Saturday, March 08, 2008

ಕಾಣದಂತೆ ಮಾಯವಾದರೋ..ನಮ್ಮ ಕನ್ನಡಿಗರು.


ಐ.ಟಿ ಕನ್ನಡಿಗರು ಕಾಣೆಯಾಗಿದ್ದಾರಾ ?, ಎನಪ್ಪಾ ಈ ಪ್ರಶ್ನೆ ಕೇಳುತ್ತಾ ಇದ್ದೀನಿ ಅಂತ ನಿಮಗೆ ಅನಿಸಿರಬಹುದು. ಯಾಕೆ ಎಂದರೆ, ಐ.ಟಿ ಕ್ಷೇತ್ರದಲ್ಲಿ ಅನುಭವ ಇರುವ ವೃತ್ತಿಪರರು ಸಿಗುತ್ತಾ ಇಲ್ಲಾ ಅಂತ ಸಾಮನ್ಯ ಕೊರಗು. ಇದು ನನ್ನ ಅಭಿಮತವು ಕೂಡ.


ಕಾಣದಂತೆ ಮಾಯವಾದರೋ ..

ನಿಮಗೆ ನನ್ನ ಮಾತಿನಲ್ಲಿ ನಂಬಿಕೆ ಇರದಿದ್ದರೆ, ನೀವೆ ಒಂದು ಉದ್ಯೋಗ ಅವಕಾಶವಿರುವ
ಒಂದು ಮಿಂಚೆಯನ್ನು ಕಳಿಸಿ ನೋಡಿ. ಒಂದು ತಿಂಗಳೂ ಅಲ್ಲಾ , ಒಂದು ವರ್ಷದ ನಂತರವೂ ನಿಮಗೆ ಸಿಗುವ ಕನ್ನಡಿಗರ ಸಿ.ವಿ ಬೆರಳಣಿಕೆ ಅಷ್ಟು. ಇದೇ ಸಮಯದಲ್ಲಿ
ನಿಮ್ಮ ಮಿಂಚೆ, ಸಾಗರೋತ್ತರ ದಾಟಿ, ಎಲ್ಲಾ ರಾಜ್ಯದವರಿಗೂ ದೊರಕಿ, ಬಿಮಾರು ರಾಜ್ಯಗಳಿಂದ ಡಜನ್ ಅಷ್ಟು ಸಿ.ವಿ ನಿಮ್ಮ ಇನಬಾಕ್ಸನಲ್ಲಿ ಕುಳಿತಿರುತ್ತದೆ. ಇನ್ನೂ ನಮ್ಮ ನೆರೆ ರಾಜ್ಯಗಳ
ಜನರಿಗೆ ಮಿಂಚಿನ ಹಾಗೆ ವಿಷಯ ತಿಳಿದಿರುತ್ತದೆ. ನಿಮ್ಮ ಮೊಬೈಲ್ ಸಂಖ್ಯೆ ಕೊಟ್ಟಿದ್ದರೆ ಮುಗಿಯಿತು. ಯಾರೋ ವರ್ಮ, ಇಲ್ಲಾ ಪಳನಿ ನಮ್ಮ ತಮ್ಮನಿಗೆ ಕೆಲ್ಸ ನೋಡುತ್ತ ಇದ್ದೇವೆ
ಯಾವ ಕಂಪೆನಿ, ಎಷ್ತು ಸಂಬಳ ಕೊಡುತ್ತಾರೆ, ಸಿ.ವಿ ಫಾರ್ವಡ್ ಮಾಡೋದಾ ಅಂತ ಪ್ರಶ್ನೆಗಳ ಸುರಿಮಳೆ ಹಾಕುತ್ತಾರೆ. ಲೋ .. ಅಣ್ಣಾ ಮುಚ್ಕೋಂಡು ಫೊನ್ ಮಡಗು, ಆ ಕೆಲ್ಸ ಈಗ ಖಾಲಿ ಇಲ್ಲಾ
ಅಂತ ನಯವಾಗಿ ಹೇಳಿದರೂ ಸಹಾ, ಸಿ.ವಿ ಕಳಿಸಿರುತ್ತೆನೆ ಮುಂದೆ ಅವಕಾಶ ಬಂದರೆ ಮೊದಲು ನನ್ನ ತಮ್ಮನ ಸಿ.ವಿ ಕಳಿಸಿ ಅಂತ ಹೇಳಿ ಮಾತು ಮುಗಿಸುತ್ತಾರೆ. ಎಪ್ಪಾ ಯಾಕಪ್ಪಾ ಈ ಮಿಂಚೆ ಕಳಿಸಿದೆ,
ಕನ್ನಡದಲ್ಲಿ ಕಳಿಸಿದರೂ, ಅದು ಭಾಷಾಂತರವಾಗಿ ಹೋಗಿ ಈ ಮಟ್ಟಿಗೆ ಪ್ರತ್ಯುತ್ತರ ಸಿಗುತ್ತದೆ ಎಂದು ಆಶ್ಚರ್ಯ ಆಗುತ್ತದೆ.

ಬದಲಾವಣೆ ಬೇಡವೇ ?

ಇವೆಲ್ಲಾ ನಡೆದ ಮೇಲೆ ಪ್ರಶ್ನೆ ಬರುವುದೇ ನಮ್ಮ ಕನ್ನಡಿಗರಿಗೆ ಕೆಲ್ಸ ಬೇಡವೇ?, ಒಂದು ಕೆಲ್ಸಕ್ಕೆ ಸೇರಿಕೊಂಡ ಮೇಲೆ ಅವರು ಅಲ್ಲಿ ಫೆವಿಕಾಲ್ ಹಾಕಿ ಕುಳಿತಿರುತ್ತಾರಾ ?, ಹೊಸ ಹೊಸ ತಂತ್ರಜ್ಞಾನ ಮತ್ತು ಹೊಸ
ಅನುಭವಗಳಿಗೆ ಕನ್ನಡಿಗರ ಮನ ಮಿಡಿಯುವದಿಲ್ಲವೇ ?. ಪ್ರತಿ ವರುಷ ಲಕ್ಷಾಂತರ ಸಂಖ್ಯೆಯಲ್ಲಿ ಆಚೆ ಬರುವ ನಮ್ಮ ಕನ್ನಡಿಗ ಪಧವಿದರರು, ಎಲ್ಲಿ ಮಾಯ ಆಗಿರುತ್ತಾರೆ ?. ಅದು ಹಿಂದಿನ ೧೦ ವರುಷಗಳ ಲೆಕ್ಕ ತೆಗೆದುಕೊಂಡರೆ
ಸಿಗುವ ಸಂಖ್ಯೆ ಎಷ್ಟು ??. ಅಂದರೆ ೪-೫ ಲಕ್ಷದಲ್ಲಿ ಕೇವಲ ೨-೩ ಜನ ಮಾತ್ರ ಕೆಲ್ಸ ಬದಲಾಯಿಸುತ್ತಾರ ಎಂದು ನೆನೆಸಿಕೊಂಡರೆ ಮೈ ನಡುಕ ಆಗುತ್ತದೆ.
ಕೆಲ್ಸ ಸಿಗುತ್ತಿಲ್ಲಾ, ಕನ್ನಡಿಗರಿಗೆ ಕೆಲ್ಸದಲ್ಲಿ ಅನ್ಯಾಯ ಮಾಡುತ್ತ ಇದ್ದಾರೆ ಅನ್ನೊ ಮಾತುಗಳು ಸಪ್ಪೆ ಅನಿಸುವದಿಲ್ಲವೇ. ಕೆಲ್ಸಕ್ಕೆ ಪ್ರಯತ್ನ ಪಟ್ಟರೆ ತಾನೇ ಅನ್ಯಾಯ ಅಗುತ್ತಿದೆ ಎನ್ನಬಹುದು. ಸುಮ್ಮನೆ ಪ್ರಯತ್ನ ಪಡದೆ
ದೊರಕಬೇಕು ಅನ್ನುವದಕ್ಕೆ ಇದೇನು ಮಂತ್ರದಿಂದ ಉದರುವ ಮಾವಿನ ಹಣ್ಣೇ ?.

ನನ್ನ ಅನುಭವ ಮಾತ್ರ ಅಲ್ಲಾ

ಇದು ಕೇವಲ ನನ್ನ ಅನುಭವ ಅಲ್ಲಾ, ಈ ಹಿಂದೆ ಕೆಲ ಸಂಸ್ಥೆಗಳ HR ಆಗಿದ್ದ ನನ್ನ ಗೆಳಯರಿಗೆ ಕನ್ನಡಿಗರಿಗೆ ಮೊದಲು ಆದ್ಯತೆ ಕೊಡ್ರಪ್ಪಾ ಅಂತ ದಂಬಾಲು ಬೀಳುತ್ತಿದ್ದೆ. ಆಗ ಅವರು " ಅಯ್ಯೋ ಗುರು... ನಮ್ಮ ಜನ
ಕೆಲ್ಸಕ್ಕೆ ಅರ್ಜಿ ಹಾಕುವುದೇ ಇಲ್ಲ್ದಾ, ಅರ್ಜಿ ಹಾಕಿದರೆ ತಾನೇ ಕೊಡೊದು" ಅಂತ ಹೇಳುತ್ತ ಇದ್ದಿದ್ದನ್ನು ನಾನು ಸಬೂಬು, ಇಲ್ಲಾ ಯಾರದೋ ಕಿತಾಪತಿ ಎಂದು ಕೊಳ್ಳುತ್ತಿದೆ. ಸಾಲದಕ್ಕೆ ನಮ್ಮ ಹಿಂದಿನ ಪೀಳಿಗೆ ಜನ
ಕನ್ನಡಿಗರು ಅರ್ಜಿ ಹಾಕಿಲ್ಲ, ಅಂತ ಕನ್ನಡಿಗರು ಹಾಕಿದ್ದ ಅರ್ಜಿಗಳನ್ನು ಹರಿದು ಹಾಕಿದ್ದು ಜ್ಞಾಪಕ ಬರುತ್ತಿತ್ತು. ನಮ್ಮ ಕನ್ನಡ ಗೂಗಲ್ ಗುಂಪುಗಳಲ್ಲಿ ದಿನಕ್ಕೆ ೧೦-೧೨ ಉದ್ಯೋಗ ಅವಕಾಶಗಳು ಬರುತ್ತಾ ಇರುತ್ತದೆ, ಅದು ಉತ್ತಮ ಮತ್ತು ಅತ್ಯುತ್ತಮ ಸಂಸ್ಥೆಗಳಿಗೆ, ಆದರೆ ಇವು ಯಾಕೋ ನಮ್ಮ ಕನ್ನಡಿಗನ ಗಮನ ಸೆಳೆಯುವದಿಲ್ಲ. ಅದು ಕೇಳಿರುವ ಪರಿಣಿತಿ ಎನು ರಾಕೆಟ್ ಸೈಸ್ನ ಅಲ್ಲಾ, ಇಂದಿನ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬಳಸುವ ತಂತ್ರಜ್ಜಾನ ಕೇಳಿದರೂ ಸಿಗುವ ಉತ್ತರ ಸೊನ್ನೆಯೇ

ಹೊಗ್ಲಿ ಬರುವ ಒಂದಿಬ್ಬರ ಕಥೆ ಎನೂ ?

ಹೋಗ್ಲಿ ಪಾಲಿಗೆ ಬಂದಿದ್ದು ಪಂಚಾಮೃತ ಅನ್ನುವ ಹಾಗೇ ಕೇಳಿರದ ಸಂಸ್ಥೆಗಳಲ್ಲಿ ಕೆಲ್ಸ ಮಾಡಿರುವ ಕನ್ನಡಿಗರಿಗೆ ಸಂದರ್ಶನಕ್ಕೆ ಕರೆದರೆ, ಅವರೂ ಮಾನ ಕಳೆಯುತ್ತಾರೆ. ಯಾಕಪ್ಪಾ ಅಂದರೆ
ಅಯ್ಯೊ ಓದಿಕೊಂಡು ಬಂದಿರಲಿಲ್ಲ, ತುಂಬಾ ಕಠಿಣ ಆಗಿತ್ತು ಅಂತಾರೆ. ಇವರು ಕೊಟ್ಟ ಉತ್ತರಗಳನ್ನು ನೋಡಿದರೆ ನಿಮಗೆ ಯಾಕಾದರೂ ಇವರನ್ನು ಸಂದರ್ಶನಕ್ಕೆ ಕಳಿಸಿದೆವೋ ಅಂತ ಅನಿಸುತ್ತದೆ.
ಸಂದರ್ಶನಕ್ಕೆ ಬರುವಾಗ ಓದಿಕೊಂಡು ಬರಬೇಕು ಅಂತ ಬಾಯಿ ಬಿಟ್ಟು ಹೇಳಬೇಕಾ.
ಹೊಗ್ಲಿ..ಬರೋ ಜನಕ್ಕೆ ಸ್ವಲ್ಪ ಮಟ್ಟಿಗೆ ಓದಿಕೊಂಡು ಬನ್ನಿ ಅಂತ ಹೇಳಿದರೂ ಪರಿಣಾಮ ಅಷ್ಟೆ. ನಾನು ತುಂಬಾ ಚೆನ್ನಾಗಿ ಮಾಡಿದ್ದೆ, ಆದ್ರೂ ನನ್ನ ಆರಿಸಲಿಲ್ಲ, ಕನ್ನಡಿಗರಿಗೆ ಅನ್ಯಾಯ ಅಂತ ಬೊಂಬಡ ಹೊಡೆಯುತ್ತಾರೆ.
ಬೇರೆ ಭಾಷೆ ಜನ ನೋಡಿ, ಸುಮ್ಮನೆ ಸಂದರ್ಶನ ಇಲ್ಲದೇ ಇದ್ದರೂ ಆಯ್ಕೆ ಮಾಡೊಲ್ವಾ, ನೀವು ಯಾಕೆ ಹಾಗೆ ಮಾಡಬಾರದು ಅಂತ ಪ್ರಶ್ನೆಗಳನ್ನೇ ಸುರಿಸುತ್ತಾರೆ. ಹಸಿವಾಗಿದೆ ಎಂದು ಹುಲ್ಲು ತಿನ್ನಬೇಕೆ, ಜೊಳ್ಳನ್ನು ತೆಗೆದುಕೊಂಡು
ಮುಂದೆ ನಾವು ಅನುಭವಿಸಬೇಕೆ ಎಂದು ಮಾತಿಲ್ಲದೆ ಸುಮ್ಮನೆ ಆಗುತ್ತೆವೆ.

ಇನ್ನೂ.. ತ್ವರಿತವಾದ ಉದ್ಯೊಗ ಖಾಲಿ ಇದೆ ಅಂತ ಗೆಳೆಯರಿಗೆ ಹೇಳಿ, ಸಂಕಷ್ತದಲ್ಲಿ ಇರುವ ಕನ್ನಡಿಗರಿಗೆ ಸಹಾಯ ಮಾಡೋಣ ಅಂತ ಕರೆ ಮಾಡಿದರೆ, ನನಗೆ ಟೆಸ್ತ ಬರೆಯಲು ಸಮಯ ಇಲ್ಲಾ, ಮುಂದಿನ ವಾರ
ಬರುತ್ತೆನೆ ಅನ್ನುತ್ತಾರೆ. ಗುರು..ತುಂಬಾ ಅರ್ಜೆಂಟು ಇದೆ, ನೋಡು ಒಳ್ಳೆಯ ಅವಕಾಶ ಅಂತ ಅಂಗಲಾಚಿದರೂ ಬರುವದಿಲ್ಲಾ. ಇಷ್ತೆಲ್ಲಾ ಮಾಡಿದ ಮೇಲೆ ಅನಿಸುವುದು ಯಾಕೆ ನಾನು ಇಷ್ಟೊಂದು ಇವರನ್ನು ಕಾಡಿ ಬೇಡಬೇಕು
ಬೇಕಿದ್ದರೆ, ಅವರೇ ಬರುತ್ತಾರೆ. ಹಸಿವಿಲ್ಲದವನಿಗೆ ಮೃಷ್ಟಾನಾ ತೋರಿಸಿದರೂ ತಿನ್ನೊಲ್ಲಾ ಅಂತ ನನಗೆ ನಾನು ಸಮಧಾನ ಮಾಡಿಕೊಂಡಿದ್ದೆನೆ.

ಕೆಲ್ಸದ ಬದಲಾವಣೆಗೆ ಕನ್ನಡಿಗನ ಆಸರೆ ಬಯಸುವದಿಲ್ಲ.

ಇದು ನನಗೆ ಕಂಡು ಬಂದ ಇನ್ನೊಂದು ಅಂಶ. ಕನ್ನಡಿಗರೂ ಕನ್ನಡಿಗರ ಮುಖಾಂತರ ಕೆಲಸಕ್ಕೆ ಪ್ರಯತ್ನ ಪಡುವದಿಲ್ಲ, ಇದಕ್ಕೆ ಎನು ಕಾರಣವೋ ಗೊತ್ತಿಲ್ಲ.ಅದಕ್ಕೆ ಪ್ರತಿ ಬಾರಿ ಪ್ರತಿಯೊಬ್ಬ ಕನ್ನಡಿಗನಿಗೂ ಇದು ಅನುಭವ ಆಗುತ್ತದೆ.
ಸರಿ , ಅವರಿಗೆ ಸರಿ ಅನಿಸುವ ಮಾರ್ಗದಲ್ಲಿ ಕೆಲಸವನ್ನು ಅರಿಸುತ್ತಾರೆ ಎಂದುಕೊಂಡು ಸುಮ್ಮನೆ ಇರಬೇಕು ಅಷ್ಟೆ.