Thursday, April 27, 2006

ಬಿಸಿ-ಬಿಸಿ ಬೇಳೆ ಬಾತೊ - JXTA ತಂತ್ರಜ್ಞಾನವೋ

ಎನ್ರೀ, ಗೊಕುಲಾಷ್ಟಮಿಗೂ ಮತ್ತು ಇಮಾಮ್ ಸಾಬಿಗು ಎತ್ತಣದ ಸಂಬಂಧದ ಹಾಗೆ ಇದೆ ನಿಮ್ಮ ಬ್ಲಾಗ್ ಎಂದು ಮೂಗು ಮುರಿಯಬಹುದು. ನಾನು ಮೊದಲು ಹಾಗೆ ಅಂದು ಕೊಂಡೆ ಸ್ವಾಮಿ.

JXTA Java SE 2.3.7 release ಅನ್ನು "ಬಿಸಿಬೇಳೆ ಬಾತ್" ಎಂಬ ನಾಮದಲ್ಲಿ ಕರೆಯುತ್ತಾರೆ,ನಮ್ಮ ಬಾಳೆ ಎಲೆಯಲ್ಲಿ ಇರುವ ತಿಂಡಿ, ಯಾವಾಗ ಸಿಮೋಲ್ಲಂಘನ ಮಾಡಿತು ??.

ಇದು ಬಿಸಿಯಾದ ತಂತ್ರಜ್ಞಾನವಾದ್ದರಿಂದ ಇದಕ್ಕೆ ಬಿಸಿಬೇಳೆಬಾತ್ ಎಂದು ನಾಮಕರಣ ಮಾಡಿರಬಹುದು, ಇಲ್ಲಾ ಇದರ ರುಚಿಗೆ ಮಾರು ಹೋಗಿರುವ ನನ್ನಂತ ಅಭಿಮಾನಿ ಇದಕ್ಕೆ ಹೆಸರು ಸೂಚಿಸರಬಹುದು.

ಮುಂದೆ ಯಾವುದರ ಕೆಲ್ಸ ಮಾಡುತ್ತ ಇದ್ದೀಯಾ ಅಂತ ನಮ್ಮವರು ಕೇಳಿದರೆ "ಬಿಸಿಬೇಳೆ ಬಾತ್" ಅಂತ ಉತ್ತರ ಸಿಕ್ಕುತ್ತದೆ, ನಮ್ಮ ಹಿರಿಯರು ಸಾಫ್ಟವೇರ್‍ನಿಂದ ಯಾವಗ ಬಾಣಸಿಗನಾದ ಎಂಬ ಪ್ರಶ್ನೆಗೆ ಬಂದರೆ ಎನು ಮಾಡುವುದು ಎಂಬುದರ ಬಗ್ಗೆ ಹೆಸರು ಇಟ್ಟವರು ಯೋಚಿಸಿಲ್ಲ !!

buzyಯಾಗಿ ಇರುವ ನಿಮ್ಮ ಸಮಯದಲ್ಲಿ ಸ್ವಲ್ಪ ಸಮಯ ಮಾಡಿಕೊಂಡು ಬಿಸಿ-ಬಿಸಿಯಾಗು ಬೇಳೆ ಬಾತ್ ತಿಂದು ಬನ್ನಿ, ಹೇಗೆ ಮಾಡುವುದು ಅಂತ ನಿಮ್ಮ ಪ್ರಶ್ನೆಯಾದರೆ, ಇಗೋ ಇಲ್ಲಿದೆ ಲಿಂಕ್.

Wednesday, April 26, 2006

ಹೋರಾಟವೇ ಹೀಗೆ .....


ಕನ್ನಡಕ್ಕೆ ಹೋರಾಡಿದ ಅನೇಕ ಮಹನೀಯರು ನಮ್ಮ ಮುಂದೆ ಹಾಸು ಹೊಗಿದ್ದಾರೆ, ಆದರೆ ನಮ್ಮ ಕಣ್ಣಿಗೆ ಬೀಳುವುದುಕೇವಲ ಒಂದೆರೆಡು ನವೆಂಬರ್ ನಾಯಕರು ಆಷ್ಟೆ. ಆದರೆ ತೆರೆ-ಮರೆಯಲ್ಲಿ ಹೋರಾಟದಲ್ಲಿ ಪಾಲ್ಗೊಂಡು ಸೆರವಾಸ ಅನುಭವಿಸಿ,ಚಿತ್ರ-ವಿಚಿತ್ರ ಹಿಂಸೆಗಳನ್ನು ಅನುಭವಿಸಿ ಇವತ್ತಿಗೂ ಮತ್ತೆ ಹೋರಾಟಕ್ಕೆ ಅಣಿ ಆಗುವ ಹೋರಾಟಗಾರರಿಂದ ಇಂದು ಕನ್ನಡ ಉಳಿದಿದೆ. ನಮಗೆ ನಮ್ಮ ಕನ್ನಡ ಹೋರಾಟಗಳ ಬಗ್ಗೆ ಅರಿವಿಲ್ಲ, ಎಲ್ಲಾ ಕನ್ನಡ ಹೋರಾಟಗಾರರನ್ನು ನೋಡುವ ರೀತಿ ಇನ್ನು ಬದಲಾಗಿಲ್ಲ, ಇನ್ನು ನಮ್ಮ ಜನರ ದೃಷ್ಟಿಯಲ್ಲಿ ರೌಡಿಗಳು, ಗೂಂಡಾಗಳು ಅನ್ನುವ ಛಾಪು ನಿಂತಿದೆ.

ಇದಕ್ಕೆ ನಾನು ಹೊರತಲ್ಲ ಬಿಡಿ. ಇಲ್ಲಿಯವರೆಗೂ ಕನ್ನಡಿಗರು ಪಟ್ಟ ಕಷ್ಟ, ಇಟ್ಟ ಹೆಜ್ಜೆಯ ಅರಿವಿಲ್ಲದೆ ನಾವು ಒಂದು ತೀರ್ಮಾನಕ್ಕೆ ಬಂದಿರುತ್ತೆವೆ. ಯಾವುದೊ ದೇಶದ ಚರಿತ್ರೆಯನ್ನು ಕಲಿಸುವ ಈ ಶಿಕ್ಷಣ ವ್ಯವಸ್ಥೆ ನಮ್ಮ ರಾಜ್ಯ್ಸದ ಹೊರಾಟ-ಏಕೀಕರಣದ ಬಗ್ಗೆ ಚಕಾರ ಎತ್ತದಿರುವುದು ದುಃಖದ ಸಂಗತಿ. ಈ ವಿಷಯಗಳು ನಮಗೆ ತಿಳಿಯದೆ ನಮಗೆ ಹೋರಾಟದ ಬಗ್ಗೆ ಅರಿವು ಮೂಡುವದಿಲ್ಲ, ಹೋರಾಟಗಾರರ ಬಗ್ಗೆ ಗೌರವ ಬರುವದಿಲ್ಲ. ಹಿಂದೆ ಹೋರಾಡಿದ ಮಾ.ರಾಮಮುರ್ತಿ ಇತರರ ಕುಟುಂಬಗಳು ಇಂದಿಗೂ ಕಷ್ಟದಲ್ಲಿ ಇವೆ. ಮನೆಯಲ್ಲಿ ಮರ್ಯಾದೆ ಇರದೆ ಇವರು ಪಡುವ ಪಾಡು ನಿಜಕ್ಕೂ ಶೋಚನೀಯ. ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷ ‍ ಅಗುವುದು ಇಂದು ಕನ್ನಡಕ್ಕೆ ಕೈ ಎತ್ತು ನಿನ್ನ ಕೈಗೆ ಕೊಳ ಬೀಳುವುದುಅನ್ನುವ ಸ್ಥಿತಿಗೆ ಬಂದಿದೆ. ಹೀಗೆ ಸಾಲು ಸಾಲು ತೊಂದರೆ ಅನುಭವಿಸುವ ದಿನದ ಕೊನೆಗೆ ನನಗೆ ಎನು ಸಿಕ್ಕಿತು ಅಂತ ಅವಲೋಕನ ಮಾಡಿಕೊಂಡರೆ ಕಾಣುವುದು ಸುಳ್ಳು ಮುಕದ್ದಮೆ,ಜೈಲುವಾಸ ಅಷ್ತ್ಟೆನನ್ನ ಅನುಭವದಲ್ಲಿ ಕಂಡ ಹೋರಾಟಗಾರ ಬವಣೆ ಬಗ್ಗೆ ಬರೆದಿರುವ ಕವನವಿದು.




ಹೋರಾಟವೇ ಹೀಗೆ ...
ಬದುಕಿನ ಕತ್ತಲೆ ಓಡಿಸಿ,
ನ್ಯಾಯದ ಜ್ಯೋತಿಯ ಬೆಳಗಿಸಿ,
ಅನುಭವಿಸುವರು ಸೆರೆವಾಸ.
ಇವರ ಮನೆಯಲ್ಲಿ ಹೆಂಡತಿ ಮಕ್ಕಳಿಗೆ ಉಪವಾಸ೧


ಹೋರಾಟವೇ ಹೀಗೆ ...
ಮನೆ ಮಕ್ಕಳನ್ನು ಮರೆತು,
ದುಃಖ ದುಮ್ಮಾನದಲ್ಲಿ ಬೆರೆತು,
ತುಳಿಯುವರು ಕಲ್ಲುಮುಳ್ಳಿನ ಹಾದಿ.
ಎಲ್ಲಾ ಹೋರಾಟಗಳಿಗೂ ತ್ಯಾಗವೇ ಬುನಾದಿ೨

ಹೋರಾಟವೇ ಹೀಗೆ ...
ತಣ್ಣನೆ ಕೋಣೆಯಲ್ಲಿ ಕುಳಿತು,
ಬುದ್ಧಿಜೀವಿಗಳು ಆಡುವರು ಮಾತು,
ತೋಡಿ ಚುಚ್ಚು ಮಾತಿನ ಗುಂಡಿ,
ತಪ್ಪಿಸುವರು ಹೋರಾಟದ ಬಂಡಿ೩

ಹೋರಾಟವೇ ಹೀಗೆ ...
ಲಾಠಿ ಎಟುಗಳ ಲೆಕ್ಕಿಸದೆ,
ಹರಿಯುವ ನೆತ್ತರಿಗೆ ದೃತಿಗೆಡದೆ,
ಯಾರೊದೊ ಹಿತಕ್ಕೆ ಸವಿಸುತ್ತ ಬಾಳು,
ಅನುಭವಿಸುವರು ದಿನವೂ ಗೋಳು ೪

ಹೋರಾಟವೇ ಹೀಗೆ ...
ಇವರ ನೋವ ಕೇಳುವರಿಲ್ಲ,
ಇವರ ಬೆವರಾ ಒರೆಸುವರಿಲ್ಲ,
ಆದರೂ ಕಟ್ಟುವರು ಕನಸಿನ ಅರಮನೆ,
ಇವರ ನೊವುಗಳಿಗೆ ಇಲ್ಲಾ ಕೊನೆ೫

ಭಾರತ,ಹಿಂದಿ ಮತ್ತು ನಾವು.

"ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ" ಅಂತ ನಮ್ಮ ರಾಷ್ಟ್ರಕವಿ ಕುವೆಂಪು ಕವಿವಾಣಿ ಹೇಳಿರುವಂತೆ, ಕರ್ನಾಟಕ ಭಾರತ ಒಂದು ಅಂಗ ಎಂದು ಪ್ರತಿಪಾದಿಸುವ ರಾಷ್ಟ್ರೈಕತೆಯನ್ನು ಸಾರುವ ಸಾಲುಗಳು. ಇದನ್ನು ನಾವು ನಮ್ಮ ಪ್ರಾರ್ಥಮಿಕ ಶಾಲೆಯಲ್ಲಿ ಬಾಯಿಪಾಠ ಮಾಡಿ ಅದರ ಆರ್ಥ ನಮ್ಮ ಮನದಲ್ಲಿ ಅಚ್ಚಾಗಿದೆ.
ಆದರೆ ನನಗೆ ಆಗಾಗ ಅನಿಸುತ್ತಿತ್ತು ಒಂದೇ ವಿಷಯ, ಭಾರತ ಕಲ್ಪನೆ ಯಾವಾಗ ಆಯಿತು, ಅದಕ್ಕೆ ಆ ಹೆಸರು ಬರಲು ಕಾರಣವೇನು?
ಈ ಪ್ರಶ್ನೆ ನಾನು ಹಿರಿಯರ ಮುಂದೆ ಇಲ್ಲಾ ಗುರುಗಳ ಮುಂದೆ ಇಟ್ಟಾಗ ನನಗೆ ಸಿಕ್ಕ ಉತ್ತರ " ಆ ಕಲ್ಪನೆ ಶತಮಾನಗಳಿಂದ
ಇದೆ, ಭರತನಿಂದ ಭಾರತ ಅಂತ ಹೆಸರು ಬಂದಿತು" ಅನ್ನುವ ಉತ್ತರ ಅನೇಕ ಕಡೆಗಳಿಂದ ಕೇಳಿಬಂದಿತು.
ಇದು ಎಷ್ಟರ ಮಟ್ಟಿಗೆ ಸರಿ ಅಂತ ಆತ್ಮಾವಲೋಕನ ಮಾಡಿದಾಗ ನಮಗೆ ಕಂಡು ಬರುವ ಕುತೂಹಲ ಅಂಶಗಳು ಕೆಲವು.

ಭರತನಿಂದ ಭಾರತವೇ ??
ಇದು ನನಗೆ ಅನೇಕ ಬಾರಿ ಕಾಡಿದ ಪ್ರಶ್ನೆ, ಈ ಒಂದು ದೇಶದ ಕಲ್ಪನೆಯನ್ನು ಭರತನು ನಮಗೆ ಕೊಟ್ಟಿದ್ದನೆ, ಕಾಲಕ್ರಮೇಣ ಅದು ಮರೆಯಾಯಿತೆ ಅಂತ ಪ್ರಶ್ನೆಗಳು ಉಧ್ಭವಿಸುತ್ತಲೆ ಇದೆ. ನಮ್ಮ ಇತಿಹಾಸದಲ್ಲಿ ನಮ್ಮನ್ನು ಆಳಿದ(!!!) ೩ ಜನ ಭರತರು ನಮ್ಮ ಕಣ್ಣಿಗೆ ಬೀಳುತ್ತಾರೆ.

೧) ರಾಮನ ತಮ್ಮ ಭರತ:-
ಇವನು ರಾಮ ವನವಾಸಕ್ಕೆ ಹೋದಾಗ, ರಾಜ್ಯಭಾರ ಮಾಡಿದ. ರಾಮನ ಪಾದುಕೆಯನ್ನು ಸಿಂಹಾಸನದ ಮೇಲೆ ಇಟ್ಟು ಆಡಳಿತ ನಡೆಸಿದ. ಇವನ ಆಳ್ವಿಕೆಯಲ್ಲಿ ಒಂದು ಹಿಡಿತ ಇರಲಿಲ್ಲ, ಅಯೋಧ್ಯೆ ಬಿಟ್ಟು ಇವನ ರಾಜ್ಯ ಮುಂದೆ ಹೋಗಲಿಲ್ಲ. ಅದ್ದರಿಂದ ಇವನು ಭೌಗೋಳಿಕ ಭಾರತವನ್ನು ಆಳಿದ ಅನ್ನುವದರಲ್ಲಿ ಅರ್ಥವೇ ಇಲ್ಲ.

೨) ದುಶ್ಯಂತೆ-ಶಕುಂತಲೆಯ ಮಗ ಭರತ:-
ಇವನು ಅಷ್ಟೆ, ಭೌಗೋಳಿಕ ಭಾರತವನ್ನು ಆಳಿದ ಉದಾಹರಣೆ ಎಲ್ಲಿಯೂ ಸಿಗುವದಿಲ್ಲ,
ಅದ್ದರಿಂದ ಇವನು ಭೌಗೋಳಿಕ ಭಾರತವನ್ನು ಆಳಿದ ಅನ್ನುವದರಲ್ಲಿ ಅರ್ಥವೇ ಇಲ್ಲ.

೩) ಬಾಹುಬಲಿ ಸಹೋದರ ಭರತ:- ಇವನಿಗೆ ಇವನ ತಂದೆ ಅಯೊಧ್ಯೆ ಕೊಟ್ಟರು, ಇವನು ಚಕ್ರವರ್ತಿ ಆಗಬೇಕೆಂಬ ಇಚ್ಚೆಯಲ್ಲಿ ಇವನ ತಮ್ಮ ಬಾಹುಬಲಿ ಜೊತೆ ಯುದ್ದ ಮಾಡಿ ಸೋತ. ಅದ್ದರಿಂದ ಇವನು ಭೌಗೋಳಿಕ ಭಾರತವನ್ನು ಆಳಿದ ಅನ್ನುವದರಲ್ಲಿ ಅರ್ಥವೇ ಇಲ್ಲ.

ಹಾಗಿದ್ದರೆ ನಮ್ಮನ್ನು ಒಬ್ಬರು ಆಳಿಲ್ಲ ಅಂತ ಸ್ವಪ್ಟವಾಗುತ್ತದೆ, ಇದನ್ನು ಪ್ರತಿಪಾದಿಸುವದಕ್ಕೆ ಹಿಂದೆ 56 ರಾಜ್ಯಗಳು(ಅಂಗ,ವಂಗ,ಕಳಿಂಗ,ಕಾಂಭೊಜ ..ಇತ್ಯಾದಿ) ಇದ್ದವು, ಪ್ರತಿ ರಾಜ್ಯಗಳಲ್ಲೂ ಅದರದೇ ಸಂಸ್ಕೃತಿ,ಭಾಷೆ,ಪದ್ಧತಿಗಳು ಇದ್ದವು.
ಅದೇ ನಿಟ್ಟಿನಲ್ಲಿ ಇಂದು ೨೮ ರಾಜ್ಯಗಳಾಗಿ ಇವೆ. ಅಂದರೆ ಒಂದು ದೇಶ,ಒಂದು ಭಾಷೆ, ಒಂದು ಸಂಸ್ಕೃತಿಯನ್ನು ನಮ್ಮ ಸಂಯುಕ್ತ ರಾಜ್ಯಗಳ ಈ ಒಕ್ಕೂಟ ಎಂದು ಹೊಂದಿರಲಿಲ್ಲ ಎಂಬುದು ಸ್ವ್ಪಷ್ಟವಾಗುತ್ತದೆ.

ಹಾಗಿದ್ದರೆ ನಾವು ಎಕೀಕರಣಗೊಳ್ಳಲು ಕಾರಣವೇನು??
ಉತ್ತರ ಬಹಳ ಸುಲಭ, ನಮ್ಮನ್ನು ಆಳಿದ ಬ್ರಿಟಿಷರಿಗೆ ಆ ಕೀರ್ತಿ ಹೋಗುತ್ತದೆ. ನನ್ನ ಶತ್ರುವಿನ ಶತ್ರು ನನ್ನ ಮಿತ್ರ ಅನ್ನುವ ಹಾಗೆ ಈ ೧೦೦+ ರಾಜ್ಯಗಳ ದೊರೆಗಳಿಗೂ ಮತ್ತು ಅಲ್ಲಿನ ಪ್ರಜೆಗಳಿಗೂ ಬ್ರಿಟಿಷರೂ ಸಾಮನ್ಯ ಶತ್ರು ಆಗಿದ್ದರೂ. ಒಬ್ಬರೆ ಎದುರಿಸಲು ಆಗದ ಕಾರಣ ನಮ್ಮಲ್ಲಿ ಒಂದು ಮೂಡುವ ಕಲ್ಪನೆ ಬಂದಿತು.ಅದು ಕೂಡ ಬ್ರಿಟಿಷರನ್ನು ಒಡಿಸಿ ಸ್ವಾತಂತ್ರ್ಯವನ್ನು ಪಡೆಯಲು ಮಾತ್ರ. ಒಂದು ಭಾಷೆ,ಒಂದು ಸಂಸ್ಕೃತಿಯ ಕಲ್ಪನೆ ಕೂಡ ಇರಲಿಲ್ಲ.
ನಮ್ಮನ್ನು ಬ್ರಿಟಿಷರು ಆಳದೆ ಇದ್ದಿದ್ದರೆ ಭಾರತ ಇಂದು ಯುರೋಪ್ ತರ ಒಂದು ಖಂಡವಾಗಿ ಇರುತ್ತಿತ್ತು.

ಸಂವಿಧಾನ ಹೇಳುವದು ಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ. ನಮ್ಮ ದೇಶವನ್ನು ಚೀನಾ,ಜಪಾನ್ ಜೊತೆ ಹೊಲಿಸಿಕೊಂಡು ಒಂದು ಭಾಷೆ,ಒಂದು ಸಂಸ್ಕುತಿಯನ್ನು ಹೇರುವುದು ನಿಜಕ್ಕೂ ಅಪರಾಧ. ಇದನ್ನು ಯುರೋಪ್ ಜೊತೆ ಹೊಲಿಸುವುದು ನಿಜವಾದ ಮಾರ್ಗ. ಅಲ್ಲಿ ಕೂಡ ೧೦೦km ವ್ಪಾಪ್ತಿಯಲ್ಲಿ ಬೇರೆ ದೇಶ ಸಿಗುತ್ತದೆ, ಅಲ್ಲಿ ಬೇರೆ ಭಾಷೆ, ಬೇರೆ ಸಂಸ್ಕುತಿ ಕಾಣಬರುತ್ತದೆ.

ಕೇವಲ ಹಿಂದಿ ನಮ್ಮ ರಾಷ್ತ್ರಭಾಷೆಯೇ ??
ಇಂದಿನ ಹಿಂದಿಯ ಮೂಲ ಹುಡುಕುತ್ತ ಹೊರಟರೆ ಮುಸ್ಲಿಂ ರಾಜರ ಕಾಲಕ್ಕೆ ತಲಪುತ್ತೆವೆ. ಅಂದು ಆಳಿದ ಪರ್ಸಿಯನ್ ದೊರೆಗಳು ಆಡುತಿದ್ದ ಭಾಷೆಯ ಹೆಸರು "ದಖನಿ"(ಅವರು ಆಳಿದ್ದ ದಖನ್ ಪ್ರಸ್ಥಭೂಮಿಯಿಂದ ಆ ಹೆಸರು ಬಂದಿರಬಹುದು). ಇದು ಪರ್ಸಿಯನ್ ಮತ್ತು ಅರೇಬಿಕ್ ಮಿಶ್ರಣ. ರಾಜರು ಆ ಭಾಷೆ ಬಳಸಿದರೆ ಅವರ ಪ್ರಜೆಗಳು ರಾಜರ ಜೊತೆ ಮಾತಾಡಲು ಒಂದು ಭಾಷೆ ಹುಟ್ಟಿತು ಆದೇ ಹಿಂದ್ವಿ. ಅಂದಿನ ಹಿಂದ್ವಿಯೇ ಇಂದಿನ ಹಿಂದಿ, ಮತ್ತು ಅಂದಿನ ದಖನಿಯೇ ಇಂದಿನ ಉರ್ದು.
ಉತ್ತರ ಭಾರತದ ಬುದ್ದಿವಂತ ರಾಜಕರಣೀಗಳು ಅಲ್ಲಿ ಇದ್ದ ಅನೇಕ ಭಾಷೆಗಳನ್ನು ಹಿಂದಿ ಪ್ರಭೇದಕ್ಕೆ ಸೇರಿಸಿದರು, ಅಲ್ಲಿಗೆ 13 ವಿವಿಧ ಭಾಷೆಗಳು(ಮೈತಿಲಿ,ಡೊಗ್ರಿ,ರಾಜಸ್ಥಾನಿ,ಕ್ರಿಬೊಲಿ,ಬ್ರಜ್,ಪಂಜಾಬಿ) ಹಿಂದಿಯೆಂದೆ ಅನಿಸಿಕೊಂಡವು ಮತ್ತು ಭಾರತ ೪೬% ಜನ ಹಿಂದಿ ಬಲ್ಲವರು ಅಂತ ಆಗಿನ ಕೇಂದ್ರ ಸರ್ಕಾರ ಹಕ್ಕು ಸ್ಥಾಪಿಸಿತು. ಮತ್ತು ಅದಕ್ಕೆ "ರಾಜಭಾಷ(official language)" ಸ್ಥಾನಮಾನ ಸಿಕ್ಕಿತು. ಅಂದರೆ ಕೇಂದ್ರ ಸರ್ಕಾರದ ಜೊತೆ ರಾಜ್ಯ ಸರ್ಕಾರಗಳು ಸಂಪರ್ಕ ಮತ್ತು ವ್ಯವಹಾರ ಮಾಡಲು ಹಿಂದಿ ಅಥಾವ ಆಂಗ್ಲ ಭಾಷೆಯನ್ನು ಬಳಿಸಬಹುದು. ಈ ನಿಟ್ಟಿನಲ್ಲಿ ಹಿಂದಿಯನ್ನು ಉತ್ತರ ಭಾರತದ ರಾಜ್ಯಗಳು ಆರಿಸಿಕೊಂಡವು, ಆಂಗ್ಲವನ್ನು ದಕ್ಷಿಣ ಭಾರತ ರಾಜ್ಯಗಳು ಆರಿಸಿದವು. ಇದಕ್ಕೆ ಪ್ರತಿಯಾಗಿ "ಹಿಂದಿಗೆ ವಿಶೇಷ ಸ್ಥಾನಮಾನ ಕೊಟ್ಟು ದಕ್ಷಿಣ ಭಾರತ ರಾಜ್ಯಗಳಲ್ಲಿ ಹಿಂದಿ ಹೇರಲು ಕೇಂದ್ರ ಸರ್ಕಾರ ಶಿಕ್ಷಣದಲ್ಲಿ ಹಿಂದಿ ಕಡ್ಡಾಯ ಮಾಡಿತು ಜೊತೆಗೆ ಹಿಂದಿ ಪ್ರಚಾರ ಸಭಾ ನಡೆಸಿ, ಜನರನ್ನು ತನ್ನತ್ತ ಅಕರ್ಷಿಸಿತು.

ಕನ್ನಡಿಗರೂ ಮತ್ತು ಹಿಂದಿ.
ಕನ್ನದಿಗರೂ ಹಿಂದಿಯ ಬಗ್ಗೆ ವಿಶೇಷ ಅಭಿಮಾನ ಕೊಟ್ಟಿದ್ದಾರೆ, ಇದಕ್ಕೆ ನನಗೆ ಅನಿಸುವ ಕಾರಣಗಳು ೨.

೧) ತಮಿಳರ ಮೇಲಿನ ದ್ವೇಷ :- ಶತಮಾನಗಳಿಂದಲೂ ನಮಗೂ ಮತ್ತು ತಮಿಳರಿಗೆ ದಕ್ಷಿಣ ಭಾರತ ಮೇಲೆ ಪ್ರಾಭಲ್ಯ ಸಾಧಿಸಲು ಅನೇಕ ಯುದ್ದ ನಡೆದವು. ಪಲ್ಲವರ ವಿರುದ್ದ ದಂಗೆ ಎದ್ದು ಕದಂಬ ವಂಶ ಕಟ್ಟಿದ ವಿಪ್ರ ಮಯೂರ ವರ್ಮ ನಮ್ಮ ಅಚ್ಚು ಮೆಚ್ಚಿನ ರಾಜ ಅಲ್ಲವೇ?. ಹೀಗೆ ನಮ್ಮಲ್ಲಿ ನಮ್ಮ ಜೀನ್‍ಗಳಲ್ಲಿ ತಮಿಳರ ಬಗ್ಗೆ ಒಂದು ರೀತಿಯ ಜಿದ್ದು ಬಂದು ಬಿಟ್ಟಿತ್ತು. ಸ್ವಾತಂತ್ರ್ಯದ ನಂತರ ಬೆಂಗಳೂರು ತಮಿಳರ ಆಳ್ವಿಕೆಯಲ್ಲಿ ಇತ್ತು. ಕನ್ನಡಿಗ ಮತ್ತು ತಮಿಳರ ನಡುವೆ ವರ್ಗ ಸಂಘರ್ಷ ನಡೆಯುತ್ತಲೆ ಇತ್ತು. ಆಗಲೇ ಹಿಂದಿ ಕಾವು ಶುರುವಾಗಿದ್ದು, ಹಿಂದಿ ಹೇರಿಕೆಯನ್ನು ತಮಿಳರು ವಿರೋಧಿಸಿದರು, ನಾವು ಅವರು ಮಾಡಿದ್ದನು ವಿರೋಧಿಸುವ ಬರದಲ್ಲಿ ಹಿಂದಿಯನ್ನು ತಲೆ ಮೇಲೆ ಸವಾರಿ ಮಾಡಿದೆವು. ಅವರು ಯಾಕೆ ವಿರೋಧಿಸಿದರು ಅಂತ ಆರ್ಥ ಮಾಡಿಕೊಳ್ಳದೇ ಒಂದು ದೊಡ್ಡ ತಪ್ಪು ಎಸೆಗಿದೆವು.
ಒಂದು ರೀತಿಯಲ್ಲಿ ತಮಿಳರನ್ನು ಸೋಲಿಸುವ ಬರದಲ್ಲಿ ಇನ್ನೊಂದು ಮಾರಿಯನ್ನು ಮೈ ಮೇಲೆ ಹಾಕಿಕೊಂಡೆವು.


೨) ಗಾಂಧಿ ಪ್ರಭಾವ :- ಹಿಂದೂಸ್ಥಾನಿಯ ಭಾಷೆ ಹಿಂದಿಯಾಗಿರಬೇಕು, ಅದನ್ನು ಎಲ್ಲಾ ಭಾರತೀಯರು ಕಲಿಯಬೇಕು ಅಂತ ಫರ್ಮಾನು ಕೊಟ್ಟಾಗ, ಅದನ್ನೆ ಆಶೀರ್ವಚನ ಎಂದು ಭಾವಿಸಿ ಹಿಂದಿ ಕಲಿಯುವ ಹುಚ್ಚಿಗೆ ಕೈ ಹಾಕಿದೆವು. ಹಿಂದಿ ಕಲಿಯದವನೂ ದೇಶಪ್ರೇಮಿಯಲ್ಲ ಅಂತ ತಮಿಳರ ಮೇಲೆ ಆಕ್ರಮಣ ಮಾಡಿ, ನಮ್ಮ ಘೋರಿಗೆ ನಾವೇ ಅಡಿಪಾಯ ಹಾಕಿಕೊಂಡೆವು. ನಮ್ಮ ಭಾಷೆಗಿಂತ ಹಿಂದಿ ಉತ್ತಮ ಅನ್ನುವ ಮರೀಚಿಕೆಗೆ ಬಂದು, ಹಿಂದಿಯ ಎಲ್ಲಾ ವಿಷಯಗಳು ಅಪ್ಯ ಅನಿಸಿ, ನಮ್ಮ ಭಾಷೆಯ ಎಲ್ಲಾ ವಿಷಯಗಳು ನಮಗೆ ಗೌಣವೆನಿಸಿ ನಮ್ಮ ಕೀಳೆರಿಮೆಯ ಗಿಡಕ್ಕೆ ದಿನೇ ದಿನೇ ನೀರು ಹಾಕುತ್ತ ಬಂದಿದ್ದೇವೆ. ಇಂದು ಅದು ಹೆಮ್ಮರವಾಗಿ ನಮ್ಮ ಭಾಷೆಯ ಮೇಲೆ ಸವಾರಿ ಮಾಡುತ್ತ ಇದ್ದರೂ ನಾವು ಮೂಕಪ್ರೇಕ್ಷಕರಾಗಿ ನೋಡುತ್ತ ಇದ್ದೆವೆ.









Monday, April 24, 2006

ಡಾ||ರಾಜ್‍ಗೆ ನಮನ

ನಮ್ಮಲ್ಲಿ ಕನ್ನಡದ ಕಿಚ್ಚನ್ನು ತಂದ ನಮ್ಮ ಅಣ್ಣ ಇವತ್ತು ಬದುಕಿದ್ದರೆ ೭೮ ವರ್ಷ ವಯಸ್ಸಾಗುತ್ತ ಇತ್ತು, ಅದರೆ ಅವರು ನಮ್ಮನ್ನು ಬಿಟ್ಟಿ ಅಗಲಿರುವ ಸಂಗತಿಯನ್ನು ಮನವು ಒಪ್ಪಿಕೊಳ್ಳುವದಿಲ್ಲ, ನಮ್ಮ ಮನದಲ್ಲಿ ಖಾಯಂ ಆಗಿ ಇರುವ ಮಹಾನ್ ಚೇತನಕ್ಕೆ ಇಂದು ಪ್ರತಿಯೊಬ್ಬ ಕನ್ನಡಿಗನು ಕನ್ನಡ ಸೇವೆ ಮಾಡುವ ಮೂಲಕ ನಿಜವಾದ ಶ್ರದ್ಧಾಂಜಲಿ ಕೊಡಬೇಕಾಗಿದೆ.

ನಾನು ಕನ್ನಡಿಗ, ನನ್ನ ಭಾಷೆಗೆ ಹೋರಾಡುವುದು ನಮ್ಮ ಹಕ್ಕು ಎಂದು ಪ್ರತಿಪಾದಿಸಿ ಅದನ್ನು ನಮ್ಮ ವೀರ ಅರಸುಗಳ ಚಿತ್ರಗಳ ಮೂಲಕ ನಮಗೆ ತೊರಿಸಿ ನಮ್ಮಲ್ಲಿ ಸತ್ತಂತೆ ಇದ್ದ ಆತ್ಮಸ್ಥೈರ್ಯವನ್ನು ತುಂಬಿದ್ದು . ಭಾಷೆಯ ವಿಷಯಕ್ಕೆ ಬಂದಾಗ ಯಾವ ನಟನು ಮಾಡಿರದ ಕೆಲಸವನ್ನು ನಮ್ಮ ಅಣ್ಣ ಮಾಡಿದ್ದಾರೆ. ಸುಮ್ಮನೆ ಚಿತ್ರದಲ್ಲಿ ಕನ್ನಡ ಭಾವುಟ ಹಾರಿಸಿ, ಕನ್ನಡವೇ ನಮ್ಮ ಅಮ್ಮ" ಅಂತ ಬುರುಡೆ ಬಿಡುವ ನಾಯಕರಿಂದ ಹೆಚ್ಚು ಅಪೇಕ್ಷೆ ಮಾಡಲಾಗದ ಈ ಕಾಲದಲ್ಲಿ ಸ್ಪಂದಿಸಿ ಅದಕ್ಕೆ ಜೀವ ಕೊಟ್ಟಿದ್ದು ಕೇವಲ ಡಾರಾಜ್.

ಗೋಕಾಕ್ ಚಳುವಳಿಯ ಸಮಯದಲ್ಲಿ ಲಕ್ಷಾಂತರ ಕನ್ನಡಿಗರನ್ನು ಉದ್ದೇಶಿಸಿ ಅವರು ಆಡಿದ ಮಾತುಗಳು ಮತ್ತು ಹರಿಸಿದ ಕಣ್ಣೀರಿಗೆ ಅಂದಿನ ಗುಂಡುರಾವ್ ಸರಕಾರ ಕೊಚ್ಚಿ ಹೊಗಿದ್ಧು ಇತಿಹಾಸ.

ಕೇವಲ ಒಂದು ಗಂಟೆ ಕನ್ನಡ ಕಾರ್ಯಕ್ರಮಗಳು ಮೀಸಲು ಇರುವಾಗ, ಉರ್ದು ವಾರ್ತೆಗೆ ೧೦ ನಿಮಿಷ ಕೊಟ್ಟು ಕನ್ನಡಕ್ಕೆ ಧಕ್ಕೆ ತಂದ ನಿರ್ದೆಶಕ ಹಕ್ ಕ್ರಮವನ್ನು ಖಂಡಿಸಿ ಚಳುವಳಿ ಆರಂಭವಾದಗ, ಡಾರಾಜ್ ಅವರು ಹೇಳಿದ ಒಂದು ಮಾತಿಗೆ ಮೊಯ್ಲಿ ಸರಕಾರ ನಡುಗಿ ತಾಂತ್ರಿಕ ದೊಷಗಳಿಂದ ನಿಲ್ಲಿಸಿ , ಕನ್ನಡ ವಿರೊಧಿ ಹಕ್ ವರ್ಗವಣೆ ಮಾಡಿದ್ದು ಅವರ ಶಕ್ತಿಯನ್ನು ತೋರಿಸುತ್ತದೆ.

Sword of Tippu Sultan ಕನ್ನಡಕ್ಕೆ ಡಬ್ ಮಾಡಲು ಸಂಜಯ್ ಖಾನ್ ಹೋದಾಗ ಅದನ್ನು ನಿಲ್ಲಿಸಿ ಅನೇಕ ಕಿರುತೆರೆಯನ್ನು ನಂಬಿದ್ದ ಜೀವಗಳನ್ನು ಉಳಿಸಿದ್ದು ನಮ್ಮ ರಾಜ್.

ಹೀಗೆ ಡಾರಾಜ್ ಕನ್ನಡ ಸಮಸ್ಯೆ ಎಷ್ಟೆ ಚಿಕ್ಕದಾದರೂ ಅದಕ್ಕೆ ಸ್ಪಂದಿಸಿ ಅದಕ್ಕೆ ಜಯ ತಂದು ಕೊಟ್ಟಿದ್ದಾರೆ, ಇವರ ನಿಷ್ಠೆ ಮತ್ತು ಆದರ್ಶ ನಮ್ಮ ಇಂದಿನ ಪೀಳಿಗೆಗೆ ಮಾದರಿ.

ಇಂದು ಕರ್ನಾಟಕದಲ್ಲಿ ಯಾವ ಹುಡುನನ್ನು ಕರೆದು ಮಿಮಿಕ್ರಿ ಮಾಡು ಅಂದರೆ ಮೊದಲು ಮಾಡುವುದು ನಮ್ಮ ಅಣ್ಣ ಅವರ ಅಣಿಮುತ್ತುಗಳನ್ನು, ಇದರಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಮಿಮಿಕ್ರಿ ಮಾಡುವಾಗ ನಾವು ಅವರ ಭಾವನೆಗಳನ್ನು ನಮ್ಮಲ್ಲಿ ಬರಸಿಕೊಂಡು ಮಾಡಬೇಕು. ನೋಡಿ ನಮ್ಮಲ್ಲಿ ನಮಗೆ ಗೊತ್ತಿಲ್ಲದ ಹಾಗೆ ಡಾರಾಜ್ ಹಾಸುಹೊಕ್ಕಿದ್ದಾರೆ.

ಅವರ ಹಾಗೆ ಶುದ್ಧ ಕನ್ನಡವನ್ನು ನಮ್ಮ ದೈನಂದಿನ ಕೆಲಸಗಳಲ್ಲಿ ಬಳಸುತ್ತ, ಕನ್ನಡದ ಸಮಸ್ಯೆ ನಮ್ಮ ಸಮಸ್ಯೆ,ಅದಕ್ಕೆ ಪರಿಹಾರ ನಾವೇ ಕಂಡು ಹಿಡಿಯಬೇಕು ಎಂಬ ಸಂಕಲ್ಪದೊಂದಿಗೆ ಮಾಡುವ ಕನ್ನಡ ಕೆಲಸವೇ ಅವರಿಗೆ ನಾವು ತೋರಿಸುವ ನಿಜವಾದ
ಶ್ರದ್ಧಾಂಜಲಿ.

Friday, April 21, 2006

ಗೋತ್ರ ನೋಡುವುದು ಸರಿಯೇ??

ಗೋತ್ರ ನೋಡುವುದು ಸರಿಯೇ??
ಹುಡುಗ/ಹುಡುಗಿ ಮದುವೆಯ ವಯಸ್ಸಿಗೆ ಬಂದರೆ ಇಲ್ಲಾ ಮನೆಯಲ್ಲಿ ವದು-ವರ ಬೇಟೆ ಶುರುವಾದರೆ ಸಾಕು, ದೂಳು ಹಿಡಿದಿರುವ ಜಾತಕ ಅಟ್ಟದಿಂದ ಆಚೆ ಬರುತ್ತದೆ,
ಎತ್ತದ,ಓದು, ಕೆಲಸ,ಗೊತ್ರ ಮತ್ತು ನಕ್ಷತ್ರಗಳು ತಂದೆ ತಾಯಿಗಳಿಗೆ ಕಂಠಪಾಠವಾಗುತ್ತದೆ.

ಇನ್ನೂ ಸಂಬಂಧಗಳು ಬರಲು ಶುರುವಾದರೆ ಮೊದಲು ಕೇಳುವ ಪ್ರಶ್ನೆ ನಿಮ್ಮ ಗೋತ್ರ ಯಾವುದು ??
ಆ ಉತ್ತರದ ಮೇಲೆಯೇ ಮುಂದಿನ ಸಂಭಾಷಣೆ ನಡೆಯುತ್ತದೆ. ಹಾಗಿದ್ದರೆ ಈ ಗೋತ್ರ ಅಷ್ಟು ಮುಖ್ಯವೇ ??

ಮೊದಲಿಗೆ ಗೋತ್ರ ಯಾಕೆ ನೊಡುತ್ತಾರೆ ಎಂದು ತಿಳಿಯೊಣ.
ಈ ಪ್ರಶ್ನೆಯನ್ನು ತಂದೆ-ತಾಯಿ ಇಲ್ಲಾ ಹಿರಿಯರಿಗೆ ಕೇಳಿದರೆ ಸಾಕು, ಉತ್ತರ ರೆಡಿ ಇರೊತ್ತೆ. ಅವುಗಳಲ್ಲಿ ಕೆಲವು ಸಾಮನ್ಯ ಉತ್ತರಗಳು.
" ಅದು ನಮ್ಮ ಸಂಪ್ರದಾಯ" - ಅವರಿಗೆ ಉತ್ತರ ಗೊತ್ತಿರುವದಿಲ್ಲ, ಅಜ್ಜ ಹಾಕಿದ ಆಲದ ಮರಕ್ಕೆ ಜೊತು ಬೀಳಿ ಅಂತ indirect ಆಗಿ ಹೇಳುತ್ತಾರೆ.

" ನೊಡಪ್ಪಾ ನಮ್ಮ ಹಿರಿಯರು ಅಷ್ಟು ಮೂರ್ಖರಲ್ಲ, ಪ್ರತಿಯೊಂದಕ್ಕು ಒಂದು ರೀತಿ -ರಿವಾಜು ಅಂತ ಮಾಡಿರುತ್ತಾರೆ. ಗೋತ್ರ ನೊಡುವ ಉದ್ದೇಶ ಏನು ಅಂದರೆ
ಸ-ಗೋತ್ರದವರು ರಕ್ತ ಸಂಬಂಧಿ ಆಗುತ್ತಾರೆ, ಅಣ್ಣ-ತಂಗಿ ಸಂಬಂಧವನ್ನು ತಪ್ಪಿಸಲು ಇದು ಅವಶ್ಯ ಅಂತ" ಒಳ್ಳೆ discovery of India ಮಾಡಿದ ಹಾಗೆ
ಹೇಳಿ ಬಾಯಿ ಮುಚ್ಚಿಸುತ್ತಾರೆ.

ಆಯಿತು ನಮ್ಮ ಹಿರಿಯರು ತುಂಬಾ ಬುದ್ಧಿವಂತರು, ಮುಂದೆ ಹುಟ್ಟುವ ಮಕ್ಕಳು ಅಂಗವಿಕಲ ಮತ್ತು ಇತರ ಕಾಯಿಲೆ ಬರಬಾರದು ಅಂತ ಈ ಕ್ರಮವನ್ನು ನಾವು ಸಮರ್ಥನೆ ಮಾಡಿಕೊಳ್ಳಬಹುದು ಆದರೆ ನಾವು ಇದರ ಸಾರ್ಥಕತೆಯನ್ನು ಸರಿಯಾಗಿ ಪಾಲಿಸಿಕೊಂಡು ಬಂದಿರುತ್ತೆವೆಯಾ ??

ಉತ್ತರ ಇಲ್ಲ. ಯಾಕೆ ?? ಎಲ್ಲಿ ನಾವು ಎಡೆವಿದ್ದೆವೆ.


ಹುಡುಗ/ಹುಡುಗಿಗೆ ಅವರ ಅಪ್ಪನ ಗೋತ್ರ ಮಾತ್ರ ತೆಗೆದುಕೊಂಡು, ಅಮ್ಮನ ಗೋತ್ರ ಲೆಕ್ಕಕ್ಕೆ ತೆಗೆದುಕೊಳ್ಳದೆ ಇರುವುದು ಅತೀ ದೊಡ್ಡ ತಪ್ಪು.

ಹುಡುಗ/ಹುಡುಗಿಗೆ ಅಪ್ಪನ ಕಡೆಯಿಂದಲೂ ಅಣ್ಣ/ತಂಗಿ ಸಿಗುತ್ತಾರೆ, ಹಾಗೇಯೆ ಅಮ್ಮನ ಕಡೆಯೂ ಅಣ್ಣ/ತಂಗಿ ಸಿಗುತ್ತಾರೆ. ಈ ಅಪ್ಪನ ಗೋತ್ರ ನೊಡುವದರಿಂದ ನಾವು ಅಮ್ಮನ ಕಡೆಯಿಂದ ಆಗುವ ಅಣ್ಣ/ತಂಗಿ ಸಂಬಂಧಗಳನ್ನು ಮರೆತಿರುತ್ತೆವೆ. ಈ rule ಇಂದ ಹುಡುಗ ತನ್ನ ತಾಯಿ ತಂಗಿಯ ಮಗಳನ್ನು ಮದುವೆಯಾಗಬಹುದು, ಅದು ಸಮ್ಮತ ಆದೇ ತನ್ನ ತಂದೆಯ ತಮ್ಮನ ಮಗಳನ್ನು ಆಗಬಾರದು. ಎಂಥಾ ವಿಪರ್ಯಾಸ.

ಒಂದು ಉದಾಹರಣೆ ತೆಗೆದು ಕೊಳ್ಳೊಣ.
Say
ಹುಡುಗ :- A
ಹುಡುಗ ಅಪ್ಪ :- AF, ಗೋತ್ರ - GF
ಹುಡುಗ ಅಮ್ಮ:- AM, ಗೋತ್ರ - GM
ಹುಡುಗ ಗೋತ್ರ :- GF

so, ಹುಡುಗನಿಗೆ non GF ಇರುವ ಹೆಣ್ಣು ಬೇಕು. ಆದ್ದರಿಂದ ಹುಡುಗನ ಅಪ್ಪನ ತಮ್ಮನ ಮಗಳನ್ನು ತಂದುಕೊಳ್ಳಲು ಆಗುವದಿಲ್ಲ.
ಹಾಗಿದ್ದರೆ ಹುಡುಗನ ಅಮ್ಮನ ತಂಗಿ ಮಗಳನ್ನು ತಂದು ಕೊಳ್ಳಬಹುದಾ ?? ನೊಡೊಣ.

Say ಹುಡುಗಿಯ (ಹುಡುಗನ ಅಮ್ಮನ ತಂಗಿ ಮಗಳು)
ಹುಡುಗಿ :- B
ಹುಡುಗಿ ಅಪ್ಪ :- BF, ಗೋತ್ರ - GBF
ಹುಡುಗಿ ಅಮ್ಮ:- BM, ಗೋತ್ರ - GM
ಹುಡುಗಿ ಗೋತ್ರ :- GBF
So, GF ಮತ್ತು GBF ಬೇರೆ ಬೇರೆ ಇರುವ ಕಾರಣ ತಂಗಿಯಾದರೂ ಹುಡುಗಿಯನ್ನು ತಂದುಕೊಳ್ಳ ಬಹುದು.
ಹಾಗಿದ್ದರೆ ನಮ್ಮ ಹಿರಿಯರ ಪುಸ್ತಕದ ಬದನೆಕಾಯಿ ಕಥೆ ಏನಾಯಿತು ??

ಈ ಪ್ರಶ್ನೆಯನ್ನು ಯಾರು ನಮ್ಮ ಹಿರಿಯರಿಗೆ ಕೇಳಿರುವದಿಲ್ಲ, ಮತ್ತು ಹೇಳಿದರೂ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವ ವ್ಯವಧಾನ ನಮ್ಮ ಹಿರಿಯರಿಗೆ ಇಲ್ಲ. ಶತಮಾನಗಳಿಂದ ಕುರುಡಾಗಿ ತಪ್ಪಾಗಿ ಆಚರಿಸಿಕೊಂಡು ಬಂದಿದ್ದೆವೆ. ಇದಕ್ಕೆ ಸರಿಯಾದ ಮಾರ್ಗವಿಲ್ಲವೇ ??

ಖಂಡಿತಾ ಇದೆ.

ಸಂಬಂಧ ನೋಡುವಾಗ ಹುಡುಗನ ಅಪ್ಪನ ಗೋತ್ರವನ್ನು ಹುಡುಗಿಯ ಅಪ್ಪನ ಗೋತ್ರದ ಜೊತೆ && ಹುಡುಗನ ಅಮ್ಮನ ಗೋತ್ರವನ್ನು ಹುಡುಗಿಯ ಅಮ್ಮನ ಗೋತ್ರದ ಜೊತೆ ನೋಡಬೇಕು. ಎರಡೂ caseನಲ್ಲಿ ಬೇರೆಯಾದರೆ ಮಾತ್ರ ಮುಂದುವರಿಯಬೇಕು. ಇಲ್ಲವಾದರೆ ಹುಡುಗ-ಹುಡುಗಿ ಅಣ್ಣ-ತಂಗಿ ಆಗುತ್ತಾರೆ.

ಹಾಗಿದ್ದಲ್ಲಿ ಇದು ನಾವು ಮೇಲೆ ತೆಗೆದುಕೊಂಡ ಉದಾಹರಣೆಯ ಸಮಸ್ಯೆಯನ್ನು ಹೇಗೆ ಪರಿಹರಿಸುತ್ತದೆ ಎಂದು ನೊಡೊಣ.

೧) ಹುಡುಗನ ಅಪ್ಪನ ಗೋತ್ರವನ್ನು ಹುಡುಗಿಯ ಅಪ್ಪನ ಗೋತ್ರದ ಜೊತೆ :- GF != GBF - TRUE
೨) ಹುಡುಗನ ಅಮ್ಮನ ಗೋತ್ರವನ್ನು ಹುಡುಗಿಯ ಅಮ್ಮನ ಗೋತ್ರದ :- GM != GM - FALSE
so (TRUE && FALSE ) == FALSE.
ಆದ್ದರಿಂದ ಸಂಬಂಧ ನೋಡಲು ಆಗುವದಿಲ್ಲ.

ಇತ್ತಿಚಿಗೆ ನಮ್ಮ ಅನಕೂಲಸಿಂಧು ವ್ಯವಸ್ಥೆಯಲ್ಲಿ ಸ-ಗೋತ್ರ ಮದುವೆಗಳು ನಡೆಯುತ್ತ ಇವೆ. ಇದು ಒಳ್ಳೆ ಬೆಳವಣಿಗೆ, 1st Relations ಇಲ್ಲದಿದ್ದರೆ ಸ-ಗೋತ್ರ ಮದುವೆಯನ್ನು ಮಾಡಬಹುದು. ಇದಕ್ಕೆ ಪುರೋಹಿತರ ಕುಮ್ಮಕ್ಕು ಇದೆ, ಅನಕೂಲಕ್ಕೆ ತಕ್ಕ ಹಾಗೆ ಮದುವೆ ಸಮಯದಲ್ಲಿ ಅಪ್ಪ-ಅಮ್ಮನ ಬದಲು ಬೇರೆಯವರು ಧಾರೆ ಎರೆದುಕೊಟ್ಟರೆ ಆಯಿತು. ಎಷ್ಟು ಸುಲಭ ಅಲ್ಲವೇ ??

ಈ ಗೋತ್ರ ಪುರಾಣ ಕೇಳಿದವರಿಗೂ ಮತ್ತು ಇದನ್ನು ಇತರರಿಗೆ ಹೇಳುವವರಿಗೂ ಜೈ ಬ್ಯಾಡರಬೊಮ್ಮ ಆಶೀರ್ವಾದವಿರುತ್ತದೆ.

ಕನ್ನಡಿಗರ ಭ್ರಮೆಗಳು.

ನಮ್ಮ ಕನ್ನಡಿಗರು ಬೇರೆಯವರು ಹೇಳಿದನ್ನು ಕುರುಡಾಗಿ ನಂಬುತ್ತಾರೆ. ಇದು ನಮ್ಮ ಕೀಳೆರಿಮೆಯ ಪ್ರಭಾವವೊ ಇಲ್ಲ ಕನ್ನದ ಭಾಷೆ-ಚರಿತ್ರೆ ಬಗ್ಗೆ ಇರುವ ಅಜ್ಞಾನವೊ ಕಾಣೆ. ಇಂತ ಕೆಲವು ಭ್ರಮೆಗಳು ಇಲ್ಲಿವೆ.


ಕನ್ನಡ ಸಂಸ್ಕೃತ ಜನ್ಯ ಭಾಷೆ.

ಕನ್ನಡ ದ್ರಾವಿಡ ಜನ್ಯ ಭಾಷೆ, ಹಿಂದೆ ೨೪೮ ಭಾಷೆಗಳು ಇದ್ದವು, ಕಲಾಕ್ರಮೇಣ ಕರಗಿ ಈಗ ೨೨ ಇವೆ ಅಂತ ಭಾಷ ತಜ್ಞರ ಅಭಿಮತ.
ಸಂಸ್ಕೃತ ಆರ್ಯನ್ ಭಾಷಾ ವರ್ಗಕ್ಕೆ ಸೇರಿದ ಭಾಷೆ. ಉತ್ತರ ಭಾರತದ ಅನೇಕ ಭಾಷೆಗಳು ಸಂಸ್ಕೃತದಿಂದ ಹುಟ್ಟಿವೆ. ಕನ್ನಡ ಬೆಳೆಯೊಕ್ಕೆ ಸಂಸ್ಕೃತ ಜೀವಸತ್ವವಾಗಿದೆ ಅಂದರೆ ಕನ್ನಡ ಸಸಿಗೆ ಸಂಸ್ಕೃತ ಗೊಬ್ಬರ ಆಗಿದೆ. ಆದರೆ ಸಂಸ್ಕೃತ ಜನ್ಯವಲ್ಲ.

ಕನ್ನಡ ಲಿಪಿ ವಿಭಿನ್ನವಾಗಿದೆ ಮತ್ತು ಕಷ್ಟ//
ಕನ್ನಡದ ಲಿಪಿ ಬ್ರಾಹ್ಮಿ ಇಂದ ಹುಟ್ಟಿದರೂ, ದುಂಡು ದುಂಡಗೆ ನೊಡಲು ಸುಂದರ ಇರುವ ಲಿಪಿ ನಮ್ಮದು.ಅಷ್ಟೆ ಅಲ್ಲ ತೆಲುಗು ಲಿಪಿಗೂ ಕನ್ನಡವೇ ತಾಯಿ.
ಭಾರತದ ಭೂದಾನ ಚಲುವಳಿ ನೇತರಾ ಶ್ರೀ ವಿನೊಭ ಭಾವೆ ಹೇಳಿದ್ದು ಎನು ಗೊತ್ತ, ಕನ್ನಡ "ವಿಶ್ವ ಲಿಪಿಗಳ ರಾಣಿ", ಎನೊ ಅವರು ನಮ್ಮ ಪಕ್ಕ ರಾಜ್ಯದವರು,ಪ್ರೀತಿಯಿಂದ ಹೇಳಿರಬಹುದು ಅಂತ ಕಿಡಿಗೇಡಿಗಳು ಹೇಳಬಹುದು. ಆದರೆ ೧೫೨ ಲಿಪಿಗಳ ವಿಶ್ವ ಲಿಪಿಗಳ ಪ್ರದರ್ಶನ ನಡೆಯಿತು, ಎಲ್ಲಾ ಲಿಪಿತಜ್ಞರು,ಭಾಷ ತಜ್ಞರು
ಕನ್ನಡ ಅತ್ಯಂತ ಸುಂದರ ಲಿಪಿ, ಸಂದೇಹ ಇಲ್ಲದಿರುವ ಲಿಪಿ, ಬೇರೆ ಭಾಷೆಗಳಿಗೆ ಇದು ಮಾದರಿ(ಮಾಡೆಲ್) ಲಿಪಿ ಅಂತ ಒಮ್ಮತದಿಂದ ಹೇಳಿದ್ದಾರೆ.
ದ್ರುಶ್ಯಕ(ವಿಶುಯಲ್) ಇರುವ ಖಚಿತ ಮತ್ತು ನಿಖರಕತೆ.


ಕನ್ನಡ ಒಂದು ಪ್ರಾಂತೀಯ ಭಾಷೆ,ಹಿಂದಿ ನಮಗಿಂತ ದೊಡ್ಡದು//
ಇದು ಆತಿ ದೊಡ್ಡಾಆಆಆಆಆಆಆಆಆಅ ಭ್ರಮೆ. ಈ ಕಾರಣಕ್ಕೊ ಎನೊ ಅಥಾವ ನಮ್ಮ ಪಠ್ಯ ಪುಸ್ತಕಗಳ ತಪ್ಪು ತಿಳುವಳಿಕೆಯಿಂದ ನಮಗೆ ಒಂದು ಭ್ರಮೆ ಹುಟ್ಟಿದೆ, ಹಿಂದಿ ನಮ್ಮ ರಾಷ್ಟ್ರ ಭಾಷೆ ಅದನ್ನು ಪ್ರತಿಯೊಬ್ಬ ಹಿಂದುಸ್ಥಾನಿ ಕಲಿಯಬೇಕು ಅಂತ. ಕಲಿಯುವುದು ಓಕೆ, ಆದರೆ ಅದರ ಹುಚ್ಚು ಹತ್ತಿಸಿಕೊಂಡು ನಮ್ಮ ಭಾಷೆಯನ್ನು ತಿರಸ್ಕರಿಸುವುದು ಸರಿ ಅಲ್ಲ.
ಕನ್ನಡವು ರಾಷ್ಟ್ರ ಭಾಷೆ ಅನ್ನುವ ಸಂಗತಿ ಅನೇಕರಿಗೆ ಗೊತ್ತಿಲ್ಲ, ಹಿಂದಿಗೆ ಹೊಲಿಸಿದರೆ ಕನ್ನಡ ಎಲ್ಲ ವಿಷಯದಲ್ಲು ಮುಂದೆ ಇದೆ. ಅನಗತ್ಯ ಭ್ರಮೆ ಇಟ್ಟುಕೊಂಡು ಹಿಂದಿಗೆ ಉಘೆ ಉಘೆ ಹೇಳುವುದು ಬೇಕಿಲ್ಲ.


ಕನ್ನಡ ಮತ್ತು ತೆಲುಗು ತುಂಬ ಹತ್ತಿರದ ಭಾಷೆಗಳು//
ಇದು ಇನ್ನೊಂದು ಭ್ರಮೆ, ಲಿಪಿ ವಿಷಯಕ್ಕೆ ಬಿಟ್ಟರೆ ನಮಗೂ ಆ ಭಾಷೆಗು ಸಾಮ್ಯ ಅಷ್ಟು ಇಲ್ಲ. ತೆಲುಗು ಭಾಷೆಯಲ್ಲಿ
ಸ್ತ್ರೀ ಲಿಂಗಕ್ಕೂ ಮತ್ತು ನಪುಂಸಕ ಲಿಂಗಕ್ಕೂ ಕ್ರಿಯಾಪದದಲ್ಲಿ ವ್ಯತ್ಯಾಸವಿಲ್ಲ. "ಪಿಲ್ಲಿ ವಚ್ಚಿಂದಿ" ಮತ್ತು "ಪಿಲ್ಲ ವಚ್ಚಿಂದಿ" ಅನ್ನುತ್ತಾರೆ.


ಕನ್ನಡಲ್ಲಿ ಎನಿದೆ ....??

ಇದಕ್ಕೆ ಒಳ್ಳೆ ಉತ್ತರ "ಎನಿಲ್ಲ" ಅಂಥ ಕೇಳುವುದು. ನಾವು ಕನ್ನಡಿಗರು ನಮ್ಮ ಕೊರತೆಯನ್ನು ಹೇಳಿ ಕೊಲ್ಲುತ್ತೆವೆ. ನಾವು ಸತ್ತೆ ಹೊಗಿದ್ದೆವೆ ಅಂತ ಬೊಬ್ಬೆ ಹೊಡೆಯುತ್ತೆವೆ.
ನಮ್ಮ ನಿಶಕ್ತಿಗಳನ್ನು ಹೇಳಿ ಕೊಂಡು ಕೊರಗುತ್ತೆವೆ. ನಮ್ಮ ಶಕ್ತಿ ಮತ್ತು ನಮ್ಮ ಭಾಷೆಯಲ್ಲಿ ಇರುವ +ve ಗುಣಗಳ ಬಗ್ಗೆ ಎನು ಹೇಳುವದಿಲ್ಲ.

ಆಕಸ್ಮಾತ್ ನವೆಂಬರ್ ೧ನೇ ತಾರೀಖು ಕೇಳಿದರೂ ಕೂಡ ನಾವು ಹೇಳುವುದು ಒಂದೆ ಒಂದು ವಿಷಯ,ಅದು ನಮಗೆ ೭ ಬಾರಿ ಜ್ಞಾನಪೀಠ ಬಂದಿದೆ ಅಂತ ಅಷ್ಟೆ .ಒಂದು ವರುಷಕ್ಕೆ ಒಮ್ಮೆ ಕೊಡುವ ಒಂದು
ಖಾಸಗಿ ಪ್ರಶಸ್ತಿ ಒಂದೇನ ನಮ್ಮ ಮಾನದಂಡ. ಅಲ್ಲ, ಕನ್ನಡ ಸಾಹಿತ್ಯಕ್ಕೆ ೪೯ ಸಲ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿವೆ. ಇದಲ್ಲದೆ ನೆರೆ ರಾಜ್ಯಗಳ "ಕಬಿರ್ ಸಮ್ಮಾನ್" ಮತ್ತು ಕುಮಾರನ
ಪ್ರಶಸ್ತಿ ಕೂಡ ಬಂದಿವೆ.

ನಮ್ಮ ನವ ಸಾಹಿತ್ಯ ಶ್ರೀಮಂತ ಆಗಿದೆ, ನಿಜ. ಆದರೆ ಹಿಂದೆ ಇರಲಿಲ್ಲವೆ?
೧೦೦೦ ವರುಷಗಳ ಹಿಂದೆ ಪಂಪ ಮಹಾಕಾವ್ಯ ಬರೆದ, "ಮನುಷ್ಯ ಜಾತೀ ತಾನೊಂದೆ ಬಲಮ್" ಅನ್ನುವ ಮಹಾನ್ ವಿಚಾರವನ್ನು ಬೊದಿಸಿದ. ಇದನ್ನೇ ವಿಶ್ವ ಮಾನವ ಸಂದೇಶವನ್ನು ನಮ್ಮ ಕುವೆಂಪು ಪುನರ್ ಉಚ್ಚರಿಸಿದರು.
ಹೀಗೆ ಸಾಮಜಿಕ ಕಳಕಳಿಯನ್ನು ಬೊಧಿಸಿದ ಕವಿಗಳು ಕನ್ನಡದಲ್ಲಿ ಮಾತ್ರ ಸಿಗುತ್ತಾರೆ.

"ಕುಮಾರವ್ಯಾಸ ಹಾಡಿದನೆಂದರೆ ಕಲಿಯುಗ ದ್ವಾಪರ ಅಗುವುದು" ಅಂತ ಹೇಳಿದ್ದಾರೆ, ಅವನ ಬಗ್ಗೆ ಹೇಳೊಕ್ಕೆ ೨ ಮಾತುಗಳು ಸಾಲದು. ಅವನು ಅಷ್ಟು ಚೆನ್ನಾಗಿ ಕಾವ್ಯಗಳನ್ನು ಬರೆಯುತ್ತಿದ್ದ.
ಅವನಿಗೆ ಅವನ ಕಾವ್ಯದ ಮೇಲೆ ಅಪಾರ ನಂಬಿಕೆ, ಅದಕ್ಕೆ ಎನೊ ಅವನು ಒಮ್ಮೆ ಬರೆದಿದ್ದು ಇನ್ನೊದು ಸರಿ ಅಳಿಸದೆ ಬರೆದಿದ್ದು. ಈ ತರ ಯಾವ ಭಾಷೆಯ ಕವಿಯು ಮಾಡಿರಲಾರ.

ರನ್ನ ಬರೆದ ಗಾದಯುದ್ದಕ್ಕೆ ಬೇರೆ ಯಾವ ಕೃತಿಗೆ ಸಾಟಿ ಉಂಟು ??

ಕಾಲಾನುಕ್ರಮದಲ್ಲಿ ಕನ್ನಡ ಹಳೆ-ನುಡಿ-ನವ ಹಿಗೆ ವಿಕಾಸ ಹೊಂದಿರುವ ಕನ್ನಡ ಅನೇಕ ಪ್ರಬೇಧ ಪಡೆದಿದೆ,
ಯಾವ ಭಾಷೆಗೆ ಭೌಗೊಳಿಕ ಪ್ರಬೇಧ ಇರುತ್ತದೆಯೊ ಅದು ಶ್ರೀಮಂತ ಅಂತ ಭಾಷತಜ್ಞ್ನರ ಅಭಿಮತ.


ಸಾಹಿತ್ಯ==ಬದುಕು ಅಲ್ಲ. ಬದುಕು ಅಂದರೆ ಆಡಲಿತ,ಶಿಕ್ಷಣ,ವೈದ್ಯಕಿಯ,ವಿಜ್ಞಾನ ನಮ್ಮ ಭಾಷೆಯಲ್ಲಿ ಇರಬೇಕು. ಆಡಳಿತ ಕ್ಶೇತ್ರದಲ್ಲಿ ಕನ್ನಡಷ್ಟು ಪದಕೊಶ ಇನ್ನೊದು ಭಾಷೆಯಲ್ಲಿ ಇಲ್ಲ. ಕಾನೂನಿನ ಪದಕೊಶದಲ್ಲಿ ೪೫ ಸಾವಿರ ಶಬ್ದಗಳು ಇವೆ. ಹಿಂದಿಗಿಂತ ಹೆಚ್ಚು ಮತ್ತು ಮುಂದೆ ಇದೆ. ಬ್ಯಾಕಿಂಗ್ ಕ್ಷೇತ್ರದಲ್ಲಿ ನಿಗಂಟು ಇದೆ.
ವೈದ್ಯ ಪದಕೊಶ, ಅನೇಕರಿಗೆ ಎಟುಕದ ಪದಕೊಶ, ಜಗತ್ತಿನ ಕೆಲವೇ ಭಾಷೆಗಳಲ್ಲಿ ಅಂದರೆ ಆಂಗ್ಲ,ಜಪಾನ್ ಜೊತೆಗೆ ಕನ್ನಡಲ್ಲಿ ಇದೆ.
ಟೆಕ್ನಿಕಲ್ ಗ್ಲಾಸರಿಯನ್ನು NGEF ತಂದಿತು. ೭೦೦೦ ಪದಗಳು ಇದರಲ್ಲಿ ಇದೆ.

ಆಕ್ಷರ ಸ್ಟೆನ್ಸಿಲ್ ಮೊದಲು ಬಂದಿದ್ದು ಕನ್ನಡದಲ್ಲಿ, ಮೊದಲ ಬಾರಿಗೆ ಭಾರತದಲ್ಲಿ NGEF ಅವರು ಮಾಡಿದರು. ಇದು ಯಾವ ಭಾಷೆಯಲ್ಲೂ ಕೂಡ ಇರಲಿಲ್ಲ.
ಅಂತರಾಷ್ತ್ರೀಯ ತಂತ್ರಜ್ಞಾನವನ್ನು ಬಳಸಿಕೊಂಡು ಶ್ರೀ ಕೃಷ್ಣೆ ಗೌಡ ಅವರ ನೇತ್ರತ್ವದಲಿ ಹಿಂದೆ ಬಂದಿತು.

ಕನ್ನಡದಲ್ಲಿ ಬರೆದರೆ ಬೇರೆ ಭಾಷೆಯ ಲಿಪಿಯಲ್ಲಿ ಬರೆಯುವ ಮೊದಲ ಲಿಪ್ಯಂತರ ಕನ್ನಡದಲ್ಲಿ ಇದೆ.

ಇಡಿ ದೇಶದಲ್ಲಿ ಯಾವ ರಾಜ್ಯದಲ್ಲು ಕೂಡ ಅದರ ಭಾಷೆಯ
GAZETTE ತಂದಿಲ್ಲ, ಕರ್ನಾಟಕವನ್ನು ಹೊರತು ಪಡಿಸಿ.

ಕೇಂದ್ರದ ಅದಿನಿಯಮವನ್ನು ರಾಷ್ತ್ರಪತಿ ಅನುಮತಿ ಪಡೆದು ಕನ್ನಡದಲ್ಲಿ ತಂದ ಕೀರ್ತಿ ಕನ್ನಡಕ್ಕೆ ಇದೆ, ಬೇರೆ ಭಾಷೆಯಲ್ಲಿ ೧೦ ಇದ್ದರೆ, ಕನ್ನಡದಲ್ಲಿ ೨೦೦+ ಇದೆ.

ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ೫% ಒಳ ಮಿಸಲು ಇದೆ.ಬೇರೆ ಯಾವ ರಾಜ್ಯವು ಇದಕ್ಕು ಕೈ ಹಾಕಿಲ್ಲ.

ಕನ್ನಡದ ಜಾನಪದವನ್ನು ಒಂದು ತಕ್ಕಡಿಗೆ ಹಾಕಿ ,ಬಾಕಿ ೨೭ ರಾಜ್ಯಗಳ ಜನಪದವನ್ನು ಇನ್ನೊದು ತಕ್ಕಡಿಗೆ ಹಾಕಿದರೆ ಹೆಚ್ಚು ತೂಗುವುದು ಕನ್ನಡ.
ಇದು ನಾವು ಹೇಳಿದ ಮಾತಲ್ಲ, ಉತ್ತರ ರಾಜ್ಯಗಳ ಜಾನಪದ ಪಂಡಿತರು ಹೇಳಿದ ಮಾತಿದು.


ಹೀಗೆ ಹೇಳುತ್ತ ಹೊದರೆ ಸಾಲು ಸಾಲು ಸಿಗುತ್ತದೆ, ಕನ್ನಡವು ಭೂತ-ಭವಿಷ್ಯ ಮತ್ತು ವರ್ತಮಾನ ಇರುವ ಎಕೈಕ ಭಾಷೆ. ಇದು ಅಲಿಸಿ ಮತ್ತು ನಶಿಸಿ ಹೊಗುವಂತ ಭಾಷೆ ಅಲ್ಲ.
ಸುಮ್ಮನೆ ನೆಗೆಟಿವ್ ಪ್ರಚಾರ ಮಾಡುವ ಬದಲು, ನಮ್ಮ ಭಾಷೆ ಪಾಸಿಟಿವ್ ವಿಷಯಗಳನ್ನು ತಿಳಿದುಕೊಂಡು ಅದನ್ನು ನಮ್ಮ ಜನರಿಗೆ ತಿಳಿಸಿ ಜಾಗೃತಿ ಮಾಡುವುದು ಸೂಕ್ತ.
ಹಿಂದೆ ಪುಲಕೇಶಿಯ ಕಾಲದಲ್ಲಿ "ಕರ್ನಾಟಕ ಸೇನಮ್ ಅಜೇಯಮ್", ಅನ್ನುವ ಮಾತಿತ್ತು. ಅದಕ್ಕೆ ಕಾರಣ ನಮ್ಮ ಕಿಚ್ಚು,ಸ್ವಾಭಿಮಾನ ಮತ್ತು ಶೌರ್ಯ.
ಇವುಗಳನ್ನು ಮತ್ತೆ ಮೈಗೂಡಿಸಿಕೊಳ್ಳಬೇಕಾಗಿದೆ.

ನಂಬಿಕೆಗಳು-ಸಂಪ್ರದಾಯಗಳು ಮತ್ತು ನಾವು

ನಂಬಿಕೆಗಳು-ಸಂಪ್ರದಾಯಗಳು ಮತ್ತು ನಾವು
ಮಾನವ ವಿಕಸನ ಹೊಂದಿದ ಹಾಗೆ ಅನೇಕ ಪದ್ದತಿ ಮತ್ತು ಸಂಪ್ರದಾಯಗಳನ್ನು ಸೃಷ್ಟಿ ಮಾಡಿದ, ಅಂದರೆ ಅದು ಬದಲಾವಣೆಯ ಹಂತದ ಒಂದು ಪಾತ್ರವಿರಬಹುದು.
ಆ ಸಮಯಕ್ಕೆ ತಕ್ಕ ಹಾಗೆ ಅದನ್ನು ರೂಪಿಸಿರಬಹುದು ಅದು ಪ್ರಶ್ನೆ ಅಲ್ಲ. ಆದರೆ ಅದನ್ನು ಶತಮಾನ ಕಳೆದ ಮೇಲು ಸುಮ್ಮನೆ ಅನುಸರಿಸಿಕೊಂಡು ಬಂದರೆ ಅದು ಪ್ರಶ್ನಾರ್ಹ.

ಹಾಗಿದ್ದರೆ ಯಾವುದು ಮೂಡನಂಬಿಕೆಯ ಪಟ್ಟಿಗೆ ಸೇರುತ್ತದೆ ??

ಯಾವ ನಂಬಿಕೆಗೆ ಒಂದು ಆಧಾರವಿಲ್ಲವೊ ,
ಯಾವ ನಂಬಿಕೆಯ ಹಿನ್ನಲೆ ಗೊತ್ತಿಲ್ಲವೊ,
ಯಾವ ನಂಬಿಕೆ ನವೀಕರಿಸಿಲ್ಲವೊ,
ಯಾವ ನಂಬಿಕೆಯ ಆಚರಣೆಯ ಮಹತ್ವ ತಿಳಿದಿಲ್ಲವೊ ಅದನ್ನು ಮೂಡನಂಬಿಕೆ ಅಂತ ಕರೆಯಬಹುದು.

ಆದರೆ ಪ್ರತಿಯೊಂದು ಸಂಪ್ರದಾಯಗಳನ್ನು ಆಚರಿಸುವಾಗ ಅದರ ಹಿನ್ನಲೆ ಮತ್ತು ಉಪಯೋಗ ತಿಳಿದಿರಬೇಕು, ಸುಮ್ಮನೆ ನಮ್ಮ ಹಿರಿಯರು ಆಚರಿಸಿದರು ಅಂತ ನಾವು ಅದನ್ನು ಪಾಲನೆ
ಮಾಡಲು ಆಗುವದಿಲ್ಲ. "ದೊಡ್ಡವರೆಲ್ಲಾ ಜಾಣರಲ್ಲ" , ಇಲ್ಲಿ ದೊಡ್ದವರು ಅಂದರೆ ನಮಗೆ ಅದರ ಹಿನ್ನಲೆ ಮತ್ತು ಉಪಯೋಗ ತಿಳಿಸದೆ,ಸಂಪ್ರದಾಯಗಳನ್ನು ಭೊದಿಸಿದವರು.
ನಾವು ಅದನ್ನು ಪ್ರಶ್ನೆ ಮಾಡಿದರೆ ತಮಗೆ ಗೊತ್ತಿರುವ ಉತ್ತದವನ್ನು ಹೇಳಿ ಇಲ್ಲಾ ಸುಮ್ಮನೆ ನಮ್ಮ ಬಾಯಿ ಮುಚ್ಚಿಸುವ ಹೊಸ ಸಂಪ್ರದಾಯವನ್ನು ಆರಂಭಿಸಿದರು.

ಸಂಪ್ರದಾಯಗಳು ಕಾಲನುಕ್ರಮೇಣ ನಶಿಸುತ್ತದೆ ಅಂತ ನಮ್ಮ ಕಲ್ಪನೆಯಲ್ಲಿ ಇಲ್ಲ, ಹಿಂದಿನವರು ಮಾಡಿದ್ದು ಶತಮಾನಗಳಿಗೂ ಅನ್ವಯವಾಗುತ್ತದೆ ಅನ್ನುವ ಪೊಳ್ಳು ನಂಬಿಕೆಯಿಂದ ನಾವು
ಈ ಕೂಪದಲ್ಲಿ ಸೇರಿದ್ದಿವೆ. ಪ್ರಶ್ನೆ ಮಾಡಿದರೆ ನಮ್ಮ ಹಿರಿಯರಿಗೆ ತೊರಿಸುವ ಅವಮಾನ ಅಂತ ಭಾವಿಸಿ ಸುಮ್ಮನೆ ಅದನ್ನು ಕಾಟಚಾರವಾಗಿ ಆಚರಿಸುತ್ತಿದ್ದೆವೆ, ಅದಕ್ಕೆ ಸಂಸ್ಕ್ರುತಿ ಅಂತ ಬೇರೆ ಹೆಸರು ಕೊಟ್ಟಿದ್ದಿವೆ.

ನಮ್ಮ ಹಿರಿಯರು ಪ್ರಶ್ನೆ ಮಾಡುವ ಯೊಗ್ಯತೆ ಇಲ್ಲದಿದ್ದರೂ ಸಹ, ಮುಂದಿನ ಪೀಳಿಗೆ ಅದನ್ನು ಆಚರಿಸಬೇಕೆಂದು ಪ್ರತಿಯೊಂದು ನಂಬಿಕೆಯ ಜೊತೆ ಒಂದು ಕತೆಯನ್ನು ಸೇರಿಸಿದರು, ಅದೇ ಅದನ್ನು ಆಚರಿಸಿದರೆ ಆಗುವ ಲಾಭ ಮತ್ತು ಅದನ್ನು ದಿಕ್ಕರಿಸಿದರೆ ಆಗುವ ನಷ್ಟ. ಮಾನವ ಎಷ್ಟೆ ಓದಿದರೂ ಸಹ ಇಂತಹ ಪೊಳ್ಳು ಕತೆಗಳಿಗೆ ಒಗೊಟ್ಟು ಅದನ್ನು ಪಾಲಿಸುತ್ತಾನೆ, ನೋಡಿರಬಹುದು
ವಾರಕ್ಕೆ ಬರುವ ವಿ-ಅಂಚೆಯಲ್ಲಿ ಈ ಪತ್ರವನ್ನು ೧೦ ಜನರಿಗೆ ಕಳುಹಿಸಿ, ನಿಮಗೆ ಒಳ್ಳೆಯಾದಗುತ್ತದೆ. ತಿರುಪತಿ ಸ್ವಾಮಿಯ ಆಶೀರ್ವಾದವಿರಬಹುದು ಇಲ್ಲಾ ಸಾಯಿಬಾಬ ಮಾಂತ್ರಿಕ ಇರಬಹುದು, ನಮ್ಮ ಜನ ದಿಕ್ಕರಿಸಿದರೆ ಆಗುವ ನಷ್ಟಕ್ಕೆ ಹೆದರಿ, " ಅಯ್ಯೊ ನಾನು ಕಳುಹಿಸಿದರೆ ನನಗೆ ಆಗುವ ನಷ್ಟ ಏನು?, ಸುಮ್ಮನೆ ನೋಡೆ ಬಿಡುವ ಅನ್ನುವ ತೀರ್ಮಾನಕ್ಕೆ ಬರುವುದು ನಿಜಕ್ಕೂ ಘೊರವೇ ಸರಿ.

ಇದನ್ನು ಲಾಭ ಪಡೆಯುವವರೂ ಶತಮಾನಗಳಿಂದಲೂ ಇದ್ದೆ ಇರುತ್ತಾರೆ, ಜನರ ನಂಬಿಕೆಗಳನ್ನು ಬಂಡವಾಳ ಮಾಡಿಕೊಂಡು ಲಾಭ ಮಾಡಿಕೊಳ್ಳುತ್ತಾರೆ, ಇದಕ್ಕೆ ಒಳ್ಳೆಯ ಉದಾಹರಣೆಯೆಂದರೆ
ಕೆಲವು ವರ್ಷಗಳಿಂದ ಹುಟ್ಟಿರುವ ದೇವರುಗಳು ಮತ್ತು ಅದರ ಉಪಕಥೆಗಳು. ಹೆಚ್ಚಾಗಿ ಇದಕ್ಕೆ ಬಲಿಯಾಗುವರು ಹೆಂಗಸರು ಅದಕ್ಕೆ ಈ "ವೈಭವ ಲಕ್ಶ್ಮಿ" ಮತ್ತು "ಕಲ್ಕಿ" ದೇವರುಗಳು ಪ್ರತಿ ಮನೆಯನ್ನು ಹೊಕ್ಕಿವೆ, ನಮ್ಮ ಲಲನಾಮಣಿಗಳು ಆಸೆಗೆ ಬಿದ್ದು ಪೂಜೆ ಮಾಡಿದ್ದು ಮಾಡಿದ್ದೆ. ಯಾರಿಗೆ ವೈಭವ ಬಂತೊ ಇಲ್ಲವೋ ಆದರೆ ಈ ದೇವರ ಕಥೆಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ
ಮುದ್ರಾಲಯದವನಿಗೆ ವೈಭವದ ದರ್ಶನವಾಯಿತು.
ಇದನ್ನು ಹುಟ್ಟು ಹಾಕಿದ ಭೂಪನಿಗೆ ನಿಜಕ್ಕೂ ಅಭಿನಂದಿಸಬೇಕು,ಇಷ್ಟು ಚೆನ್ನಾಗಿ ಜನರನ್ನು ವಂಚಿಸುವ ವಿಧಾನ ಬೇರೊಂದಿಲ್ಲ.

ಪ್ರತಿವಾರ ಮುತೈದೆಯರು ಇತರ ೫ ಮುತೈದೆಯರಿಗೆ ಈ ವೈಭವ ಲಕ್ಶ್ಮಿಯ ಬಾಗಿನ ಕೊಡಬೇಕು, ಕೊಡುವಾಗ ಒಂದು ಪುಸ್ತಕದ ಜೊತೆ ಕೊಡಬೇಕು, ಆ ತರ ಅವರು ಇಷ್ಟು ವಾರಗಳ ಕಾಲ ಮಾಡಿದರೆ ಇಷ್ಟು ಪುಣ್ಯಕ್ಕೆ ಒಳಗಾಗುತ್ತಾರೆ ಅಂತ ಇದೆ. ಆದರೆ ಮೆಚ್ಚುಗೆಯ ಅಂಶವೆನೆಂದರೆ ಬಾಗಿನ ತೆಗೆದುಕೊಳ್ಳುವ ಹೆಂಗಸರು ಕೂಡ ಇದನ್ನು ಆಚರಿಸಬೇಕು. ಹೀಗೆ ಇದು chain reaction ಆಗಿ ಆ ಪ್ರಕಾಶಕನಿಗೆ ದುಡ್ಡೊ ದುಡ್ಡು.

ಕಳೆದ ಶತಮಾನದಿಂದ ಹುಟ್ಟಿರುವ ಮತ್ತು "powerful" ದ್ಯಾವ್ರು ಅಂದರೆ ಶ್ರೀ ಶ್ರೀ ಸತ್ಯನಾರಯಣ. ತುಂಬಾ "flexible" ಪೂಜೆ ಇದು, ಯಾವಾಗ ಬೇಕಾದರೂ ಮಾಡಬಹುದು, ವರ್ಷಕ್ಕೆ ಒಮ್ಮೆ ಅಂತ ಕಾಯುವ ಗೊಜಿಲ್ಲ. ಈ ದೇವರಿಗೆ ಅಬ್ಬಬ್ಬಾ ಅಂದರೆ ೧೨೦-೧೩೦ ವರ್ಷಗಳ ಇತಿಹಾಸವಿದೆ ಅಷ್ಟೆ. ಈ ದ್ಯಾವ್ರು ಬಗ್ಗೆ ಇನ್ನೊಮ್ಮೆ ಹೇಳುವೆನು.

ದುರಂತವೆಂದರೆ ಅನೇಕ ಮಹಾನ್ ಪುರುಷರು ಬಂದು ಹೊದರು ನಾವು ಬದಲಾಗಿಲ್ಲ, ನಾಯಿ ಬಾಲ ಡೊಂಕು ಅನ್ನುವ ಹಾಗೆ ಆ ಮಹಾತ್ಮರ ಅನುನಾಯಿ ಅಂತ ಹೇಳಿಕೊಂಡರು, ಅವರ ಮಾತುಗಳನ್ನು ಅನುಸರಿಸದೆ, ದೇವರ ಗುಡಿಯಲ್ಲಿ ಅವರ ಭಾವಚಿತ್ರ ಹಾಕಿ ನಮಗೆ ಬಂದ ಹಾಗೆ ಇದ್ದೆವೆ. ಇದು ಹಣ್ಣಿನ ಸಿಪ್ಪೆ ತಿಂದು ತಿರುಳನ್ನು ಎಸೆದ ಹಾಗೆ.
ದುಃಖದ ಸಂಗತಿ ಎಂದರೆ ಮಹಾತ್ಮರು ಎಲ್ಲರೂ ಈ ಮುಡನಂಬಿಕೆಗಳ ವಿರುದ್ಧ ದ್ವನಿ ಎತ್ತಿದವರೇ !!!

ಸಂಪ್ರದಾಯ ಸರಿ, ಆ ಕಾಲಕ್ಕೆ ಅನುಗುಣಕ್ಕೆ ಹುಟ್ಟು ಹಾಕಿರಬಹುದು. ಉದಾ:- ೧೦೦ ವರ್ಷಗಳ ಹಿಂದೆ ಜನವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ತುಂಬಾ ಹಿಮ ಬೀಳುತ್ತ ಇದ್ದರೆ, ಸಂಕ್ರಾತಿಯ ಸಮಯದಲ್ಲಿ ಎಲ್ಲರೂ ಬೆಚ್ಚನೆಯ ಉಣ್ಣೆ ಬಟ್ಟೆ ಕೊಂಡುಕೊಳ್ಳುವುದು ಮತ್ತು ಹಾಕಿಕೊಳ್ಳುವುದು ಸಂಪ್ರದಾಯವಾಗುತ್ತದೆ. ಅದೇ ಕಾಲಕ್ರಮೇಣ ಜನರಲ್ಲಿ ಅಭ್ಯಾಸವಾಗುತ್ತದೆ, ೧೦೦ ವರ್ಷಗಳ ನಂತರ ಪ್ರಕೃತಿಯ ವೈಪರಿತ್ಯದಿಂದ ಜನವರಿ ತಿಂಗಳಲ್ಲಿ ಸುಡು ಬಿಸಿಲು ಬಂದರೂ ಸಹಾ, ನಮ್ಮ ಹಿರಿಯರು ಹಾಕಿದ ಸಂಪ್ರದಾಯ ಅಂತ ಜೋತು ಬಿದ್ದು ಸಂಕ್ರಾತಿಗೆ ಉಣ್ಣೆ ಬಟ್ಟೆ ಹಾಕಿಕೊಂಡರೆ ನಗೆಪಾಟಲಿಗೆ ಒಳಗಾಗುತ್ತೆವೆ.

ಪ್ರಶ್ನೆ ಮಾಡಿಕೊಂಡು ಇಂದಿಗೆ ಎಷ್ಟು ಅದು ಸರಿ ಅಂತ ಯೋಚಿಸಿ ಆಚರಿಸಿದರೆ ಸಂಪ್ರದಾಯಗಳಿಗೆ ಒಂದು ಅರ್ಥವಿರುತ್ತದೆ.

- ಪ್ರ