Tuesday, February 27, 2007

ಭಾಷಾಭಿವೃದ್ದಿ...ಒಂದು ಚಿಂತನೆ.

ಜಗತ್ತಿನಲ್ಲಿ ಭಾಷೆಯಲ್ಲಿ ಮುಖ್ಯ ಅಂಶ ಕಾಣುವದೆನೆಂದರೆ ಕಾಲಕ್ರಮೇಣ ಅದರಲ್ಲಿ ಬದಲಾವಣೆ,ಇದು ನಿರಂತರ ಮತ್ತು ಸ್ವಾಭಾವಿಕ. ಭಾಷೆಯಲ್ಲಿ ಮೂಲ ರೂಪ ಅನೇಕ ಬಾರಿ ಬದಲಾವಣೆಗೊಂಡು ಇನ್ನೊಂದು ರೂಪವನ್ನು ತಾಳಿದೆ,ಇದ್ದ ರೂಪ ಹೋಗುವುದು,ಇನ್ನೊಂದು ಹೊಸ ರೂಪ ಬರುವುದು ನಿತ್ಯ ನಡೆಯುವ ಘಟನೆಗಳು.

ಇಂಥ ಬದಲಾವಣೆಯನ್ನು ತಪ್ಪು-ಸರಿ ಎಂದು ಅಳೆಯಲು ಹೋಗಬಾರದು,ರೂಪಾಂತರಕ್ಕೆ ಅನೇಕ ಕಾರಣಗಳಿರುತ್ತದೆ,ರೂಪಾಂತರ ರಾತ್ರೊ-ರಾತ್ರಿ ಆಗುವ ಒಂದು ಪ್ರಕ್ರಿಯೆ ಅಲ್ಲ. ಅನೇಕ ವರುಷ,ಕೆಲವು ಸಾರಿ ಶತಮಾನಗಳೇ ಬೇಕಾಗಬಹುದು. ಮಹಾತ್ಮನವರು ಹೋಗಿ ಮಹಾತ್ಮವರು ಆಗಿದೆ, ಇದನ್ನು ಸದೃಶಕಾರಲೋಪ ಎನ್ನುತ್ತಾರೆ, ಹಾಗೆ ಕಾಗದ ಹೋಗಿ ಕಾದಗ ಆಗಿದೆ. ಇದನ್ನು ವರ್ಣಪಲ್ಲಟ ಎನ್ನುತ್ತಾರೆ. ಗಮನಿಸಿನೋಡಿ ಅಕ್ಷರಗಳು ಹಿಂದೆ ಮುಂದೆ ಆಗುತ್ತದೆ. ಅನೇಕ ಬಾರಿ ಪ್ರತಿ ಮನುಷ್ಯನಿಗೂ ತಾನು ಆಡುವ ಭಾಷೆಯಲ್ಲಿ ವರ್ಣಪಲ್ಲಟ ಮಾಡುವುದು ಸರ್ವೆಸಾಮನ್ಯ. ಅವಸರವಾಗಿ ಮಾತನಾಡುವಾಗ ಇದು ಹೆಚ್ಚು ಆಗುತ್ತದೆ, ಬಹುಶ ವರ್ಣಪಲ್ಲಟವೇ ಉಳಿದಿರಬಹುದು.

ಪ್ರಕೃತ ಶಬ್ಧಗಳು ಹೆಚ್ಚಾಗಿ ಪ-ಕಾರದಿಂದ ಆಗುತ್ತದೆ,ಉದಾ:- ಪೂಚಯ್(ಪೂಜೆ),ಪೂ(ಹೂ),ಪಾಲು(ಹಾಲು).. ಗಮನಿಸಿ ನೋಡಿ ಒಂದು ಚಿಕ್ಕ ಮಗು ಕೂಡ ಭಾಷೆಯನ್ನು ಕಲಿಯುವ ಹೋಸ್ತಿಲಲ್ಲಿ "ಹ" ಕಾರ ಬದಲು "ಅ"ಕಾರವನ್ನು ಇಲ್ಲ "ಪ" ಕಾರವನ್ನು ಬಳಸುತ್ತವೆ. ಯಾಕೆ ಅಂದರೆ ಮಕ್ಕಳಿಗೆ ಅದು ಸ್ವಾಭಾವಿಕ ಮತ್ತು ಬೇಗ ಉಚ್ಚರಿಸಲು ಬರುವ ಶಬ್ಧ. ನಮ್ಮ ಭಾಷೆಯಲ್ಲಿ "ಪ್‍ವು" "ಹ್" ಆಗಿ ಅನೇಕ ಕಡೆ ಮಾರ್ಪಾಡಾಗಿದೆ. ಪಾಲು ಹೋಗಿ ಹಾಲು, ಪಲ್ಲ್ ಹೋಗಿ ಹಲ್ಲು. ಇಲ್ಲಿ ಇನ್ನೊಂದು ಅಂಶ ಕಂಡುಬರುತ್ತದೆ, ಮೂಲ ರೂಪಗಳು ಇನ್ನು ನಮಗೆ ತಮಿಳ್ ಮತ್ತು ತೆಲಗು ಭಾಷೆಯಲ್ಲಿ ಕಾಣಸಿಗುತ್ತದೆ. ಇವುಗಳನ್ನು ಉಚ್ಚರಿಸುವಾಗ ಧ್ವನಿ ವ್ಯತ್ಯಾಸದಿಂದ ಬದಲಾವಣೆಯಾಗಿರುವ ಸಾಧ್ಯತೆ ಇದೆ. ಈ ರೀತಿ ಬದಲಾವಣೆ ಆದಾಗ ಮೂಲರೂಪ ಹಾಗು ಬದಲಾದ ರೂಪ ಎರಡನ್ನು ಬಳಸಿಕೊಳ್ಳಬಹುದು. ಹಿಂದೆ ಹೇಳಿದ ಹಾಗೆ ರೂಪಾಂತರಕ್ಕೆ ದ್ವನಿಯೇ ಮುಖ್ಯ ಅಂಶವೆಂದರೆ ತಪ್ಪಾಗಲಾರದು. ಭೌಗೋಳಿಕವಾಗಿ ಭಾಷೆ ಕೂಡ ಅನೇಕ ಪ್ರಭೇದಗಳನ್ನು ಪಡೆದಿದೆ ಅದರಲ್ಲಿ ""ಪ್‍ವು" "ಅ" ಆಗಿ ಪರಿವರ್ತನೆಯಾಗಿರುವುದು. ಅರಸೀಕೆರೆ,ಹಾಸನ,ಮೈಸೂರಿನ ಕೆಳಭಾಗದ ಜನರಲ್ಲಿ ಇದು ಹೆಚ್ಚು ಕಾಣುತ್ತದೆ. ಇದು ತಪ್ಪಲ್ಲ,ಇದು ಸ್ವಾಭಾವಿಕ. ಅದನ್ನು ಹೀಯಾಳಿಸಬಾರದು,ಆ ಪದಗಳನ್ನು ನಮ್ಮ ಪದ ಭಂಡಾರದಲ್ಲಿ ಇಟ್ಟುಕೊಳ್ಳಬೇಕು. ಸಂದರ್ಭಕ್ಕೆ ತಕ್ಕ ಹಾಗೆ ಇವುಗಳನ್ನು ಬಳಸಿಕೊಳ್ಳುವುದು ನಮಗೆ ಬಿಟ್ಟಿದ್ದು. ಉದಾ:- ಕಾಲು ಎಂದರೆ ೨ ಅರ್ಥವಿದೆ,ಒಂದು ವಾಕ್ಯದಲ್ಲಿ ಬಳಸುವ ಬಳಕೆಯಿಂದ ಅದರ ಅರ್ಥ ಬದಲಾಗುತ್ತದೆ. ಹಿಂದೆ ಪಾಲುವಿನ ಮೂಲರೂಪಕ್ಕೆ ಬೇರೆ ಅರ್ಥ ಕೂಡ ಬಂದಿದೆ,ಆದರೆ ೨ ಅರ್ಥಗಳನ್ನು ಸಂದರ್ಭಕ್ಕೆ ತಕ್ಕ ಹಾಗೆ ಬಳಸಬಹುದು.


ಅನೇಕ ಬಾರಿ ಕಾಲಕ್ರಮೇಣ ಶಬ್ಧಗಳು ಕೂಡ expire ಆಗುತ್ತವೆ ಅಂದರೆ ತಪ್ಪಾಗಲಾರದು, ಹಿಂದೆ ನಮ್ಮ ಹಿರಿಯರು ಬಳಸುತ್ತಿದ್ದ ಅನೇಕ ಪದಗಳು ಆಗಿನ ಸಮಾಜದ ವಸ್ತುಗಳ ಹೆಸರುಗಳು ಇಂದು ಕೇಳಸಿಗದು,ಕೇಳಿದರೂ ಅದರ ಅರ್ಥವನ್ನು ಮನದಲ್ಲಿ ಚಿತ್ರಣ ಬರದು, ಮುಂದೆ ಇದರ ಹೊಸ ಪದಗಳು ಹಳೆಯ ಪದಗಳನ್ನು ಹಿಂದೆ ಹಾಕುತ್ತವೆ. ಭಾಷೆಯ ಬದಲಾವಣೆಯನ್ನು TIME and SPACE ಗಳಲ್ಲಿ ಅಳೆಯಬಹುದು, ಅಂದರೆ ಭಾಷೆಯ ಬದಲಾವಣೆಗೆ ಕಾಲ ಮತ್ತು ದೇಶಗಳೆ ಕಾರಣ.ಒಂದು ಸಂಸಾರ ಹೇಗೆ ಬೇರೆಯಾಗಿ ಬೇರೆ ಬೇರೆಯಾಗಿ ವಾಸಿಸಿ ಅವರದೇ ಹೊಸ ಸಂಸಾರದ ಕಟ್ಟ್ಟಳೆಯನ್ನು ತರುತ್ತಾರೊ,ಹಳೆ ಪದ್ಧತಿಗಳನ್ನು ಹೊಸ ಪದ್ದತಿಗಳನ್ನಾಗಿ ಮಾಡಿಕೊಳ್ಳುತ್ತಾರೋ ಹಾಗೆ ಭಾಷೆಯಲ್ಲಿ ಕೂಡ ಇದರ ಸಾಮ್ಯತೆಯನ್ನು ಕಾಣಬಹುದು. ಇದನ್ನು ತಮಿಳ್ ಭಾಷೆಯಲ್ಲಿ ಚೆನ್ನಾಗಿ ಕಾಣಬಹುದು, ದಕ್ಷಿಣ ಆಫ್ರಿಕಾಗೆ ಹೋದ ತಮಿಳರ ಭಾಷೆ,ಶ್ರೀಲಂಕಾದಲ್ಲಿ ನೆಲಸಿರುವ ಜನರ ಭಾಷೆ, ಮತ್ತು ನಮ್ಮ ತಮಿಳುನಾಡಿನ ಜನರ ಭಾಷೆಯನ್ನು ನೋಡಿದರೆ, ೩ ಬೇರೆ ಭಾಷೆಯಾಗಿ ಕಾಣತ್ತದೆ. ಇಲ್ಲಿ ಕಾಲ-ಮತ್ತು-ದೇಶಗಳ ಅಂತರವೇ ಮುಖ್ಯ ಕಾರಣ. ಒಂದು ಪ್ರದೇಶಕ್ಕೆ ಹೋಗಿ ನೆಲಸಿರುವವರ ಮೇಲೆ ಅಲ್ಲಿನ ಬಾಹ್ಯ ಅಂಶಗಳು ಬಹಳ ಪ್ರಭಾವ ಮಾಡುತ್ತದೆ.ಇದಕ್ಕೆ ನಾನು ಹೇಳಿದ್ದ ಮೈಸೂರಿನ ಕೆಳ ಇರುವರಿಗೆ "ಅ" ಮತ್ತು "ಹ" ಕಾರ ಉಚ್ಚಾರಣೆಯ ಬಗ್ಗೆ ಬೇಧವಿದೆ. ಇದು ಇಂದಿನ ಬದಲಾವಣೆಯಲ್ಲ, ಶತನಾನಗಳಷ್ಟು ಹಳೇಯದು ಎಂದು ಪಂಡಿತರ ಅಂಬೋಣ. ೧೯೪೦ ದಶಕದಲ್ಲೇ ನಮ್ಮ ಕೈಲಾಸಂ ಇದರ ಬಗ್ಗೆ ಜೋಕ್ ಮಾಡಿದ್ದಾರೆ.


ಈ ಅಂಶ ಅಲ್ಲಿಂದ ಆಚೆ ಹೋಗದಿರಲು ಪ್ರಕೃತಿಯು ಒಂದು ಕಾರಣವಿರಬಹುದು. ಈ ಬದಲಾವಣೆ ಅಲ್ಲಿಂದ ಆಚೆ ಹೋಗದಿರಲು ಸುತ್ತ ಇರುವ ಬೆಟ್ಟ-ಗುಡ್ಡ ಕಾರಣವಿರಬಹುದು. ಇದು ಕೂಡ ನಮ್ಮ ಒಂದು ಭಾಷೆಯೇ ಎಂದು ನಾವು ಮರೆಯಬಾರದು. ಒಂದು ಉಪಭಾಷೆ ಪ್ರಾದೇಶಿಕ,ಸಾಮಾಜಿಕಗಳಿಂದ ಒಡೆಯುತ್ತದೆ, ಹಿಂದೆ ದ್ರಾವಿಡ ಭಾಷೆಯಲ್ಲಿ ದಕ್ಶಿಣ,ಮಧ್ಯ ಮತ್ತು ಉತ್ತರ ದ್ರಾವಿಡ ಭಾಷೆಗಳಾಗಿದ್ದವು. ದಕ್ಶಿಣ ದ್ರಾವಿಡ ಕನ್ನಡ,ತಮಿಳ್,ತೆಲುಗು ಆದವು ಮತ್ತೆ ವ್ಯತ್ಯಾಸಗಳು ಬಂದು ಕನ್ನಡ ಕೊಡವ ಮತ್ತು ಬಡಗ ಆಯಿತು. ಭಾಷೆಯು ಒಂದು ಸಂಸಾರವಿದ್ದ ಹಾಗೆ ಇಂದಿನ ಕಾಲದ ಹಾಗೆ nuclear ಕುಟುಂಬಗಳನ್ನು ನಾವು ಕಾಣಬಹುದು. ಭಿನ್ನತೆ ಇರುತ್ತದೆ ಆದರ ಭಿನ್ನತೆಯಲ್ಲಿ ಎಕತೆ ಇರುತ್ತದೆ.

ಇದರ ಮುಂದುವರೆದ ಭಾಗ .....

Monday, February 26, 2007

ಗರತಿಯ ಹಾಡುಗಳು

ಹಿಂದೆ ನಮ್ಮ ಜನ ತಮ್ಮ ಮನರಂಜನೆಗೆ ಅನೇಕ ವಿಧಾನವನ್ನು ಕಂಡು ಕೊಂಡಿದ್ದರು, ಸುಖ-ದು:ಖದ ಸಂದರ್ಭದಲ್ಲಿ ಜನರು ಸೇರಿ
ತಮ್ಮ ರಸಭಾವವನ್ನು ಹಾಡಿನ ಮೂಲಕ ಹಾಡಿ ಕುಣಿಯುತ್ತಿದ್ದರು. ಇದನ್ನು ಹಿಂದೆ ಆಟ-ಪಾಟ ಅನ್ನುತ್ತಿದ್ದರು,ಇದರಲ್ಲಿ ಕುಯಿಲು,ಕುಡಿತ
ಕೋಲಾಟ,ಬೇಟೆ,ಮಧುವೆ,ಸಾವು,ವೀರರ ಬಗ್ಗೆ,ಯುದ್ದ,ದೇವರು,ದೈವಭಕ್ತಿ ಹೀಗೆ ಅನೇಕ ವಿಷಯಗಳ ಬಗ್ಗೆ ಹಾಡು ಕಟ್ಟುತ್ತಿದ್ದರು. ಹೆಂಗಸರು
ಮತ್ತು ಕೆಲಸಗಾರರು ಕೆಲಸದ ತಮ್ಮ ಬಳಲಿಕೆಯನ್ನು ದೂರ ಮಾಡಲು ಇ ಹಾಡುಗಳನ್ನು ಹಾಡುತ್ತಿದ್ದರು.
ಕುಟ್ಟುವಾಗ,ಬೀಸುವಾಗ,ಮಗುವನ್ನು ಆಡಿಸುವಾಗ ಮೈ ಮರೆತು ಹಾಡುಗಳನ್ನು ಹಾಡಿ ಮುಂದಿನ ಪೀಳಿಗೆಗೆ ಅದನ್ನು
ಉಳಿಸುತ್ತಿದ್ದರು. ಇವುಗಳನ್ನೇ ಗರತಿಯ ಹಾಡು ಎಂದು ಕರೆಯುತ್ತಾರೆ.
ಈ ಗರತಿಯ ಹಾಡುಗಳು ತ್ರಿಪದಿ ಛಂದದಲ್ಲಿ ಇರುತ್ತದೆ,ಇವುಗಳು ಬಹಳ ಸುಲಭವಾಗಿ ಎಲ್ಲರಿಗೂ ಅರ್ಥವಾಗುವ ಹಾಗೆ
ಇರುವುದೇ ಜನರು ಇದಕ್ಕೆ ಮರಳಾಗಿರುವ ಸಾಕ್ಷಿಗೆ ಕಾರಣ.ಇದರಲ್ಲಿ ಇನ್ನೊಂದು ಗಮನಿಸಬೇಕಾದ ಅಂಶವೆಂದರೆ
ಇದರಲ್ಲಿ ಹೆಚ್ಚು ಸಂಸ್ಕೃತ ಶಭ್ದಗಳು ಇರದೇ ಇರುವುದು. ನೈಜ ಮತ್ತು ನೈಸರ್ಗಿಕವಾಗಿ ವಾಕ್ಯ ರಚನೆಯಲ್ಲಿ ಗಾಂಭಿರ್ಯತೆಯನ್ನು
ಒಳಗೊಂಡಿರುವುದು ಇದರ ನೈಪುಣ್ಯಕ್ಕೆ ಸಾಕ್ಷಿ.
ನಮ್ಮ ಕನ್ನಡ ನಾಡಿನ ಬಡತನದಲ್ಲಿ ಸಿಕ್ಕ ಅಕ್ಕ-ತಂಗಿಯರು,ಅಜ್ಜಿ-ಅಮ್ಮಂದಿರು ಹೃದಯ್ ಶ್ರೀಮಂತಿಕೆಯನ್ನು ಬಿಂಬಿಸುವ
ಗರತಿಯ ಹಾಡುಗಳು ನಮಗೆ ಹೆಮ್ಮೆಯನ್ನು ಉಂಟು ಮಾಡುತ್ತದೆ. ಗಮನಿಸಿ ನೋಡಿದರೆ ಇದು ನಮ್ಮ ಹೆಣ್ಣುಮಕ್ಕಳ ಮನಸ್ಸಿನ
ಒಳಗನ್ನಡಿ, ಇದರಲ್ಲಿ ಪ್ರೇಮದ ವಿವಿಧ ಆಯಾಮವಿದೆ, ಮಮತೆಯ ಮಾದುರ್ಯವಿದೆ. ಗರತಿಯು ಇಂದಿನ ಸಮಾಜದ ಹೆಣ್ಣಿಗೆ
ಎಷ್ಟರ ಮಟ್ಟಿಗೆ ಅನುರೂಪಳೋ ಗೊತ್ತಿಲ್ಲ,ಆದರೆ ಅವಳಿಗೆ ತನ್ನ ಸಂಸಾರದ ಬಗ್ಗೆ ಎಲ್ಲಿಲ್ಲದ ಒಲವು, ಗಂಡನೆಂದರೆ ದೈವ, ಉಳಿದ
ಗಂಡನ ಮನೆಯವರಿಗೆ ಇವಳೇ ತಾಯಿ. ತಾನು ಕಷ್ಟ ಪಟ್ಟರು ಚಿಂತೆ ಇಲ್ಲ,ತನ್ನ ಸಂಸಾರ ಚೆನ್ನಗಿರಬೇಕು ಎನ್ನುವ
ಉದಾರ ಭಾವನೆ.

ಹಾಲುಂಡ ತವರೀಗಿ ಏನೆಂದು ಹಾಡಲಿ
ಹೊಳೆದಂಡಿಲಿರುವ ಕರಕೀಯ ಕುಡಿಯಂಗ
ಹಬ್ಬಲೇ ಅವರ ರಸಬಳ್ಳಿ.


ಇದರಲ್ಲಿ ಗರತಿ ತನ್ನ ತವರು ಮನೆಯ ಬಗ್ಗೆ ಕೃತಜ್ಞಾಭಾವದಿಂದ ನೆನಸಿಕೊಳ್ಳುವ ಹಾಡಿದು. ಇದರ ಹಾಗೇ
ಅಪ್ಪ-ಅಮ್ಮನ ಬಗ್ಗೆ ಕೂಡ ಒಂದು ಹಾಡಿದೆ.

ತಂದೀನ ನೆನದರ ತಂಗಳೂ ಬಿಸಿಯಾಯ್ತ
ಗಂಗಾದೇವಿ ನನ್ನ ಹೆಡೆದವ್ವ ನೆನದರ
ಮಾಸೀದ ತಲೆಯೂ ಮಡಿಯಾಯ್ತು.

ಸತಿ-ಪತಿಗಳ ಮದ್ಯೆ ಕೂಡ ಅನೇಕ ಹಾಡುಗಳು ಬಂದಿವೆ, ಸಂಸಾರದಲ್ಲಿ, ನಗು,ಟೀಕೆ,ಮುನಿಸು,ವಿರಹ,ತಲ್ಲಣ
ಕೋಪಗಳು ನಮ್ಮ ಗರತಿಯ ಹಾಡಿನಲ್ಲಿ ಹಾದು ಬರುತ್ತವೆ.
ಹೆಂಡತಿ ಇಲ್ಲದೇ ಗಂಡನ ಪಾಡು
" ಅಡಗೀ ಮನಿಯಾಗ ಮಡದೀಯ ಸುಳಿವಿಲ್ಲ
ಅಡಗಿ ಬಾಯಿಗೆ ರುಚಿಯಿಲ್ಲ ಹಡೆದವ್ವಾ
ಮಡದಿ ತವರೀಗೆ ಹೋಗ್ಯಾಳ."

ಗಂಡ ಇಲ್ಲದ ಹೆಂಡತಿಯ ಪಾಡು
"ಯಾಲಕ್ಕಿ ಸುರಿದು ಯಾವಡಗೀ ಮಾಡಲಿ
ಊರಿಗೊಹಗ್ಯಾರ ರಾಯರು ಬಾರದೆ
ಯಾವಡಗೀ ಮಾಡಿ ಫಲವೇನ.
ಜಗಳದ ಬಗ್ಗೆ ಒಂದು ಸುಂದರ ಹಾಡಿದ.

"ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ
ಲಿಂಗದ ನೀರು ಹರಿದಹಂಗ ಹಿರಿ ಹೋಳಿಯ
ಗಂಗವ್ವ ಕೂಡಿ ನಲಿದಹಾಂಗ.

ಮಕ್ಕಳ ಮೇಲೆ ಒಂದು ಪ್ರಸಿದ್ದ ಗರತಿಯ ಹಾಡಿದೆ.
"ಕೂಸು ಇದ್ದ ಮನಿಗೆ ಬೀಸಣಿಕೆ ಯಾತಕ
ಕೂಸು ಕಂದಯ್ಯ ಒಳಹೋರಗ ಆಡಿದರ
ಬೀಸಣಿಕೆ ಗಾಳಿ ಸುಳಿದಾವ.
ಇದೆಲ್ಲ್ಲಾ ನೆನಪಾಗಿದ್ದು ಬಹಳ ಹಿಂದೆ ನಮಗೆ ಕನ್ನಡದಲ್ಲಿ ಒಂದು ಗರತಿಯ ಹಾಡುಗಳು ಅಂತ
ಪದ್ಯವಿತ್ತು,ಮೊನ್ನೆ ಹೀಗೆ ಮಾತನಾಡುವಾಗ ಈ ವಿಷಯ ಬಂದು ನನಗೆ ಗೊತ್ತಿದ್ದ
ಒಂದೆರೆಡು ವಿಷಯಗಳನ್ನು ಇಲ್ಲಿ ಹಂಚಿಕೊಂಡಿರುವೆ,ನಿಮಗೆ ಹೆಚ್ಚಿನ ಮಾಹಿತಿ ಇದ್ದರೆ
ಹಂಚಿಕೊಳ್ಳಿ.

Sunday, February 25, 2007

ಹನಿ ಕವಿತೆಗಳು-honey ಸಲುವಾಗಿ ಬರೆದ ಕವಿತೆಗಳು ...

ಬೆಸ್ತು
=====

ಮೀನ ಕಂಡು
ಸಾಗರದಲ್ಲಿ ಬೆಸ್ತ ಬಿದ್ದ
ಮೀನಾಕ್ಶಿ ಕಂಡು ಪ್ರೇಮಸಾಗರದಲ್ಲಿ
ಇವನು ಬೆಸ್ತು ಬಿದ್ದ.


ಬೇಲಿ
====
ಕಟ್ಟಿಸಿದ ಅವನು ಸುಂದರ ಮನೆ
california bayಲಿ
ಚುಕ್ಕೆ ಇಟ್ಟಂತೆ ಹಾಕಿಸಿದ ಸುತ್ತ
ಮುಳ್ಳಿನ ಬೇಲಿ.

ಹೂ
=====
ಮಲ್ಲಿಗೆ ಎಂದರೆ
ಹಿಂದಿನವರು ಅನ್ನುತ್ತಿದರು
ಸುಂದರ ಹೂ
ಇಂದಿನವರು ಕೇಳುತ್ತಾರೆ
who ??

ಆಭರಣ
=========
ನಲ್ಲೆ, ಮೈ ತುಂಬಾ ಆಭರಣ
ಇದೆಂಥಾ ಶ್ರಂಖಲೆ ?
ನಿರಾಭರಣವಾಗಿದ್ದರು ನೀನೆ
ನನ್ನ ಶಕುಂತಲೆ.


ನಶ್ಯಶಾಸ್ತ್ರ
=============
ಪಕ್ಶಿ-ಹೂಗಳ ಬಗ್ಗೆ ಹೇಳುತ್ತದೆ
ಜೀವಶಾಸ್ತ್ರ,ಸಸ್ಯಶಾಸ್ತ್ರ.
ಆಕ್ಷಿ-ಸೀನುಗಳ ಬಗ್ಗೆ ಹೇಳುತ್ತದೆ
ನಶ್ಯಶಾಸ್ತ್ರ.


ರಣ-ರಂಗ
==========
ವಿಧ್ಯಾರ್ಥಿಗಳಿಗೆ ಪರೀಕ್ಷೆಯೆ
ಒಂದು ದೊಡ್ಡ ರಣ.
ಎಕೆಂದರೆ ಅಲ್ಲಿ ಕೇಳುತ್ತಾರೆ
ವ್ಯಾಕ-ರಣ.


ಹೇಳಿ ಹೊಗು ಕಾರಣ
=================
ನಾಳೆಗಳ ಆಗಮನದಲ್ಲಿ ಪ್ರೀತಿಯ ಕೊಂದು
"ಮರೆತುಬಿಡು ನನ್ನ" ಎಂದು
ಹೇಳಿ ಹೋದವಳೆ.
ನೀ ಮುಡಿದ ಹೂವು ಹೊಮ್ಮುತ್ತಿರುವುದು
ಹಳೆ ನೆನಪುಗಳ
ಹೇಗೆ ನಾನು ಮರೆಯಲೆ ??