲ್ಲಾ ಕಡೆ ಕೇಳುತ್ತ ಹೋಗುತ್ತಾಳೆ. ಮೊದಲ ಶಾಟಿನಲ್ಲೇ ಹಾಗೆ ಹುಡುಕುವ ಹೆಣ್ಣುಮಗಳ ಕಷ್ಟ ಮತ್ತೆ ಅನುಭವಿಸುವ ಮುಜುಗರ ತೋರಿಸಿದ್ದಾರೆ.
ಅಲ್ಲಿ ಅವಳು ಹುಡುಕುತ್ತ ಇದ್ದರೆ , ಇಲ್ಲಿ ನಾಯಕ ಗಾಂಧಿನಗರದ ಒಂದು ಲಾಡ್ಜನಲ್ಲಿ ಚೆನ್ನಾಗಿ ರಗ್ಗು ಹೊದ್ದುಕೊಂಡು ಮಲಗಿರುತ್ತಾನೆ..ಆಗ ಶುರುವಾಗುವುದೇ ಆರತಿ ಎತ್ತಿರೇ ಕಳ್ಳ ಮಂಜನಿಗೆ, ಸುಳ್ಳಮಂಜನಿಗೆ. ಮುತ್ತದೈಯರು ಈ ಶೋಬಾನೆ ಹಾಡು ಹಾಡುತ್ತ ಇದ್ದರೆ, ರಾಜನ ವೇಷದಲ್ಲಿ ಜಗ್ಗಿ ಬರುತ್ತಾರೆ. ಪ್ರತಿ ಸಾಲಿನಲ್ಲೂ ಅವನ ಕಲ್ಯಾಣ ಗುಣಗಳನ್ನು ಹೇಳುತ್ತ ಇದ್ದರೆ
ಜಗ್ಗಿ ಅದಕ್ಕೆ ತಕ್ಕ ಮುಖ ಅಭಿನಯ ಕೋಡುವುದೇ ನಗೆ ತರುತ್ತದೆ. ಆ ಹಾಡಿನಲ್ಲಿ ಅವನ intro ಬಹಳ ಚೆನ್ನಾಗಿ ತೋರಿಸಿದ್ದಾರೆ ಅನಿಸುತ್ತದೆ. ಅದರಲ್ಲೂ ಹಾಡಿನ ಕೊನೆಗೆ ಬರುವ ಸಾಲು " ರಾಜ್ಯ ಪ್ರಶಸ್ತಿ ವಂಚಿತ"
ಅನ್ನೊದು ಸರಿಯಾಗಿ ಹಾಕಿದ್ದರೆ. ಮಠ ಚಿತ್ರಕ್ಕೆ ಪ್ರಶಸ್ತಿ ಬರದೇ ಇರುವುದು ನಿಜಕ್ಕೂ ಮರುಕ ತರುತ್ತದೆ ಬಿಡಿ.




ಅವನನ್ನು ಎಬ್ಬಿಸಲು ಒಬ್ಬ ಕುರುಡ ಬರುತ್ತಾನೆ, ಮಠದಲ್ಲಿ quater ಪಾತ್ರ ಮಾಡಿದ್ದ ತಬಲಾ ನಾಣಿ ಎಂಟ್ರಿ ಕೊಡುತ್ತಾನೆ. ಒಬ್ಬರ ಒಬ್ಬರ ಪರಿಚಯ ಆಗಿ ತಬಲಾ ನಾಣಿ ತಾನು ಒಬ್ಬ ನಿರ್ದೇಶಕ , ನಿರ್ಮಾಪಕ ಮೋಸ
ಮಾಡಿ ಹೋಗಿದ್ದಾನೆ. ಲಾಡ್ಜ ದುಡ್ಡು ಕೊಡಲು ಆಗದೇ ಇಲ್ಲಿ ತಂದು ಹಾಕಿದ್ದಾರೆ ಅಂತ ಹೇಳುತ್ತಾನೆ. ಇವರಿಬ್ಬರೇ ಸಂಭಾಷಣೆಯೇ ಕಥೆಯನ್ನು ಮುಂದುವರೆಸಿಕೊಂಡು ಹೋಗುತ್ತದೆ.
ಒಬ್ಬೊಬ್ಬರು ಹೊಡೆಯುವ ಡೈಲಾಗ್ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತದೆ. ಕೆಲವು ಕಡೆ ಅರ್ಥ ಆಗಿ ನಗಬೇಕಾದರೆ ಸಮಯ ಹಿಡಿಸುತ್ತದೆ, ಹಾಗೆ ಇದೆ ಡಬಲ್ ಮೀನಿಂಗ. ಇನ್ನು ಕೆಲವು ಕಡೆ ಸೆನ್ಸಾರ್ ಆಗಿದೆ, ಅಯ್ಯೊ
ಮಿಸ್ ಆಯಿತಲ್ಲ ಅನಿಸುತ್ತದೆ. ಅದರಲ್ಲಿ ಒಂದು ಹೀಗಿದೆ ..

ಜಗ್ಗೇಶ್ ;- ನೀವು ಹಿರೋ ಅಂತ ಹೇಗೆ ಆಯ್ಕೆ ಮಾಡುತ್ತಿರಿ
ನಾಣಿ ;- ಎನಿಲ್ಲ ನಿಮ್ಮಂತವರ ಕೈನಲ್ಲಿ ಪೋಟೊ ತೊರಿಸುತ್ತಿವಿ
ಜಗ್ಗೇಶ್ ;- ತೋರಿಸಿ
ನಾಣಿ;- ನೀವು ನಾಲ್ಕು ಜನ ಆರಿಸಿದ ಫೋಟೊ ತೊಗೊತ್ತಿವಿ.
ಜಗ್ಗೇಶ್ ;- ಅದನ್ನೇ ಆರಿಸ್ತಿರಾ
ನಾಣಿ;- ಇಲ್ಲ ಅದನ್ನು ಬಿಟ್ಟು ಬೇರೆದನ್ನು ಮಾಡ್ತಿವಿ. ...ಹ್ಹಹಹಹ


ಚಿತ್ರಕಥೆಯಲ್ಲಿ ಇದೇ ರೀತಿ ನಗೆ ಬರೆಸುವ ಮಾತುಗಳು ಇವೆ, ಆ ಡೈಲಾಗಿನಲ್ಲಿ ದೇವೆಗೌಡ್ರು, ಯಡಿಯೂರಪ್ಪ, ಸಿದ್ದರಾಮಯ್ಯ, ಪ್ರಮಿಳಾ ನೇಸರ್ಗಿ ಹಾಸುಹೋಗುತ್ತಾರೆ. ಸಮಿಶ್ರ ಸರಕಾರ, ಸುವರ್ಣ ಕರ್ನಾಟಕ
ಕನ್ನಡ ಭಕ್ತಿ, ಪಕ್ಶಾಂತರ , ಮಾಟ ಮಂತ್ರ , ಶ್ರೀನಗರ ಕಿಟ್ಟಿ, ಹಾಯ್ ಬೆಂಗಳೂರು ಬರುತ್ತವೆ. ಅವುಗಳನ್ನು ಸರಿಯಾಗಿ ಬಳಸಿಕೊಂಡ ಕೀರ್ತಿ ಗುರುವಿಗೆ ಹೋಗುತ್ತದೆ.

ಮುಖ್ಯ ಕಥೆ ಜಗ್ಗೇಶ್ ಅಲಿಯಾಸ್ ಮಂಜನ ಹುಟ್ಟಿನಿಂದ ಶುರುವಾಗಿ ಅವನು ಲಾಡ್ಜಗೆ ಹೇಗೆ ಸೇರಿಕೊಂಡ ಅನ್ನೊ ತನಕ ಸಾಗುತ್ತದೆ. ಸೊಂಬೇರಿಗಳ ಲೀಡರ್ ಮತ್ತು ಪ್ರತಿ ಮನೆಯಲ್ಲಿ
ತನ್ನ ಹಾಗೆ ಇರುವ ಮಂಜನ ಕಥೆ ಎಂದು ಅದು ಸಾರುತ್ತದೆ. ಚಿಕ್ಕ ವಯಸ್ಸಿನಿಂದ ಸದಾ ಪೋಲಿ ಅಲೆದುಕೊಂಡು, ಅಪ್ಪ ಅಮ್ಮನಿಗೆ ಕಾಟ ಕೊಡುತ್ತ, ಎಲ್ಲಾ ದುಶ್ಚಟಗಳ ದಾಸನಾಗಿ ಗುಂಡಾಡಿ ಗುಂಡ ಆಗಿರುತ್ತಾನೆ.
ಇವನನ್ನು ಹೀಗೆ ಬಿಟ್ಟರೆ ಹಾಳಾಗುತ್ತಾನೆ ಅಂತ ಅವನ ಅಪ್ಪ ಅಮ್ಮ ಅವನಿಗೆ ಗಂಟು ಹಾಕುತ್ತಾರೆ. ೧೦X೧೨ ಒಂದು ಮನೆಯನ್ನು ವರದಕ್ಷಿಣೆ ಆಸೆಗಾಗು ಮದುವೆಯಾಗುತ್ತಾನೆ. ಅಲ್ಲಿಗೆ ಅವನ ಸಂಸಾರ ಆರಂಭ. ಸಂಸಾರ ಸಾಗಿಸಲು
ಹೆಂಡತಿ ಪಟ್ಟ ಪಾಡಿಲ್ಲ, ಇವನ ಊಟ ಉಪಚಾರ ಮಾಡಿ, ಗಾರ್ಮೆಂಟ್ಸನಲ್ಲಿ ಕೆಲಸ ಮಾಡಿಕೊಂಡು, ಅವನಿಗೆ ಮೂಡ್ ಬಂದರೆ ರಾತ್ರಿ ಸಹಕರಿಸುತ್ತ , ಇವನ ಎಲ್ಲಾ ಹುಚ್ಚಾಟಗಳನ್ನು ಸಹಿಸಿಕೊಂಡು ..
ಕಾರ್ಯೇಷು ದಾಸಿ, ಶಯನೇಶು ರಂಭ, ಕ್ಷಮಯಾಧರಿತ್ರಿ ಆಗಿರುತ್ತಾಳೆ. ಎಲ್ಲರ ಕೈ ಕಾಲು ಕಟ್ಟಿ ಇವನಿಗೆ ಕೆಲಸ ಕೊಡಿಸಿದರೆ ಈ ಪುಣ್ಯಾತ್ಮ ಒಂದೇ ದಿನದಲ್ಲಿ ಅಲ್ಲಿಂದ ಓಡಿ ಬರುತ್ತ ಇರುತ್ತಾನೆ.
ಒಟ್ಟಿನಲ್ಲಿ ಹೆಂಡತಿಯ ದುಡ್ಡು ಖರ್ಚು ಮಾಡುತ್ತ, ಮನೆ ಎದುರಿಗೆ ಇರುವ ಹುಡುಗಿಗೆ ಲೈನ್ ಹೊಡೆಯುತ್ತ, ಎಲ್ಲಾ ಕಡೆ ಸಾಲ ಮಾಡಿ, ರಾತ್ರಿ ಆದರೆ ಕಾರ್ಡ್ಸ ಮತ್ತು ಎಣ್ಣೆ ಹಾಕಿ ೨ ಗಂಟೆಗೆ ಬರುತ್ತ ಇರುತ್ತಾನೆ.
ಅವನ ಒಂದೇ ಆಸ್ತಿ ಎಂದರೆ ಅವನ ಮಾತು.

ಗುರು ಇದರಲ್ಲೂ ಉಪಕಥೆಯಲ್ಲೇ ಚಿತ್ರ ಕಥೆ ಹೇಳಿದ್ದಾರೆ, ಕಥೆ ಪ್ರಸ್ತುತದಿಂದ ಶುರು ಆಗಿ, ಫ್ಲಾಶಬ್ಯಾಕ್ ಮತ್ತು ಪ್ರಸ್ತುತಕ್ಕೆ ಗಿರಕಿ ಹೊಡೆಯುತ್ತ ಇರುತ್ತದೆ. ಇವನ ಕಥೆಯಲ್ಲಿ ಇವನ ಅಕ್ಷರಭ್ಯಾಸ, ಮನೆಬಿಟ್ಟುಹೋದ ಕಥೆ
ಇವನ ಅಜ್ಜಿ ಶೀತಕ್ಕೆ ಬ್ರಾಂದಿ ಅಂತ ಕೊಟ್ಟು ಹೇಗೆ ಕುಡುಕನ್ನಾಗಿ ಮಾಡುತ್ತಾರೆ, ಚಿಕ್ಕಪ್ಪನ ಸಹವಾಸ , ಮದುವೆ, ಮೊದಲರಾತ್ರಿ, ಇವನು ಮಾಡಿದ ಕೆಲಸಗಳು, ಹೆಂಡತಿಗೆ ಕೊಟ್ಟ ಕಾಟ. ಗೆಳೆಯರ ಜೊತೆ
ಕಳೆದ ರಸನಿಮಿಷಗಳು, ಅಪ್ಪನ ಸಾವು ಹೀಗೆ ನೂರೆಂಟು ಹೊಸ ಕಥೆ ಹೇಳುತ್ತ ಕಳೆಯುವಾಗ ಮಧ್ಯಂತರ ಆಗುತ್ತದೆ.

ಮಧ್ಯಂತರದಲ್ಲಿ ಇವನ ಹೆಂಡತಿ ಅಲ್ಲಿ ಇಲ್ಲಿ ಸಾಲ ಮಾಡಿ ಇವರಿಬ್ಬರನ್ನು ಬಿಡಿಸಿಕೊಂಡು ಹೊಗುತ್ತಾಳೆ. ಲಾಡ್ಜಿನಿಂದ ಕಥೆ ಮನೆಗೆ ಬರುತ್ತದೆ, ಮತ್ತೆ ಇವನ ಪ್ರವರ ಮುಂದುವರೆಯುತ್ತದೆ.ಹೀಗೆ ಸಾಗುವ ಕಥೆ
ಕ್ಲೈಮ್ಯಾಕ್ಸ್ ತಲುಪಿ ಮಂಜನಿಗೆ ಬುದ್ದಿಬರುವದರಲ್ಲಿ ೧೦ ಲೀಟರ್ ಕಣ್ಣಿರು ಹಾಕಿರುತ್ತಾಳೆ.ಅಲ್ಲಿಗೆ ಕಥೆ ಮುಗಿಯುತ್ತದೆ.

ಚಿತ್ರದ ಪ್ರಮುಖ ಅಂಶಗಳು ...

೧) ಜಗ್ಗೇಶ್- ಜಗ್ಗೇಶ್-ಜಗ್ಗೇಶ್
ನನ್ನ ಅನಿಸಿಕೆ ಪ್ರಕಾರ ಇದು ಜಗ್ಗೇಶಿನ the best performance ಅಂದರೆ ತಪ್ಪಾಗಲಾರದು.

೨) ಗುರು ನಿರ್ದೇಶನ

೩) ಚುರುಕು ಸಂಭಾಷಣೆ.

೪) ತಬ್ಲಾ ನಾಣಿ ನೈಜ ಅಭಿನಯ.

೫) ಹಾಡುಗಳು ಮತ್ತು ಸಂಗೀತ.

೬) ಜಗ್ಗೇಶ್ ಮುಖಾಭಿನಯ - ಇದು ಮಾತ್ರ ಜಗ್ಗಿ ಬಿಟ್ರೆ ಬೇರೆಯಾವ್ರು ಮಾಡಲು ಸಾಧ್ಯವಿಲ್ಲ.


ಗುರು ಸಂಭಾಷಣೆಯ ಒಂದು ಝಲಕ್ ಇಲ್ಲಿದೆ.

ಒಂದು ೨೫ ಎಕರೆಯಲ್ಲಿ ಬಾರ್ ತೆರೆದರೆ ಆ ಬಾರಿನಲ್ಲಿ ಬರುವ ವಿವಿಧ ಹೆಸರುಗಳು ಹೀಗಿವೆ.

* ರಾಜರೋಷವಾಗಿ ಎಣ್ಣೆ ಹೊಡೆಯುವರ ಸಲುವಾಗಿ,ಅವರ ಮನರಂಜನೆಗೆ ಲೈವಬ್ಯಾಂಡ್ ನಡೆಯುವ ಸ್ಥಳ - ದರ್ಬಾರ್
* ಕಾಲೇಜಿನಿಂದ ಆಚೆ ಬಂದಿರುವ ಹುಡುಗರಿಗೆ ಇರುವ ಒಂದು ರೂಮ್ - ಡಿಬಾರ್
* ಎಸಿ ಇರುವ ಒಂದು ಟಾಯ್ಲೆಟ್ - ಮಲ-ಬಾರ್
* ಕಾರಿನಲ್ಲಿ ಎಣ್ಣೆ ಹೊಡೆಯುವರಿಗೆ - ಕಾರೋಬಾರ್.

ಜಗ್ಗಿ ಅಭಿಮಾನಿಗಳು ಮಿಸ್ ಮಾಡದೇ ನೋಡಬೇಕಾದ ಚಿತ್ರ ಇದು..ಹಾಗೇ ಮತ್ತೆ ಮಠ-೨ ಗೆ ಮತ್ತೆ ೨ ವರುಶ ಕಾಯೋಣ ...