Saturday, June 18, 2011

ಜನತೆ ದುಡ್ಡು ಯಡ್ಡಿ ಜಾತ್ರೆ




ನಿಜಕ್ಕೂ ಇದನ್ನು ಯಾವ ಮಾಧ್ಯಮಗಳು ಪ್ರಶ್ನೆ ಮಾಡುವದಿಲ್ಲ, ಯಾಕೆ ಎಂದರೆ ಸುಖಾಸುಮ್ಮನೆ ಜಾಹಿರಾತು ರೂಪದಲ್ಲಿ ಹಣ ಬರುತ್ತ ಇರುವಾಗ ಬೇಡ ಎನ್ನಲೂ ಪತ್ರಿಕೆಗಳು ದಡ್ಡರೇ. ಇದೇ ದೊಡ್ಡ ಫ್ಲೆಕ್ಸ ಆಗಿ ಬಂದಿದ್ದರೆ ಇಲ್ಲ ಇನ್ನೊಂದು ಮಾದರಿಯಲ್ಲಿ ಬಂದಿದ್ದರೆ ಇದೇ ಪತ್ರಿಕೆಗಳೂ ಜನರ ದುಡ್ಡಿನ ದುಂದುವೆಚ್ಚ ಎಂದು ಬೊಬ್ಬೆ ಹೊಡೆಯುತ್ತ ಇದ್ದವು. ಅಲ್ಲಿಗೆ ನಮ್ಮ ಮಾಧ್ಯಮಗಳ ಇಬ್ಬಂದಿತನ ಮತ್ತೊಮ್ಮೆ ಬಯಲಾಯಿತು.

ಸನ್ಮಾನ್ಯ ಮುಖ್ಯಮಂತ್ರಿಗಳಿಗೂ ಮತ್ತು ದೇವೆಗೌಡ ಕುಟುಂಬದವರಿಗೂ ಅದ್ಯಾವ ಪರಿಯ ನಂಟೋ, ಸದಾ ಇಬ್ಬರೂ ಎಲ್ಲೆ ಇರಲಿ ಹೇಗೆ ಇರಲಿ ಒಬ್ಬರ ಬಗ್ಗೆ ಇನ್ನೊಬ್ಬರು ಯೋಚಿಸುತ್ತ ಇರುತ್ತಾರೆ. ಅವರು ಎನು ಮಾಡುತ್ತ ಇರಬಹುದು, ಅವರ ಮಾತಿನ ಒಳಾರ್ಥವೇನು, ಎಲ್ಲಿ ಪೂಜೆ ಮಾಡುತ್ತ ಇದ್ದಾರೆ ಇಂತಹ ಮಾಹಿತಿ ಸಂಗ್ರಹಣೆಯಲ್ಲೇ ತಮ್ಮ ಅಮೂಲ್ಯ ಸಮಯವನ್ನು ಕಳೆಯುತ್ತ
,ರಕ್ಷಣೆಗೆ ದೇವರಿಗೆ, ದೇವತೆಗಳಿಗೆ, ಮಠಗಳಿಗೆ ಮತ್ತು ಮಠಾಧಿಪತಿಗಳಿಗೆ ತಮ್ಮ ಕೈಲಾದ ಸಹಾಯವನ್ನು ಜನರ ದುಡ್ಡಿನಲ್ಲಿ ಕೊಡುತ್ತ ಇರುತ್ತಾರೆ. ಅದರೂ ಅವರ ಕಷ್ತಗಳು , ಸಂಕಷ್ತಗಳೂ ಬಗೆಹರಿದಿಲ್ಲ.

ಮತ್ತೊಂದು ಹೊಸ ಸೇರ್ಪಡೆ ಎಂದರೆ ಇವತ್ತಿನ ಪತ್ರಿಕೆಗಳಲ್ಲಿ ಮಾನ್ಯ ಮುಖ್ಯಮಂತ್ರಿಗಳೂ ಬಹಿರಂಗ ಪತ್ರ ಬರೆದಿರುವುದು, ಸಾಲದಕ್ಕೆ ಅದನ್ನು ಕರ್ನಾಟಕ ವಾರ್ತೆ ಎಂದು ಜನರ ದುಡ್ಡಿನಲ್ಲಿ ಪ್ರಕಟಣೆ ಮಾಡಿಸಿದ್ದು.

* ಮೊದಲಿಗೆ ಇದು ಕುಮಾರ ಸ್ವಾಮಿಗಳ ಮತ್ತು ಯೆಡ್ಡಿಯ ವೈಯಕ್ತಿಕ ವಿಷಯ, ಇದರಲ್ಲಿ ರಾಜ್ಯದ ಜನತೆಗೆ ಯಾವ ಲಾಭ ಇಲ್ಲ.

* ಇದನ್ನು ಕರ್ನಾಟಕ ವಾರ್ತೆ ಎಂದು , ಜನತೆಯ ಹಣವನ್ನು ಪೋಲು ಮಾಡುವುದು ಎಷ್ಟರ ಮಟ್ಟಿಗೆ ಸರಿ ?

* ಸ್ವಂತ ಡುಡ್ಡಿನಲ್ಲಿ ಹಣ ಕೊಡಲು ಯೆಡ್ಡಿಗೆ ಹಣದ ಬರವೇ, ಇಲ್ಲ ಪಕ್ಷಕ್ಕೆ ಹಣದ ಬರವೇ ?

* ಯೆಡ್ಯುರಪ್ಪ ಮುಖ್ಯಮಂತ್ರಿ ಹುದ್ದೆ ಮತ್ತು ತಾವು ಒಂದೇ ನಾಣ್ಯದ ಎರಡು ಮುಖ ಎಂದುಕೊಂಡ ಹಾಗೆ ಇದೆ. ಅಧಿಕಾರ ದುರುಪಯೋಗಕ್ಕೆ ಇದಕ್ಕಿಂತ ಒಳ್ಳೆ ಉಧಾಹರಣೆ ಬೇಕೆ ?

*ಆ ಕಡೆ ಕುಮಾರ ಸ್ವಾಮಿಗೆ ಕೂಡ ಸದಾ ಯಡಿಯೂರಪ್ಪ ಅವರದೇ ಚಿಂತೆ, ಹೇಗಾದರೂ ಮಾಡಿ ಅಧಿಕಾರದಿಂದ ಕೆಳಗೆ ಇಳಿಸಬೇಕು. ಒಟ್ಟಿನಲ್ಲಿ ಇಬ್ಬರ ಜಗಳದಲ್ಲಿ ಬಡವಾಗುತ್ತ ಇರುವುದು ನಮ್ಮ ಕರ್ನಾಟಕ ಜನತೆ ಅಷ್ಟೆ.

Friday, June 03, 2011

ಸುರೇಶಣ್ಣ ... ಚರ್ಚೆ ಮಾಡಿ ಆದರೆ ಬ್ರಾಂಡ್ ಮಾಡಬೇಡಿ


ಡಬ್ಬಿಂಗ್ ಬಗ್ಗೆ ಅನೇಕ ಚರ್ಚೆ ನಡೆಯುತ್ತ ಇದೆ, ಸಂಪಾದಕೀಯದಲ್ಲಿ ಇದರ ಬಗ್ಗೆ ಬರೆದಾಗ ಶ್ರೀ ಸುರೇಶ್ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದರು. ಅನೇಕ ಬಾರಿ ಇ ವಿಷಯದಲ್ಲಿ ನಮಗೂ ಅವರಿಗೂ ಚರ್ಚೆ ಆಗಿದೆ. ಅವರು ಹೇಳಿದ್ದ ಕೆಲವು ವಿಷಯಗಳ ಬಗ್ಗೆ ನನ್ನ ಪ್ರತಿಕ್ರಿಯೆಯನ್ನು ಅದೇ ತಾಣದಲ್ಲಿ ಹಾಕಿದ್ದೆ .. ಅದೇ ಇಲ್ಲಿದೆ ನಿಮ್ಮ ಮುಂದೆ....

ಸುರೇಶ್ ಅವರೇLink

ಮೊದಲಿಗೆ ನೀವು ಚರ್ಚೆ ಆಗಬೇಕು, ಸಿಟ್ಟಿಲ್ಲಿದ್ದ, ಸಾವಧಾನದ ಮಾತು ಆಗಬೇಕು ಆಮೇಲೆ ಒಳ್ಳೆಯ ಅಭಿಪ್ರಾಯವನ್ನು ಒಪ್ಪಿಕೊಳ್ಳೊಣ ಎಂದಿರುವ ಮಾತು ದಿಟವಾಗಿದೆ, ಆದರೆ ನಿಮ್ಮ ಬರಹದಲ್ಲಿ ಅದು ಕಾಣುತ್ತ ಇಲ್ಲ ಅನ್ನುವುದು ಕೂಡ ವಾಸ್ತವ.
ನೀವು ಚರ್ಚೆ ಎಲ್ಲ ಆಗುವ ಮುಂಚೆಯೇ ಡಬ್ಬಿಂಗ್ ಅನ್ನುವುದು ಭೂತ, ಪಿಶಾಚಿ, ಸಂಸ್ಕೄತಿ ಅಪೋಸನ ಮಾಡುತ್ತದೆ ಎಂದು ಮತ್ತು ಡಬ್ಬಿಂಗ್ ಪ್ರೊತ್ಸಾಹಿಸುವವರನ್ನು ಕನ್ನಡ ದ್ರೋಹಿಗಳು , ಸಂಸ್ಕೃತಿ ಕೊಲ್ಲುವವರು ಎಂದು ಬ್ರಾಂಡ್ ಮಾಡಿ ಆಮೇಲೆ ನಿಮ್ಮ ವಾದವನ್ನು ಕನ್ನಡ ದ್ರೋಹಿಗಳ ಮಾತು ಕೇಳಬೇಡಿ, ಭೂತ ನಿಮಗೆ ಬೇಕೆ ಎನ್ನುವ ರೀತಿಯಲ್ಲಿ ವಾದ ಇಟ್ಟಿದ್ದೀರಾ. ಆದರೆ ಅವು ಡಬ್ಬಿಂಗ್ ಯಾಕೆ ಬೇಡ ಎನ್ನುವ ಪ್ರಶ್ನೆಯನ್ನಾಗಲಿ ಇಲ್ಲ ಹೇಗೆ ನಾವು ನಾಡದ್ರೋಹಿಗಳು ಆದೆವು ಎಂದಾಗಲಿ ತಿಳಿಸಿಕೊಡುವದಿಲ್ಲ . ನಾಳೆ ಈ ವಿಷಯದಲ್ಲಿ ಚರ್ಚೆ ಆದರೂ ನೀವು ಈ ವಿಷಯದಲ್ಲಿ ನೀವೇ ಕೊಟ್ಟಿರುವ ಪೂರ್ವಗ್ರಹಪೀಡಿತ ಹೊರತಾಗಿ ನೋಡುತ್ತೀರಾ ಎಂಬುದು ನನ್ನ ಸಂಶಯ.

ನೀವೆ ಒಂದು ಕಡೆ ಮತ ಚಲಾಯಿಸಿ ಎಂದು ಹೇಳಿ, ಅದು ನಿಮ್ಮ ವಿರುದ್ಧ ಬಂದಾಗ ಅದೊಂದೆ ಮಾನದಂಡವಲ್ಲ ಎನ್ನುವುದು ಎಷ್ತರ ಮಟ್ಟಿಗೆ ಸರಿ. ಇದು ಇಂಟರನೆಟ್ ಎಂಬ ವಿಶಾಲ ಪ್ರಪಂಚ, ಇಲ್ಲಿ ಜಗತ್ತಿನ ಎಲ್ಲಾ ಕನ್ನಡಿಗರೂ ಪಾಲ್ಗೊಳ್ಳಬಹುದು ಮತ್ತು ಒಂದು ವರ್ಗದ ಹಿಡಿತದಲ್ಲಿ ಇರದ ಪ್ರಪಂಚ. ಇದು ೨ ಬಾರಿಗೆ ಡಬ್ಬಿಂಗ್ ವಿಷಯದಲ್ಲಿ ಕನ್ನಡ ಗ್ರಾಹಕನು ಒಕ್ಕೊರಿಲಿನಲ್ಲಿ ತನಗೆ ಡಬ್ಬಿಂಗ್ ಬೇಕು ಎಂದು ಹೇಳಿದ್ದಾನೆ. ಇದನ್ನು ನೀವು ಕನ್ನಡಿಗ ಸಮಾಜದ ಬೇಡಿಕೆ ಎಂದು ಪರಿಗಣಿಸೊಲ್ಲ ಎಂದರೆ ನಿಜಕ್ಕೂ ಅಂತರ್ಜಾಲದಲ್ಲಿ ಇರುವ ಎಲ್ಲಾ ಕನ್ನಡಿಗರಿಗೆ ಇದು ಅವಮಾನ ಮಾಡಿದ ಹಾಗೆ.

ರಾಷ್ಟ್ರಪ್ರಶಸ್ತಿ ಬಂದ ಪುಟ್ಟಕ್ಕನ ಹೈವೆ ಚಿತ್ರವೂ ಉತ್ತಮ ಸಮಾಜಿಕ ಸಂದೇಶ ಹೊಂದಿದೆ ಎಂದು ಬೇರೆ ಭಾಷೆಗೆ ಡಬ್ ಮಾಡಿ ಎಂದಾಗ ನೀವು ಇಲ್ಲ ನನ್ನ ಚಿತ್ರವನ್ನು ಆ ಭ್ಜಾಷೆಯಲ್ಲಿ ಡಬ್ ಮಾಡಿದರೆ ಇಲ್ಲ ಆ ಜನರು ನೋಡಿದರೆ ಸಂಸ್ಕ್ರುತಿ ವಿಭ್ರಮೆ ಅಗುತ್ತಾರೆ
ನೊಡುವದಾದರೆ ಕನ್ನಡವನ್ನು ಕಲಿತು ನೊಡಲಿ, ಇಲ್ಲ ಬಿಡಿ ಎಂದು ಹೇಳುತ್ತಿರಾ ?

ಕನ್ನಡ ಚಿತ್ರವನ್ನು ರಾಷ್ಟ್ರಪ್ರಶಸ್ತಿಗೆ ಆಯ್ಕೆ ಮಾಡುವ ಜನರಿಗೆ ಕನ್ನಡ ಬರಲೇಬೇಕು ಎಂಬ ನಿಯಮವನ್ನು ಮಾಡಿದಾಗ
ಎಷ್ಟು ರಾಷ್ತ್ರಪ್ರಶಸ್ತಿ ಬರಬಹುದು ಎಂಬುದು ನಿಮ್ಮ ಅನಿಸಿಕೆ ?. ರಾಷ್ಟ್ರಪ್ರಶಸ್ತಿ ಅಯ್ಕಾ ಸಮಿತಿಯವರು ಅನೇಕ ಭಾಷೆಗಳ ಚಿತ್ರಗಳನ್ನು ನೋಡುತ್ತಾರೆ, subtitle ಇಲ್ಲಾ ಡಬ್ಬಿಂಗ್ ಮೂಲಕ ತಮಗೆ ಅರ್ಥವಾಗುವ ಭಾಷೆಯಲ್ಲಿ ಅರ್ಥ ಮಾಡಿಕೊಳ್ಳುತ್ತಾರೆ ಅಲ್ಲವೇ ?. ಅವರಿಗೆ ಅರ್ಥವಾಗಿ ಮೆಚ್ಚಿದರೆ ಮಾತ್ರ ಪ್ರಶಸ್ತಿ ಪುರಸ್ಕರಿಸುತ್ತಾರೆ .

ಇವತ್ತು ರಾಷ್ತ್ರಪ್ರಶಸ್ತಿಗೆ ಪಡೆಯುತ್ತಿರುವ ಅನೇಕ ಕನ್ನಡ ಚಿತ್ರಗಳಲ್ಲಿ ಸಾಮನ್ಯ ಅಂಶವನ್ನು ಕಾಣಬಹುದು, ಹೆಚ್ಚು ಕಡಿಮೆ ಅದೇ ನಿರ್ಧೇಶಕರು, ಅದೇ ನಿರ್ಮಾಪಕರು , ಅದೇ ನಟ ನಟಿಯರು .. ಡಬ್ಬಿಂಗ್ ಬಂದರೆ ಇದು ರಾತ್ರೋರಾತ್ರಿ ಬದಲಾಗಿ ಕನ್ನಡಕ್ಕೆ ರಾಷ್ಟ್ರಪ್ರಶಸ್ತಿ ಬರದೇ ಹೋಗುತ್ತದೆಯಾ ?. ಅಷ್ಟೊಂದು ದುರ್ಬಲವಾಗಿದೇಯೆ ನಮ್ಮ ಚಿತ್ರರಂಗ. ಬೇರೆಯವರು ಬೇಡ
ರಾಷ್ಟ್ರಪ್ರಶಸ್ತಿ ವಿಜೇತರಾದ ನೀವು,ಶೇಷಾದ್ರಿ,ಕಾಸವರಳ್ಳಿಯವರು ನಾಳೆ ಡಬ್ಬಿಂಗ್ ಬಂದ ಕೂಡಲೆ ನಿಮ್ಮ ಚಿತ್ರ ನಿರ್ಮಾಣ ನಿಲ್ಲಿಸಿ
ಡಬ್ಬಿಂಗ್ ಚಿತ್ರ ಮಾಡುತ್ತೀರಾ ?


"ಆದರೆ ಅಂತಹ ಸಿನಿಮಾಗಳನ್ನು ನೋಡುವ ಅಭ್ಯಾಸವನ್ನೇ ನಮ್ಮ ಜನ ಕಳಕೊಂಡಿದ್ದಾರೆ ಎಂಬುದನ್ನು ತಾವು ಗಮನಿಸಬೇಕು."


ಮೊದಲಿಗೆ ಇತ್ತಿಚಿನ ದಿನಗಳಲ್ಲಿ ರಾಷ್ತ್ರಪ್ರಶಸ್ತಿ ಚಿತ್ರಗಳು ತೆರೆ ಕಾಣುತ್ತ ಇವೆ, ಇಲ್ಲವಾದಲ್ಲಿ ಖಾಸಗಿ ಪ್ರದರ್ಶನ ಇಲ್ಲಾ ಸಂವಾದ ಮಾಡಿ ಜನರಿಗೆ ತೋರಿಸುವ ಪ್ರಯತ್ನ ನಡೆಯುತ್ತ ಇದೆ. ಮುಖ್ಯವಾಗಿ ಜನರಿಗೆ ಸುಲಭ ರೀತಿಯಲ್ಲಿ ನೋಡಲು ಸಿಗುತ್ತಿಲ್ಲ ಎಂಬುದು ಸತ್ಯ. ಅದ್ದರಿಂದ ಜನರ ಮೇಲೆ ಗೂಬೆ ಕೂರಿಸುವುದನ್ನು ನಮ್ಮ ಚಿತ್ರರಂಗ ಬಿಡಬೇಕು. ಚಲನಚಿತ್ರ ಮಂದಿರಕ್ಕೆ ಬಂದ ಪ್ರತಿಯೊಬ್ಬ
ಪ್ರೇಕ್ಷಕನದು ಚಿತ್ರ ನೋಡಲು ಬಂದ ಕಾರಣ ಬೇರೆ ಇರುತ್ತದೆ. ಇಂತಹ ರಾಷ್ತ್ರಪ್ರಶಸ್ತಿ ಚಿತ್ರಗಳನ್ನು ಕನ್ನಡ ಪ್ರೇಕ್ಷಕ ತಿರಸ್ಕರಿಸಿದ ಮಾತ್ರಕ್ಕೆ ಅವನು ಸಂಸ್ಕ್ರುತಿಹೀನ ಆಗುವದಿಲ್ಲ ಎಂಬುದನ್ನು ನಾವು ಮರೆಯಬಾರದು.

.‘ಹೇರಿಕೆ’ಯೊಂದನ್ನು ಅಮಾಯಕ ಪ್ರೇಕ್ಷಕರ ಮೇಲೆ ಅವರಿಗರಿವಿಲ್ಲದೆಯೇ ಇರುವ ಕಾಲಘಟ್ಟದಲ್ಲಿ ‘ಬನವಾಸಿ ಬಳಗ’ದವರೇ ಆಗಲಿ ಮತ್ಯಾರೇ ಆಗಲಿ ತರುವುದಕ್ಕೆ ಮತ ಚಲಾವಣೆ ಎಂಬುದು ಮಾರ್ಗವಲ್ಲ.

ಯಾವುದು ಹೇರಿಕೆ ?

* ಬಹುಭಾಷಾ ವಲ್ಲಬರಲ್ಲದ ಬಹುಸಂಖ್ಯಾತ ಕನ್ನಡಿಗರು ಕನ್ನಡವಲ್ಲದ ಚಿತ್ರಗಳನ್ನು ನೋಡಬಾರದು ಎನ್ನುವುದಾ ?
* ಭಾರತಕ್ಕೆ ಇರದ ಪದ್ಧತಿಯನ್ನು ಕೇವಲ ಕನ್ನಡಿಗರ ಮೇಲೆ ಮಾತ್ರ ತಂದಿರುವುದಾ ?
* ಪ್ರೇಕ್ಶಕನನ್ನು ಅಮಾಯಕ ಎಂದು ಕರೆದು, ನಿನಗೆ ತಿಳಿಯುವದಿಲ್ಲ ನಾವೇ ಬೇರೆ ಭಾಷೆ ಚಿತ್ರಗಳನ್ನು ನೋಡಿ ನಿನಗೆ ಎನು ಬೇಕು ಬೇಡ ಎಂಬುದನ್ನು ನಿಯಂತ್ರಿಸುವ ಕಪಿಮುಷ್ಟಿ ವ್ಯವಸ್ಥೆಯಾ ?.
* ಒಂದು ಕಟ್ಟುಪಾಡು ಹಾಕಿ ಅದರ ಪರಿಧಿಯಲ್ಲಿ ಬಂಧಿಸಿ, ಕಾಲಘಟ್ಟದಲ್ಲಿ ಅದು ಅನ್ವಯಿಸುತ್ತದೆಯಾ ಇಲ್ವಾ ಎಂಬುದಕ್ಕೆ
ಆಸ್ಪದ ಕೊಡದ ಹಿಡಿತವೇ ?

ಪ್ರೇಕ್ಷಕನು ಅಮಾಯಕನಲ್ಲ, ಬುದ್ದಿವಂತ, ಅವನಿಗೆ ಎನು ಬೇಕು ಬೇಡ ಎನ್ನುವುದು ಗೊತ್ತ್ರು ಎಂದು ಹೇಳುವ ದನಿ ಕನ್ನಡ ಗ್ರಾಹಕನ ದನಿಯಾಗಿದೆ. ಇದೆ ಮತ ಚಲಾವಣೆಯಲ್ಲಿ ಸಾಬೀತಾಗಿದೆ.

"ಭಾರತದ ಸಂವಿಧಾನದಲ್ಲಿಯೇ ಪ್ರಾದೇಶಿಕ ಭಾಷೆಗಳ ರಕ್ಷಣೆ ಆಯಾ ರಾಜ್ಯಗಳ ಹೊಣೆ ಎಂಬ ಸಾಲಿದೆ. ಆ ಸಾಲನ್ನು ಹಿಡಿದರೆ ಭಾಷೆಯ ಮೇಲೆ ಆಗುವ ಯಾವ ಆಕ್ರಮಣವನ್ನಾದರೂ ಹೊಡೆದಟ್ಟಬಹುದು. ಮುಂದುವರೆದು ಹೇಳುವುದಾದರೆ, ‘ಡಬ್ಬಿಂಗ್ ತಡೆ’ ಎನ್ನುವುದು ಸಾಮಾಜಿಕ ಕಟ್ಟುಪಾಡು."

ಇದೇ ವಾದವನ್ನು ೭ ವಾರ ಚಲನಚಿತ್ರ ತಡೆಗೆ ತಂದಾಗ ನಮ್ಮ ಸರ್ವೋಚ್ಚ ನ್ಯಾಯಾಲಯ ಸರಸಗಾಟಾಗಿ ತಿರಸ್ಕರಿಸಿತ್ತು. ನಮಗೆ ಅರ್ಥವಾಗುವ ನಮ್ಮ ಪರಿಸರಕ್ಕೆ ಹತ್ತಿರ ಆಗುವ ಸಂವಹನ ಕ್ರಿಯೆಯೇ ನಮ್ಮ ಕನ್ನಡ ಭಾಷೆ. ಭಾರತೀಯ ಪ್ರಜೆಯಾಗಿ ಕನ್ನಡಿಗರಿಗೆ ಕನ್ನಡದಲ್ಲಿ ಮನರಂಜನೆ ಸಿಗಬೇಕು ಎಂಬುದು ನಮ್ಮ ಸಂವಿಧಾನದ ಹಕ್ಕಾಗಿದೆ. ಸಾಲದಕ್ಕೆ ಡಬ್ಬಿಂಗ್ ಕೇಳುತ್ತ ಇರುವುದು ಕನ್ನಡಿಗರು, ಕನ್ನಡಿಗರಿಗಾಗಿ ಮತ್ತು ಕನ್ನಡಗೋಸ್ಕರ ಎಂಬುದು ಗಮನದಲ್ಲಿ ಇಟ್ಟಾಗ ಅದನ್ನು ಕೊಡುವ ಹೊಣೆ ರಾಜ್ಯ ಸರಕಾರಕ್ಕೆ ಇದೆ.

ಕನ್ನಡ ಸಮಾಜ ಇಂದು ಡಬ್ಬಿಂಗ್ ಬೇಕು, ನಮ್ಮ ಭಾಷೆಯಲ್ಲಿ ನಮಗೆ ಮನರಂಜನೆ ಬೇಕು ಎಂದು ಕೇಳುತ್ತ ಇರುವಾಗ
ಇಲ್ಲ ಕೋಡುವದಿಲ್ಲ ಎನ್ನುವುದು ಸಂವಿಧಾನಿಕ DENY OF FUNDAMENTAL RIGHTS ಅಗೊಲ್ವಾ ?. ಖಂಡಿತ ಚರ್ಚೆ ಆಗಲಿ, ಆದರೆ ಅದು ಆಗುವ ಮುಂಚಯೇ ಅವುಗಳನ್ನು ಬ್ರಾಂಡ್ ಮಾಡುವುದು ಬೇಡ ಅಲ್ಲವೇ ?

೧೯೬೫ ರಲ್ಲಿ ಇದ್ದ ರಾಜತಾಂತ್ರಿಕ ಸಂಬಂಧಗಳು ಇವತ್ತು ಬದಲಾಗಿಲ್ವಾ , ಅವತ್ತು ನಮ್ಮ ಅಜ್ಜ ಹಾಗೆ ಮಾಡಿದ್ರು, ಹೀಗೆ ಹೇಳಿದ್ರೂ
ನಮ್ಮ ಚಾಚ ನೆಹರೂ ಅವತ್ತು ಆ ನಿರ್ಣಯ ತೆಗೆದುಕೊಂಡಿದ್ದರೂ ಅದ್ದರಿಂದ ಇವತ್ತು ಅದನ್ನೇ ಮುಂದುವರೆಸೋಣ ಎನ್ನುವ ಮಾತನ್ನು ನಾವು ಒಪ್ಪುತ್ತೆವೆಯೇ ?

ಹಿಂದೆ ಈ ಕಟ್ಟುಪಾಡು ಆದಾಗ ಎಷ್ಟರ ಮಟ್ಟಿಗೆ ಕನ್ನಡ ಗ್ರಾಹಕನ್ನು ಮತ್ತು ಕನ್ನಡ ಸಮಾಜದ ಮಿಡಿತವನ್ನು ಮತ್ತು ಅಭಿಪ್ರಾಯವನ್ನು ಪರಿಗಣಿಸಿತ್ತು ಎಂಬುದು ಪ್ರಶ್ನಾರ್ಹ. ಇವತ್ತಿನ ತಂತ್ರಜ್ಞಾನ ಯುಗದಲ್ಲಿ ಎಲ್ಲ ವರ್ಗದವರು ತಮ್ಮ ಅಭಿಪ್ರಾಯ ಹೇಳಿಕೊಳ್ಳಲು, ಹಂಚಿಕೊಳ್ಳಲು ಸಾಧ್ಯವಾಗಿದೆ. ಅದ್ದರಿಂದ ಮುಕ್ತವಾಗಿ ಚರ್ಚೆ ಮಾಡೊಣ.

ಕೊನೆಯದಾಗಿ, ಅಣ್ಣವರು ಹೇಳಿದ ಹಾಗೆ ಕಾಲಕ್ಕೆ ತಕ್ಕಂತೆ ನಡೆಯಬೇಕು, ತಾಳಕ್ಕೆ ತಕ್ಕಂತೆ ಕುಣಿಯಬೇಕು ಅಲ್ಲವೇ ...