Saturday, March 19, 2011

ಹೋಳಿ ಹುಣ್ಣಿಮೆ ..ನಮ್ಮ ಸಂಸ್ಕೃತಿಯಲ್ಲಿ ಇರಲಿಲ್ಲವೇ ?

೧೪ ವರುಷಗಳ ಹಿಂದಿನ ಮಾತು, ಇವತ್ತಿನ ಹಾಗೆ ಹೋಳಿ ಹುಣ್ಣಿಮೆ, ಸೂಪರ್ ಮೂನ್ ಆಗಿರಲಿಲ್ಲ, ಆದರೆ ನಾವುಗಳು ಸೂಪರ್ ಮೂಡಿನಲ್ಲಿ ಇದ್ದೆವು. ಹೋಳಿ ಆಚರಣೆಗೆ ಇಳಿದೆವು, ಅದು ನಡೆದಿದ್ದು ಗೆಳೆಯನ ಹಾಸ್ಟೆಲಿನಲ್ಲಿ . ಹೇಳಿ ಕೇಳಿ ಅದು ಒಂದು ವರ್ಗದ
ಹಾಸ್ಟೆಲ್ , ಅನೇಕ ರೀತಿ-ರಿವಾಜುಗಳು ಇದ್ದವು. ಆದರೆ ಅವತ್ತು ನಾವು ಪ್ರತಿಯೊಬ್ಬರನ್ನು ರೂಮುಗಳಿಂದ ಆಚೆ ಎಳೆದು ಆಡಿದೆವು,
ಕೆಲವರು ಮೊದಲು ಆ ಓ ಎನ್ನುತ್ತ ಇದ್ದರು, ಯಾವಾಗ ನೀರಿಗೆ ಇಳಿದ ಮೇಲೆ ಚಳಿ ಎನು, ಮಳೆ ಎನು ಅನ್ನುವ ಹಾಗೆ ಮುಂದುವರೆಯುತ್ತ ತುಂಬಾ ಜೋಶಿನಲ್ಲಿ ಅವರು ಬಣ್ಣ ಬಳಿಸಿಕೊಂಡ ಹಾಗೆ ಬೇರೆಯವರಿಗೆ ಬಳಿಯುತ್ತ ಇದ್ದರು, ಒಬ್ಬರನ್ನು ಇನ್ನೊಬ್ಬರು ಅಟ್ಟಿಸಿಕೊಂಡು ಹೋಗುವುದು, ತೊಟ್ಟಿಯನ್ನು ವಿವಿಧ ಬಣ್ಣಗಳನ್ನು ಹಾಕಿ ಸಾಕ್ಜಾತ್ ಕೊಚ್ಚೆ ಮಾಡಿದ್ದು, ಅದರಲ್ಲಿ ಹೊಸಬರನ್ನು ಎತ್ತಿ ಅದ್ದುವ ಕಾರ್ಯ ಪಾಂಗಿತವಾಗಿ ಸಾಗಿತ್ತು.

ಆಟದ ರಂಗು ಎರುವುದೇ ಹೊಸ ಹೊಸ ರೀತಿಯಲ್ಲಿ ಬಣ್ನ ಬಳಿಯುವದರಿಂದ, ಮೊಟ್ಟೆ, ಟೊಮ್ಯಾಟೊ ಸಿಲ್ವರ್ ಪೆಂಟ್ ಎಲ್ಲಾ ಆಚೆ ಬಂದು, ಯಾರು ಯಾರು ಎಂದು ಅವರಿಗೆ ಮಾತ್ರ ಗೊತ್ತಿತ್ತು. ಕನ್ನಡಿಯ ಮುಖ ನೋಡಿಕೊಂಡರೆ ಯಾರಪ್ಪ ಇದು ಎಂದು ನಮಗೆ
ಸಂಶಯ ಮೂಡುವ ಹಾಗೆ ನಮ್ಮ ಮುಖ ವಿಕಾರ ಆಗಿತ್ತು.

ನಮ್ಮ ಕೇಕೆ ಆಟಗಳನ್ನು ಯಾರೋ ಆ ಹಾಸ್ತೆಲ್ ನಡೆಸುವ ಒಂದು ಟ್ರಸ್ಟಗೆ ಹೇಳಿದ್ದರು , ತಕ್ಷಣ ನಮಗೆ ಕೂಡಲೆ ನಿಲ್ಲಿಸಿ ಎಲ್ಲಾ ಕಡೆ ತೊಳೆಯಬೇಕು ಎಂದು ಆದೇಶ ಕೊಟ್ಟರು. ಆದರೆ ಅದನ್ನು ಕೇಳುವ ವ್ಯವಧಾನ ನಮಗೂ ಇರಲಿಲ್ಲ. ಸ್ವಲ್ಪ ಹೊತ್ತು ಆಡಿ, ಆಮೇಲೆ ಎಲ್ಲಾ ತೊಳೆಯುತ್ತೆವೆ ಎಂದು ಹುಡುಗರಲ್ಲಿ ಒಬ್ಬನು ಹೇಳಿದ, ಅದಕ್ಕೆ ಎಲ್ಲರೂ ಹೂ..ಎಂದು ಚೀರಿದರು. ಆದರೆ ಅದು ಯಾವ ರೀತಿ
ಟ್ರಸ್ಟ ಜನರಿಗೆ ಹೋಯಿತೋ ನಾ ಕಾಣೆ. ನಮ್ಮ ಮೇಲೆ ಪ್ರತಿಕಾರ ತೆಗೆದುಕೊಳ್ಳಲು, ಎಲ್ಲಾ ನಳ( ನಲ್ಲಿ) ನೀರು ಬರದ ಹಾಗೆ ಮಾಡಿ ಬಿಟ್ಟರು.

ನಮ್ಮ ಸಂಸ್ಕೃತಿ ಅಲ್ಲದ ಹುಚ್ಚಾಟಗಳನ್ನು ಆಡುತ್ತಾರ, ನೀರಿಲ್ಲದೆ ನನ್ನ ಮಕ್ಕಳು ಒದ್ದಾಡಬೇಕು, ಬುದ್ದಿ ಬರೋ ಹಾಗೆ ಮಾಡುತ್ತೆನೆ ಎಂದು ಪೋನಿನಲ್ಲಿ ಆ ಕಡೆಯಿಂದ ಕೇಳಿದ್ದು, ಅದನ್ನು ಆ ಕಡೆಯಿಂದ ಕೇಳಿಸಿಕೊಂಡ ಹುಡುಗನು ಬಂದು ನಮಗೆ ಹೇಳಿದ್ದು, ಒಂದು ನಿಮಿಷ ಎಲ್ಲರಲ್ಲಿ ಸಂತೋಷಕ್ಕೆ ತಣ್ಣಿರು ಎರಚಿದ ಹಾಗೆ ಆಯಿತು. ಆಮೇಲೆ ಗೆಳೆಯರ ಮನೆಗಳಲ್ಲಿ ಸ್ನಾನ ಮಾಡಿದ್ದು ಆಯಿತು.
ಆದರೆ ಮರುದಿನ ಆ ಹಾಸ್ಟೆಲಿನ ನೋಟಿಸ್ ಬೋರ್ಡಿನಲ್ಲಿ ಇದರ ಬಗ್ಗೆ ಉಲ್ಲೇಖ ಆಗಿದ್ದ ಸಾಲುಗಳು ಇವತ್ತು ನನಗೆ ಜ್ಞಾಪಕ ಇವೆ ..

"ಹೋಲಿ ಆಚರಣೆ ನಮ್ಮದಲ್ಲ, ಇದು ಬೇರೆಯವರ ಸಂಸ್ಖೃತಿ. ಬೇರೆಯವರ ಆಚರಣೆಗಳನ್ನು ಮಾಡುತ್ತ, ಚೀರುತ್ತ ಹಾರಾಡುವುದು
ನಿಮ್ಮನ್ನು ಕ್ರೈಸ್ತರನ್ನಾಗಿ ಮಾಡುತ್ತ ಇದೆ ..ಬ್ಲಾ ಬ್ಲಾ ..

ಈ ಮಾತುಗಳನ್ನು ಅನೇಕ ಬಾರಿ ನಮ್ಮ ಅಜ್ಜ-ಅಜ್ಜಿಯದಿಂರು ಹೇಳಿದ್ದರು, ಹೊಸ ಪದ್ದತಿಗಳನ್ನು ತರುತ್ತ ಇದ್ದೀರಾ, ಅದೇನು ಮಧ್ಯಾಹ್ನ ತನಕ ಆಡೋದು, ಹೀಗೆ ಹತ್ತು ಹಲವಾರು ಮಾದರಿಯಲ್ಲಿ ಕೇಳಿದ್ದೆವು, ಒಟ್ಟಾಗಿ ಇದರ ತಾತ್ಪರ್ಯ ಇದೆ.
ಇದು ಕನ್ನಡಿಗರ ಹಬ್ಬ ಅಲ್ಲ, ಇದು ಇತ್ತಿಚಿಗೆ ಬಂದ ಹಬ್ಬ, ಅದರಲ್ಲೂ ನಾರ್ತಿಗಳ ಪ್ರಭಾವದಿಂದ ಬಂದಿದೆ. ಆದರೆ ಚಿಕ್ಕ ವಯಸ್ಸಿನಿಂದ ನಾನು ಉತ್ತರ ಕರ್ನಾಟಕದಲ್ಲಿ ಹಾಗೆ ಆಚರಿಸಿಕೊಳ್ಳುತ್ತ ಇದ್ದೆವಲ್ಲಾ ಎಂದರೆ, ಆ ಜಾಗವು ಮರಾಠಿ ಮತ್ತು ಉತ್ತರ ಭಾರತೀಯರ ಪ್ರಭಾವದಲ್ಲಿ ಇರುವುದೇ ಇದಕ್ಕೆ ಕಾರಣ ಎಂದು ಹೇಳಿ ನಮ್ಮ ಬಾಯಿ ಮುಚ್ಚಿಸುತ್ತ ಇದ್ದರು. ಕಾಲಕ್ರಮೇಣ ಇದು
ನಾರ್ತಿಗಳ ಹಬ್ಬ, ನಾವು ಹಬ್ಬ ಆಚರಿಸುವುದು ನಾರ್ತಿಗಳ ಸಂಸ್ಕ್ರುತಿಯನ್ನು ಅಪ್ಪಿಕೊಂಡ ಹಾಗೆ, ಅವರ ದಾಸ್ಯಕ್ಕೆ ಹೋದ ಹಾಗೆ ಅನ್ನುವ ಹೊಸ ವಾದ ಕೇಳಿಬರತೊಡಗಿತು. ಅದಕ್ಕೆ ಪುಷ್ಟಿ ಕೂಡುವ ಹಾಗೆ ಕಚೇರಿಗಳಲ್ಲಿ ನಾರ್ತಿಗಳು ನಮ್ಮ ಹಬ್ಬ ಎಂದು ಬಿಂಬಿಸುತ್ತ ಇದ್ದಾಗ ಒಂದು ಚೂರು ಬಣ್ಣ ಬಳಿಸಿಕೊಂಡರೆ ಹಿಂಸೆ ಆಗುತ್ತ ಇತ್ತು. ಒಂದು ರೀತಿಯಲ್ಲಿ ೧೫ ವರುಷಗಳ ಹಿಂದೆ ಹೇಳಿದ್ದ ಮಾತುಗಳನ್ನು ನಾನು ಗೊತ್ತೊ ಗೊತ್ತಿಲ್ಲದೇ ಒಪ್ಪಿಕೊಂಡು ಬಿಟ್ಟಿದ್ದೆ.

ಆವತ್ತು ಒಂದು ದಿನ ರಾಜಕುಮಾರ್ ಅವರ ಕಾಮಣ್ನನ ಮಕ್ಕಳು ಹಾಡು ನೋಡುತ್ತ ಇದ್ದಾಗ , ಇದು ನಮ್ಮ ಪೀಳಿಗೆಯ ಅನುಕರಣೆ ಇಂದ ಬಂದಿದ್ದಲ್ಲ, ಹಿಂದೆಯೂ ಇತ್ತು ಅನಿಸಿತು. ಹಾಗಿದ್ದರೆ ಇದು ನಮ್ಮ ಹಬ್ಬ ಅಲ್ಲವೇ, ನಾವು ಅನುಕರಣೀಯ ದಾಸ್ಯದಲ್ಲಿ ಇದ್ದೇವೆ
ಎಂದು ಅನಿಸುತ್ತ ಇತ್ತು.

ಗಮನಿಸಿ ನೋಡಿದರೆ ಜಗತ್ತಿನ ನಾನಾ ಭಾಗಗಳಲ್ಲಿ ಬಣ್ಣ, ನೀರಿನ ಎರಚುವಿಕೆ ಬೇರೆ ಬೇರೆ ಹೆಸರಿನಲ್ಲಿ ಇದೆ. ಅದನ್ನು ಕೇವಲ ಒಬ್ಬರ ಸಂಸ್ಕೃತಿ ಎಂದು ಬ್ರಾಂಡ್ ಮಾಡುವುದು ನಿಜಕ್ಕೂ ತಪ್ಪು. ಭಾರತದಲ್ಲಿ ಹೋಲಿ ಆಚರಣೆ ನೋಡಿದರೆ ಉತ್ತರದಲ್ಲಿ ಹೆಚ್ಚು, ಬಾಂಗ್ ಬಳಕೆ ಇಂದ ಅದರ ಕಿಕ್ ಬೇರೆ ಇರಬಹುದು , ಆದರೆ ಅದು ದಕ್ಷಿಣದಲ್ಲಿ ಇರಲೇ ಇಲ್ಲ, ಸ್ವಾತಂತ್ರ ಬಂದ ಮೇಲೆ ಚಿತ್ರಗಳ ಪ್ರಭಾವದಿಂದ ನಾವು ಕಲಿತೆವು ಎಂಬ ವಾದವನ್ನು ಯಾಕೋ ಮನಸ್ಸು ಯಾವತ್ತು ಒಪ್ಪುತ್ತ ಇರಲಿಲ್ಲ.


ಚರಿತ್ರಯ ಪುಟಗಳನ್ನು ಅರಿಸುತ್ತ.



ಒಮ್ಮೆ ಹಂಪೆ ಬೇಟಿ ಕೊಟ್ಟಾಗ ಅಲ್ಲಿಯ ಜನ ಹೋಲಿ ಹಬ್ಬವನ್ನು ಅರಿಶಿಣ ನೀರಿನಲ್ಲಿ ಆಡುತ್ತ ಇದ್ದರು ಎಂದು ASI ಸಿಬ್ಬಂದಿ ಹೇಳಿದರು. ನಾನು ಅದಕ್ಕೆ ದಾಖಲೆ ಇದೆಯಾ ಎಂದು ಕೇಳಿದಾಗ, ಹಜಾರ ರಾಮನ ದೇವಾಲಯದಲ್ಲಿ ಕೆತ್ತನೆಗೆಳು ಇವೆ, ನೋಡಿಕೊಂಡು ಬನ್ನಿ ಎಂದರು. ಆ ದೇವಸ್ಥಾನಕ್ಕೆ ಬೇಟಿಕೊಟ್ಟಾಗ ಕಂಡಿದ್ದು ಒಂದು ೨ ಸಾಲುಗಳು ಬಣ್ಣದ ಎರಚುವಿಕೆಯನ್ನು ಸಾರುವ ಚಿತ್ರಗಳು. ಒಂದು ಸಾಲಿನಲ್ಲಿ ಪಿಚಕಾರಿ ಮಾದರಿಯಲ್ಲಿ, ಇನ್ನೊಂದರಲ್ಲಿ ಒಂದು ಬಕೆಟ್ ಇಂದ ಬಣ್ಣ ತೆಗೆದುಕೊಳ್ಳುತ್ತ ಇರುವುದು. ಒಬ್ಬರಿಗೆ ಒಬ್ಬರು ಹಚ್ಚುತ್ತ ಇರುವುದು ..ಹೀಗೆ ಅಂದಿನ ದಿನಗಳ ಆಚರಣೆ ನಮಗೆ ಕಾಣುತ್ತದೆ.


ಅಲ್ಲಿಗೆ ಈ ಹಬ್ಬ ಕನ್ನಡ ರಾಜ್ಯದ ವಿಜಯನಗರ ಸಮಯದಲ್ಲೂ ಇತ್ತು ಎನ್ನಬಹುದು. ಕಾಲಕ್ಕೆ ತಕ್ಕಂತೆ ಆಚರಣೆ ಬೇರೆಯಾಗಿದೆ , ಆದರೆ ಹಬ್ಬದಲ್ಲಿ ಬರುವ ಮಜ ಮತ್ತು ಆನಂದ ವಿಜಯನಗರ ಸಮಯದಲ್ಲೂ ಒಂದೆ, ಇವತ್ತಿಗೂ ಒಂದೆ. ಇದಕ್ಕೆ ಸಂಸ್ಕೃತಿ-ಗಡಿ ಬಂಧನದಲ್ಲಿ ಹಾಕಿ ನಮ್ಮ ಮಕ್ಕಳಿಗೆ ಆಚರಿಸ ಬೇಡಿ ಎಂದು ಹೇಳಿದಾಗ ಅದರಿಂದ ಆಗುವ ನಷ್ಟ ತುಂಬಾ. ಮಕ್ಕಳಿಗೆ ಸಂತೋಷ ಕೊಡುವ ಈ ಹಬ್ಬ ನಮ್ಮ ಸಂಸ್ಕೃತಿಯಲ್ಲಿ ಇಲ್ಲ, ಬೇರೆಯವರ ಸಂಸ್ಕ್ರುತಿ ಚೆನ್ನಾಗಿದೆ ಎಂದೆನಿಸಿ, ಕೀಳರಿಮೆ ಬಂದರೆ ಅದಕ್ಕೆ ನಾವೇ ಹೊಣೆಯಾಗುತ್ತೆವೆ.


ಹೋಲಿ ಬಹಳ ಹಿಂದಿನ ಸಂಪ್ರದಾಯ ಎಂದು ಎಲ್ಲರೂ ಒಪ್ಪುವ ವಾದ, ಅದಕ್ಕೆ ಇವತ್ತಿಗೂ ಉತ್ತರ ಕರ್ನಾಟಕದಲ್ಲಿ ಇನ್ನು ಚಾಲ್ತಿಯಲ್ಲಿ ಇದೆ, ಅದೇ ಮೈಸೂರಿನ ಕಡೆ ಮರೆಯಾಗಿದೆ. ಮೈಸೂರಿನಲ್ಲಿ ಮುಖ್ಯವಾಗಿ ಸ್ವಲ್ಪ ತಮಿಳುನಾಡಿನ ವೈದಿಕ ಸಂಸ್ಕೃತಿ ಸೇರಿರುವುದು ಇದಕ್ಕೆ ಕಾರಣವಿರಬಹುದು ಎಂದೆನಿಸುತ್ತದೆ.

ಇಂದಿನ ಪೀಳಿಗೆಗೆ ...
ಹೋಲಿ ಹಬ್ಬ ಯಾವ ನಾರ್ತಿಗಳ ಪೇಟೆಂಟ್ ಹಬ್ಬ ಅಲ್ಲ, ನಿಮ್ಮ ಅಜ್ಜ ಅಜ್ಜಿ ಹೇಳುವ ಸಂಸ್ಕೃತಿ ಕಥೆಯನ್ನು ಕೇಳದೆ ಅವರಿಗೆ ತಿಳಿ ಹೇಳಿ ಮತ್ತು ಹಬ್ಬ ಆಚರಿಸಿ. ಜಲಕ್ರೀಡೆ, ಬಣ್ನ ಎರಚುವ ಹಬ್ಬ ನಮ್ಮ ಸಂಸ್ಕೃತಿ ಎಂದು ನಂಬಿ ಖುಷಿಯಿಂದ ಆಟವಾಡಿ. ನನ್ನ ಗೆಳೆಯ ಮಹೇಶ್ ಹೇಳುತ್ತ ಇದ್ದ, ಬಾಗಲಕೋಟೆಯಲ್ಲಿ ಇದನ್ನು ೧ ವಾರ ಆಚರಣೆ ಮಾಡುತ್ತಾರೆ. ನೀವು ಒಂದು ದಿನ ಅದರೂ ಮಾಡಬೇಕು ಅಲ್ವಾ ?

Wednesday, March 16, 2011

ಊಟಕ್ಕೆ ಇಲ್ಲದ ಉಪ್ಪಿನಕಾಯಿ ಸಂಸ್ಕೃತವಾಗದಿರಲಿ.

ತಿಂಗಳಿಗೆ ಒಮ್ಮೆ ನನಗೆ ಭಾರತೀಯನಾಗಲು ಹೆಮ್ಮೆ ಪಡು, ಇದನ್ನು ೧೦೦ ಜನರಿಗೆ ಕಳಿಸಿ ನಿನ್ನ ದೇಶಪ್ರೇಮವನ್ನು ಮೆರೆ ಎಂದು ಒಂದು ಮಿಂಚೆ ಬರುತ್ತಲೆ ಇರುತ್ತದೆ. ಅನೇಕ ವರುಷಗಳ ಹಿಂದೆ ಅದನ್ನು ಕಳಿಸಿದವರಿಗೆ ಬೈದು ಉತ್ತರ ಬರೆಯುತ್ತ ಇದ್ದೆ. ಆದರೆ ಇದು ಸಮಯ ಹರಣ ಎಂದೆನಿಸಿ, ದೇಶಪ್ರೇಮವನ್ನು ಮರೆಯುತ್ತ ಮಿಂಚೆಯನ್ನು ಸ್ಪಾಮ್ ಮಾಡುತ್ತ ಬಂದಿರುವೆ. ಆ ಮಿಂಚೆಯಲ್ಲಿ ಒಂದು ಸಾಲು ಇವತ್ತು ನನಗೆ ಮತ್ತೆ ಜ್ಞಾಪಕ ಬಂತು. ಅದೆನೆಂದರೆ ಮೊದಲ ನ್ಯೂಕ್ಲಿಯರ್ ಕಂಡು ಹಿಡಿದಿದ್ದು ಭಾರತೀಯರು, ಅದನ್ನು ಬಳಸಿದವರಲ್ಲಿ ರಾಮನು ಒಬ್ಬನು ..ಇತ್ಯಾದಿ. ಪೊಕ್ರಾನ್ ಆಗಿ ಕಲಾಂ ಗೆ ಹೆಸರು ಬರುತ್ತ ಇದ್ದ ಸಮಯದಲ್ಲಿ ಇ ಮಿಂಚೆ ಹೆಚ್ಚು ಹರಿದಾಡುತ್ತ ಇತ್ತು. ಅದರ ಸಾರಂಶವೆಂದರೆ ನಾವು ಆಗಲೇ ಕಂಡು ಹಿಡಿದಿದ್ದೆವು, ನಮ್ಮ ದೇವಾನು ದೇವತೆಗಳಿಗೆ ಮತ್ತು ಮಾನವರಿಗೆ ಅದು ಆಟದ ವಸ್ತು ಆಗಿತ್ತು.

ಜ್ಞಾನ ನಮ್ಮಲ್ಲಿ ಎಲ್ಲೊ ಇರಬೇಕು ಅಲ್ಲವೇ, ಅದು ಎಲ್ಲಿದೆ ಎಂದು ತಿಳಿಯುವದಕ್ಕೆ ನಮಗೆ ಸಂಸ್ಕೃತ ಜ್ಞಾನ ಬೇಕು. ಅದಕ್ಕೆ ಕೊಟ್ಯಾಂತರ ರೂಪಾಯಿ ಅನುದಾನ ಬೇಕು, ಪ್ರತಿ ರಾಜ್ಯದಲ್ಲಿ ೧೦೮ ಅಧ್ಯಯನ ಪೀಠ ಮತ್ತು ವಿಶ್ವವಿದ್ಯಾಲಯ ಬೇಕು.
ನಾವುಗಳು ಗಣತಿಯಲ್ಲಿ ಒಂದು ಪದ ಅರ್ಥ ತಿಳಿಯದಿದ್ದರೂ ಸಂಸ್ಕುತ ನನಗೆ ಗೊತ್ತಿರುವ ಭಾಷೆ ಎಂದು ಬರೆಸಬೇಕು.



ಇಷ್ಟೆಲ್ಲಾ ಮಾಡಿ ಸಂಸ್ಕೃತ ಪಂಡಿತರಿಂದ ನೀವು ನ್ಯೂಕ್ಲಿಯರ್ ಬಗ್ಗೆ ಕೇಳಿದರೆ ತಪ್ಪು ಆಗುತ್ತದೆ, ಅಷ್ಟೆಲ್ಲಾ ಓದಿದ ಜನರಿಂದ ಕೊನೆಗೆ ಆಚೆ ಬರುವುದು ಕೇವಲ ಕಾಳಿದಾಸ ಮತ್ತು ಬಾಣ ಅಷ್ಟೇ.


ತಮಾಷೆ ಸಾಕು.. ಇವತ್ತು ದೊಡ್ಡ ಸುನಾಮಿ ಬಡೆದು ಜಪಾನ್ ತತ್ತರ ಆಗಿದೆ, ಅಣು ವಿಕಿರಣ ಎಲ್ಲಡೆ ಹಬ್ಬುತ್ತಿದೆ. ಅಯ್ಯೋ ನಮಗೇನು ಚಿಂತೆ ಇಲ್ಲ ಟಿವಿ೯ ನಲ್ಲಿ ನೋಡಿದೆ ಎಂದು ಸುಮ್ಮನೆ ಆಗದೇ ನಾವು ಇವತ್ತು ಮನುಕುಲದ ಬಗ್ಗೆ ಚಿಂತೆ ಮಾಡಬೇಕಾಗಿದೆ. ಅಣುವಿಕಿರಣವನ್ನು ತಡೆಯುವ ಬಗ್ಗೆ ನಮ್ಮ ಸಂಸ್ಕೃತ ಗ್ರಂಧಗಳಲ್ಲಿ ಇಲ್ಲದೆಯೆ ಇರುತ್ತದೆಯೇ ?, ಅದನ್ನು ಹೆಕ್ಕಿ ಆಚೆ ಹಾಕಿ ಅನೇಕ ಮನುಕುಲವನ್ನು ರಕ್ಷಿಸಿದರೆ, ಜಗತ್ತಿಗೆ ಸಂಸ್ಕ್ರುತ ಬಗ್ಗೆ ಗೌರವ ಬರುತ್ತದೆ ಮತ್ತು ಅನುದಾನ ಸಿಗಲು ಸರ್ಕಸ್ ಮಾಡಬೇಕಾಗಿಲ್ಲ ಇಲ್ಲ ಮನೆ ಮುಂದೆ ಸ್ಟಿಕರ್ ಹಚ್ಚಿಕೊಳ್ಳಬೇಕಾಗಿಲ್ಲ.

ಮೊದಲು ವಾಸ್ತು, ಜ್ಯೋತಿಷ್ಯ, ಬಾಣ-ಕಾಳಿದಾಸ, ಇವರು ಬರೆದ ಪುಸ್ತಕಗಳನ್ನು ಬಂದು ಮಾಡಿ, ವಿಕಿರಣ ಬಗ್ಗೆ ಉಲ್ಲೇಖವಿರುವ ಶಾಸ್ತ್ರಗಳನ್ನು ಅಧ್ಯಯನ ಮಾಡಬೇಕೆಂದು ಸರ್ಕಾರ ಅದೇಶಿಸಬೇಕು. ಮನುಕುಲದ ಅಳಿವು ಉಳಿವು ಇಂದು ಸಂಸ್ಕೃತದ ಮೇಲೆ ನಿಂತಿದೆ, ನಾವಿದ್ದರೆ ಅಲ್ಲವೇ ನಾಳೆ ಸಂಸ್ಕೃತ ಇರುವುದು ?.

Friday, March 11, 2011

ನಾರಾಯಣ ಮೂರ್ತಿಯವರು ಕಂಡಿದ್ದೇನು, ಕಾಣದಿದ್ದು ಎನು ?

ಮೊದಲಿಗೆ ವಿಶ್ವ ಕನ್ನಡ ಸಮ್ಮೇಳನ ಯಶಸ್ವಿಯಾಗಿ ನಡೆಯಿತು, ಬೆಳಗಾವಿ ಮಾಡಿದ್ದೇ ಒಂದು ದೊಡ್ಡ ಸಾಧನೆ ಆಗುತ್ತದೆ. ಇದನ್ನು ಉದ್ಘಾಟನೆ ಮಾಡಿದ ನಾರಾಯಣ ಮೂರ್ತಿ ಅವರ ಬಗ್ಗೆ ಅನೇಕ ಅಪಸ್ವರಗಳು ಕೇಳಿ ಬಂದವು. ಮುಖ್ಯವಾಗಿ ಗೌರಿ ಲಂಕೇಶ್ ಮತ್ತು ಇತರರ ವರ್ಗ ಅದನ್ನು ಸರಿಯಿಲ್ಲ ಅನ್ನು ಭರದಲ್ಲಿ ಮೂರ್ತಿಗಳು ಸರಿಯಿಲ್ಲ ಎಂದು ವೈಯಕ್ತಿಕ ಟೀಕೆ ಮಾಡಿದರು. ಕೊನೆಗೆ ಇದು ಅಂದುಕೊಂಡ ಹಾಗೆ ಅವರ ಜಾತಿಗೂ ಹೋಗಿದ್ದು ವಿಷಾದಕರ. ಅಲ್ಲಿಗೆ ಆ ವರ್ಗ ಕಾಮಲೆ ಕಣ್ಣಿನಿಂದ ಇಷ್ಟೆ ನನಗೆ ನೋಡಲು ಸಾಧ್ಯ ಎಂದು ತೋರಿಸಿಕೊಟ್ಟಿತು.


ಇನ್ನು ಆ ಕಡೆ ಮೂರ್ತಿಗಳು ಮೊದಲ ಬಾರಿಗೆ ಎಲ್ಲಾ ಕನ್ನಡ ದಿನಪತ್ರಿಕೆ ಸೇರಿದಂತೆ ಎಲ್ಲಾ ಪತ್ರಿಕೆಗಳಿಗೂ ( ವಿಶೇಷ) ಸಂದರ್ಶನ ಕೊಟ್ಟರು. ಅದರಲ್ಲಿ ಆ ಟೀಕೆಗಳಿಗೆ ತಮ್ಮನ್ನು ಸಮರ್ಥನೆ ಮಾಡಿಕೊಳ್ಳುವದಕ್ಕೆ ಸೀಮಿತ ಇಟ್ಟಿದ್ದರು. ದೊಡ್ಡವರು ಅನಿಸಿಕೊಂಡವರು ಕೂಡ ಈ ಸಮರ್ಥನೆಗೆ ಇಳಿದಾಗ ಇಲ್ಲ ತಾವೂ ಕನ್ನಡಿಗರು ಎಂದು ತೋರಿಸಲು ಹೋದಾಗ ಆಗುವ ಆವಾಂತರಕ್ಕೆ ಇವರೇನು ಹೊಸತಲ್ಲ ಬಿಡಿ.

ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದು ಒಂದು ತಿಂಗಳು ಆಗಿಲ್ಲ , ಮುಖ್ಯವಾಗಿ ವಿಶ್ವಕನ್ನಡ ಸಮ್ಮೇಳನ ಯಾಕೆ ಮಾಡುತ್ತ ಇದ್ದೀರಿ, ಇದು ಹೇಗೆ ನಾಡು ಕಟ್ಟಲು ಸಹಾಯ ಮಾಡುತ್ತದೆ ಎಂದು ಮೊದಲು ನನಗೆ ಸರಿಯಾಗಿ ತಿಳಿಸಿಕೊಡಿ ಆಮೇಲೆ ನಾನು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡುತ್ತೆನೆ ಎಂದು ಹೇಳಿದ್ದರೆ ಚೆನ್ನ ಇರುತ್ತಿತ್ತು. ಅದನ್ನು ಅವರು ತಿಳಿದುಕೊಂಡ ಹಾಗೆ ಇಲ್ಲಿ ತನಕ
ನನಗೆ ಅನಿಸಿಲ್ಲ. ಇದು ವಿಶ್ವದ ಎಲ್ಲಾ ಕನ್ನಡಿಗರ get together ಅನ್ನುವುದೇ ಆಗಿದ್ದಲ್ಲಿ ಮೂರು ದಿನ ಅದೇ ಕಮ್ಮಟಗಳು ಬೇಕಿತ್ತ ಎಂದು ಎಲ್ಲರಿಗೂ ಸಹಜವಾಗಿ ಮೂಡುವ ಪ್ರಶ್ನೆ ಐ.ಟಿ ದಿಗ್ಗಜರಿಗೆ ಬರದಿರುವುದು ಆಶ್ಚರ್ಯವೇ ಸರಿ.


ಮೊದಲಿಗೆ ಮೂರ್ತಿಗಳು ನಾನು ಕನ್ನಡಿಗ ಎಂದು ಪದೇ ಪದೇ ಸಾರಲು ಹೋಗಿದ್ದು. ಆ ಪ್ರಶ್ನೆ ಅವರಲ್ಲೇ ಮೂಡಿದ್ದು ಆದರೂ ಯಾಕೆ ?. ಅಷ್ಟಕ್ಕು ಕನ್ನಡಿಗ ಎಂದರೆ ಅದರ ಪರಿಧಿ ಮತ್ತು ಆಳ ಅವರಿಗೆ ಗೊತ್ತಿದೆ ಅನಿಸುತ್ತೆದೆಯಾ ?. ಕರ್ನಾಟಕದಲ್ಲಿ ಹುಟ್ಟಿದರೆಲ್ಲರೂ ಕನ್ನಡಿಗರೇ, ಇದು ನಮ್ಮ ಸಂವಿಧಾನದಿಂದ ಎತ್ತಿಕೊಂಡು ಹೇಳಿದರೆ ಅದು ಸ್ವಾಭಾವಿಕವಾಗಿ ಬಂದ ಹಕ್ಕು ಅದನ್ನು ಪ್ರೂವ್ ಮಾಡುವ ಅವಶ್ಯಕತೆ ಇಲ್ಲ. ಎಲ್ಲಕ್ಕೂ ಮಿಗಿಲಾಗಿ ಅವರು ನಾನು ನನ್ನ ಹೆಂಡತಿ ಜೊತೆ ಕನ್ನಡಲ್ಲಿ ಮಾತನಾಡುತ್ತೆನೆ, ನಮ್ಮ ಮನೆಯ ಆಳುಗಳ ಜೊತೆ ಕನ್ನಡದಲ್ಲಿ ಮಾತನಾಡುತ್ತೆನೆ, ನನ್ನ ಹೆಂಡತಿ ಕನ್ನಡ ಪುಸ್ತಕ ಪ್ರಕಟಿಸುತ್ತಾರೆ ಹೀಗೆ ಹೇಳುತ್ತ ನಾನು ಕನ್ನಡಿಗ ಎಂದು ಹೇಳಲು ಹೊರಟಿದ್ದು ನಿಜಕ್ಕೂ ಬಾಲಿಶ ಅನಿಸಿದ್ದು ನಿಜ.

ಮುಂದೆ ಅವರು ತಮ್ಮ ಹಿಂದಿನ ಮಾತುಗಳನ್ನು ಸಮರ್ಥಿಸಿಕೊಳ್ಳುತ್ತ ಕೆಲವು ಉತ್ತಮ ವಿಚಾರಗಳನ್ನು ಹೇಳುತ್ತಾರೆ.
೧. ಕನ್ನಡ ಪ್ರಭಲವಾದರೆ, ಕನ್ನಡಿಗರೂ ಪ್ರಭಲವಾಗಲು ಸಾಧ್ಯ. ಅದರಿಂದ ಕರ್ನಾಟಕ ಪ್ರಭಲ ಆಗುತ್ತದೆ. ೨. ಕನ್ನಡ ಭಾಷೆಯಲ್ಲಿ ಜಾಗತಿಕೆ ಮಟ್ತದ ಅತ್ಯುತ್ತಮ ವಿಜ್ಞಾನ ಮತ್ತು ಗಣಿತ ಪುಸ್ತಕಗಳು ದೊರಕಬೇಕು. ೩. ಬೆಂಗಳೂರಿನಲ್ಲಿ ಕನ್ನಡಿಗರೂ ಯಾವಾಗಲೂ ಬಹುಸಂಖ್ಯಾತರೇ

ಇವು ಬಹಳ ಉತ್ತಮವಾದ ಮತ್ತು ನನ್ನ ಮನಸ್ಸಿನ ಭಾವನೆಗಳು. ಆದರೆ ಸಂದರ್ಶನ ಮುಂದೆ ಓದುತ್ತ ಹೋದ ಹಾಗೆ ಅವರೆ ಅದನ್ನು ಒಡೆಯುತ್ತಾರೆ. ಹೇಗೆ ಎಂದು ನೋಡೊಣ.

೧. ಕನ್ನಡ ಪ್ರಭಲವಾದರೆ, ಕನ್ನಡಿಗರೂ ಪ್ರಭಲವಾಗಲು ಸಾಧ್ಯ. ಅದರಿಂದ ಕರ್ನಾಟಕ ಪ್ರಭಲ ಆಗುತ್ತದೆ.

ಪ್ರಭಲತೆ ಒಂದು ಭಾಷೆಗೆ ಬರುವುದು ಅದಕ್ಕೆ ಇರುವ ಹೊಟ್ಟೆಗೆ ಹಿಟ್ಟು ಕೊಡುವ ಶಕ್ತಿ ಇಂದ. ಕೇವಲ ೧೦೮ ಸಾಹಿತ್ಯ ಪ್ರಕಾರ, ೭ ಜ್ಞಾನಪೀಠಗಳಿಂದ ಅದು ಬರುವದಿಲ್ಲ. ಭಾಷೆಗೆ ಉದ್ಯೋಗ ಕೊಡುವ ಶಕ್ತಿ ಇದ್ದರೆ ಮಾತ್ರ ಸಮಾಜದಲ್ಲಿ ಒಂದು ಬೆಲೆ ಮತ್ತು ನೆಲೆ ಇರುತ್ತದೆ. ಇಲ್ಲದಿದ್ದರೇ ಕೇವಲ ಶ್ರೀಮಂತರ ಮನೆಯ ಶಾಡಿಲ್ಯಗಳ ಹಾಗೆ ಕಾಣುತ್ತದೆ ಅಷ್ತೆ.
ಮೂರ್ತಿಗಳು ಉದ್ಯೋಗ ಸೃಷ್ಟಿ ಮಾಡುದವರಿಂದ ಮಾತ್ರ ಪ್ರಭಲತೆ ಸಾಧ್ಯ ಎಂದು ಹೇಳಿರುವ ಮಾತು ಸರಿ ಇದೆ, ಆದರೆ ಅದರಲ್ಲಿ
ಭಾಷ ಆಯಾಮ ಇಲ್ಲದಿದ್ದರೆ ಅವರೇ ಹೇಳಿರುವ ಹಾಗೆ ಕ-ಕ-ಕ ಯಾವುದು ಪ್ರಭಲ ಆಗುವದಿಲ್ಲ. ಇನ್ನು ಅವರ ಜಗತ್ತೇ ಆಗಿರುವ ಇನ್ಫೊಸಿಸ್ ಆ ಕೆಲಸ ಮಾಡಿದ್ದರೆ ಅವರನ್ನು ಯಾರು ಪ್ರಶ್ನೆ ಮಾಡುತ್ತ ಇರಲಿಲ್ಲ ಮತ್ತು ಅವರು ತಮ್ಮ ಸಮರ್ಥನೆ ಕೋಡುವ ಕೆಲಸಕ್ಕೂ ಕೈ ಹಾಕಬೇಕಾಗಿರಲಿಲ್ಲ. ಅವರೇ ಅನೇಕ ಕಡೆ ಹೇಳಿರುವ ಹಾಗೆ ಮಾತಿಗಿಂತ ಕೃತಿಗಳು ಮಾತಾಡಲಿ ಎಂದು, ಅದೇ ಆಗಿದ್ದರೆ ಮಾತಿಗೆ ಮುಂದೆ ನಮ್ಮ ಇನ್ಫೊಸಿಸ್ ಇದು ಮಾಡಿದೆ, ಅದು ಮಾಡಿದೆ ಎಂದು ಸ್ವಪ್ರಚಾರ ಮಾಡುವ ಗೋಜಿಗೆ ಅವರೇ ಇಳಿಯುತ್ತ ಇರಲಿಲ್ಲ. ಅವರಿಗೂ ಗೊತ್ತು ಕ-ಕ-ಕ ಪ್ರಭಲ ಆಗದೇ ಇರುವದಕ್ಕೆ ನಾವು ೧೦೮ ಸಮ್ಮೇಳನಗಳು, ೧೦೮ ಹೋರಾಟಗಳನ್ನು ಮಾಡುತ್ತ ಇರುತ್ತೆವೆ ಎಂದು. ಆ ಕೆಲ್ಸ ಇನ್ಫೊಸಿಸ್ ಇಂದ ಅವರೇ ಹೇಳಿದ ಹಾಗೆ ಆಗಿದ್ದರೆ ಇಂದು ಇಸ್ರೇಲ್ ಮಾದರಿಯಲ್ಲಿ ಇರುತ್ತಿದ್ದೆವೂ ಎಂದು. ಇನ್ನು ಅವರಿಗೆ ಇನ್ಫೊಸಿಸ್ ಕಟ್ಟಿರುವದಕ್ಕೆ ಹೆಮ್ಮೆ ಇರಬೇಕೆ ವಿನಹ ಕ-ಕ-ಕ ಪ್ರಭಲತೆ
ಇನ್ಫೊಸಿಸ್ ಮಾಡಿದೆ ಅನ್ನು ತಪ್ಪು ಕಲ್ಪನೆ ಬಗ್ಗೆ ಹೆಮ್ಮೆ ಬೇಡ.

೨. ಕನ್ನಡ ಭಾಷೆಯಲ್ಲಿ ಜಾಗತಿಕೆ ಮಟ್ತದ ಅತ್ಯುತ್ತಮ ವಿಜ್ಞಾನ ಮತ್ತು ಗಣಿತ ಪುಸ್ತಕಗಳು ದೊರಕಬೇಕು.

ನಾವು ಹೇಳುತ್ತ ಇರುವುದು ಕೇವಲ ಇಂಜಿನೇರಿಂಗ್ ಮಾಡಿ ಇನ್ಫೋಸಿಸ್ ಸೇರುವರ ಬಗ್ಗೆ ಅಲ್ಲ. ಕೇವಲ ವಿಜ್ಞಾನ ಮತ್ತು ಗಣಿತ ಅಲ್ಲದೇ ಜಗತ್ತಿನ ಆಗುಹೋಗುಗಳು ಮತ್ತು ಹೊಟ್ಟೆಯ ಹಿಟ್ಟಿನ ವಿಷಯಗಳು ಎಲ್ಲಾ ಕನ್ನಡದಲ್ಲಿ ಸಿಗುವ ಹಾಗೆ ಆಗಬೇಕು. ಆಗ ಮಾತ್ರ ಅದು ಪ್ರಭಲಗೊಳ್ಳಲು ಸಾಧ್ಯ. ಆದರೆ ಅವರೇ ಹುಟ್ಟುಹಾಕಿದ ಗುಳ್ಳೆಯನ್ನು ಅವರು ಹೀಗೆ ಒಡೆಯುತ್ತಾರೆ

"ಬೈರಪ್ಪ, ಅನಂತಮೂರ್ತಿ ಕೃತಿಗಳನ್ನು ಓದಿದಾಗ ನನಗೆ ಸಂತಸ ಆಗುತ್ತದೆ, ಅದೇ ವಿಜ್ಞಾನ ಮತ್ತು ಗಣಿತದ ವಿಷಯಕ್ಕೆ ಇಂಗ್ಲೀಶ್ ಸೂಕ್ತ ಮತ್ತು ಆಪ್ತ. ಯಾವ ವಿಷಯವನ್ನು ಯಾವ ಭಾಷೆಯಲ್ಲಿ ವ್ಯವಹರಿಸಿದರೆ ಸೂಕ್ತವೋ ಅದೇ ಮುಖ್ಯ."

ಇದನ್ನು ನೊಡಿದರೆ ಇವರ ಮನಸ್ಸಿನಲ್ಲಿ ಕನ್ನಡ ಯಾವಗಲೂ ಕೇವಲ ಕಥೆ ಕಾದಂಬರಿಗಳಿಗೆ ಮಾತ್ರ ಸರಿ ಮತ್ತು ಸೂಕ್ತ. ಹೊಟ್ಟೆ
ಹಿಟ್ಟಿನ ಎಲ್ಲಾ ವಿಷಯಗಳಿಗೆ ಇಂಗ್ಲೀಶ್ ಆಪ್ತ ಎಂದು ಹೇಳುವ ಪರಿ ನಿಜಕ್ಕೂ ಬೇಸರ ತರಿಸುತ್ತದೆ. ಬಹುಪಾಲು ಜನರು ಅಂದುಕೊಂಡ ಹಾಗೆ ಕನ್ನಡ ಎಂದರೆ ಕಥೆ,ಕವಿತೆಗಳಿಗೆ ಮಾತ್ರ ಸೀಮಿತ. ಇವರ‍ೆ ಹೇಳುವ ಹಾಗೆ ಕಥೆ-ಕಾದಂಬರಿಗಳಿಂದ ಇಲ್ಲಾ
ಅದನ್ನು ಓದಿ ಆಗುವ ಸಂತಸದಿಂದ ನಮಗೆ ಪ್ರಭಲತೆ ಬರುತ್ತೆದೆಯಾ. ಒಂದು ಕಡೆ ಅದು ಬರಬೇಕು, ಇದು ಬರಬೇಕು ನಮ್ಮ ಭಾಷೆಯಲ್ಲಿ ಹೇಳಿ ಇನ್ನೊಂದು ಕಡೆ ಕನ್ನಡ ಅದಕ್ಕೆಲ್ಲಾ ಸೂಕ್ತ ಅಲ್ಲ, ಅದಕ್ಕೆಲ್ಲಾ ಇಂಗ್ಲೀಶ್ ಸರಿ ಮತ್ತು ಆಪ್ತ ಎಂದು ಹೇಳುವುದು
ಅವರ ಎಡಬಿಂಡಗಿತನ ಎತ್ತಿ ತೋರಿಸುತ್ತದೆ. ಮುಂದೆ ಅವರ ಈ ನಿಲುವೇ ಕನ್ನಡ ಮಾಧ್ಯಮ ತೆಗೆದು ಇಂಗ್ಲೀಷ್ ಮಾಧ್ವಮ ಬೇಕು ಎನ್ನುವದಕ್ಕೆ ಹೊಗುತ್ತದೆ.

ಈಗಲೂ ಕಾಲ ಮಿಂಚಿಲ್ಲ, ಯಾರು ಅವರಿಂದ ಹೊಸತಾಗಿ ಶೌಚಾಲಯವನ್ನೊ ಇಲ್ಲ ಕನ್ನಡ ಸಾಫ್ಟವೇರನ್ನು ಬಯಸುತ್ತ ಇಲ್ಲ.
ಅವರು ಅನೇಕ ಕನ್ನಡ ಮನಸ್ಸುಗಳಲ್ಲಿ ಇಂದಿಗೂ ದೊಡ್ಡ ಸ್ಥಾನದಲ್ಲಿ ಇದ್ದಾರೆ. ಅವರ ಕನಸು
ಮತ್ತು ಅನೇಕರ ಕನ್ನಡಿಗರ ಕನಸು ಒಂದೆ. ಆ ನಿಟ್ಟಿನಲ್ಲಿ ಮಾಡಬೇಕಾಗಿರುವ ಕೆಲಸಗಳ ಪಟ್ಟಿಯನ್ನು ಮಾಡಿ, ಅದನ್ನು ಸರಕಾರಕ್ಕೆ
ತಿಳಿಸಿ ಇಲ್ಲ ಅವರೇ ಹೇಳುವ ಅವರ ಹೆಮ್ಮೆಯ ಇನ್ಫೊಸಿಸ್ ಟ್ರಸ್ಟನಿಂದ ಅಲ್ಲೇ ಇರುವ ಅನೇಕ ಕನ್ನಡ ಮನಸ್ಸುಗಳನ್ನು ಇದಕ್ಕೆ ತೊಡಗಿಸಬಹುದು ಮತ್ತು ೧೦ ವರುಷದಲ್ಲಿ ಹೊಟ್ಟೆಗೆ ಹಿಟ್ಟು ಕೊಡುವ ಅತ್ಯುತ್ತಮ ಪುಸ್ತಕಗಳನ್ನು ಕನ್ನಡದಲ್ಲ್ಲಿ ತರಬಹುದು.

ಅವರಲ್ಲಿ ಇರುವ ಹಣದ ಬಳಕೆಯಿಂದ ಅನೇಕ ಕನ್ನಡ ಪ್ರಭಲತೆ ತರುವ ಕೆಲ್ಸಗಳಿಗೆ ಸಹಾಯ ಮಾಡಬಹುದು. ಎನೂ ಇಲ್ಲ ಅಂದರೂ ಒಂದು ಪ್ಲಾಟಫಾರ್ಮ್ ಹಾಕಿಕೊಟ್ಟು ಅಲ್ಲಿ ಕನ್ನಡ ಮನಸ್ಸುಗಳನ್ನು ಸೇರಿಸಿದರೆ, ಇವತ್ತು ಬ್ಲಾಗಿನಲ್ಲಿ ಕವಿತೆ-ಕಥೆಗಳನ್ನು ಬರೆದುಕೊಂಡು ಅದನ್ನೇ ಕನ್ನಡ ಸೇವೆ ಎಂದು ನಂಬಿರುವ ಕನ್ನಡ ಮನಸ್ಸುಗಳು ನಾಳಿನ ದಿನಗಳಿಗೆ ತಮ್ಮ ಸೇವೆ ಕೊಡುತ್ತಾರೆ. ಆದರೆ ದಯವಿಟ್ಟು ಇದನ್ನು ಸಮಾಜ ಸೇವೆ ಎಂದು ಟ್ಯಾಗ್ ಮಾಡದೇ ನಾಳಿನ ಭವಿಷ್ಯತ್ತಿಗೆ ನಮ್ಮ ಕಾಣಿಕೆ ಎಂದು ಮನಗಂಡು ಮಾಡಿದರೆ ಅನಕೂಲ.



ಕೊಸರು;-
1.
ನಾನು ಉತ್ತರ ಕರ್ನಾಟಕ ಅಳಿಯ, ನನ್ನ ಹೆಂಡತಿ ಜೊತೆ ಕನ್ನಡ ಮಾತನಾಡುತ್ತೆನೆ, ನನ್ನ ಹೆಂಡತಿ ಕನ್ನಡದಲ್ಲಿ ಬರೆಯುತ್ತಾರೆ, ಕನ್ನಡ ಧಾರವಾಹಿಯಲ್ಲಿ ನಟಿಸಿದ್ದಾರೆ ..etc ಅದಕ್ಕೆ ನಾನು ಕನ್ನಡಿಗ ಮತ್ತು ಉದ್ಘಾಟನೆಗೆ ಅರ್ಹ.
ಇದೆಲ್ಲಾ ಒಮ್ಮೆ ಓದಿದಾಗ ನಮ್ಮ ಅಜ್ಜಿಗೆ ಹೇಳಿದ್ದು ಎನು ಗೊತ್ತೆ.. ಅಲ್ಲ ಆ ಅಯ್ಯಮ್ಮನೇ ಉದ್ಘಾಟನೆ ಮಾಡಿದ್ದರೆ ಚೆನ್ನಾ ಇರ್ತಿತ್ತು ಅಲ್ವಾ, ಆಕಿ ಅಲ್ಲಿನ ನೆಲದಲ್ಲಿ ಹುಟ್ಟಿದವಳೂ ಬೇರೆ.
ಇದು ನಿಜಕ್ಕೂ ನಿಜ ಅನಿಸಿತು, ವಿಶ್ವ ಮಹಿಳಾದಿನದ ೧೦೦ ನೇ ವರ್ಶಕ್ಕೆ ಅವರನ್ನು ಆಯ್ಕೆ ಮಾಡಿದ್ದರೆ ನಿಜಕ್ಕೂ ಅರ್ಥಪೂರ್ಣ ಆಗಿರುತ್ತ ಇತ್ತು. ಅಷ್ಟಕ್ಕೂ ಕನ್ನಡಿಗ ಕನಸುಗಳಿಗೆ ಚಾಲನೆ ಕೊಡಲು, ಸಂವೇದನೆ ಇರುವ ಆ ತಾಯಿಯೇ ಸೂಕ್ತ ವ್ಯಕ್ತಿ ಎಂದು ನಮ್ಮ
ಅಜ್ಜಿಗೆ ಅನಿಸಿದ್ದೇ ನನಗೂ ಅನಿಸಿತು.