Sunday, June 03, 2007

ಪಲ್ಲಕ್ಕಿ ಚಿತ್ರದಲ್ಲಿ ಇರುವ ಉತ್ತಮ ಅಂಶಗಳು..


ಬಹು ನಿರೀಕ್ಷಿತ ಪ್ರೇಮ್ ಚಿತ್ರ ಪಲ್ಲಕ್ಕಿಯನ್ನು ಹಿಂದಿನ ಯಶಸ್ವಿ ಚಿತ್ರಗಳ ದೃಷ್ಟಿಯಲ್ಲಿ ನೋಡಿದರೆ ಸಾಮನ್ಯ ಚಿತ್ರ ಅನಿಸಬಹುದು,
ನಿರ್ದೇಶಕ ನರೇಂದ್ರ ಬಾಬು ಚಿತ್ರದಲ್ಲಿ ಹೊಸತೇನು ಕೊಟ್ಟಿಲ್ಲ ಎಂದು ಎಲ್ಲರಿಗೂ ಚಿತ್ರ ನೋಡಿದ ಕೂಡಲೆ ಅನಿಸುತ್ತದೆ, ಎಕೆಂದರೆ
ಕಥೆಯನ್ನು ವೀಕ್ಷಕ ಪ್ರಭು ಬಹು ಸುಲಭವಾಗಿ ಊಹಿಸಬಹುದಾಗಿದೆ. ಚಿತ್ರವನ್ನು ಪ್ರೇಮ್ ಸಲುವಾಗಿಯೆ ಮಾಡಿದ ಹಾಗಿದೆ ಅದಕ್ಕೆ
ಮೊದಲ ಅರ್ಧದಲ್ಲಿ ಒಂದು ರೀತಿ, ಇನ್ನೊಂದು ಅರ್ಧದಲ್ಲಿ ಇನ್ನೊಂದು ರೀತಿಯಾಗಿ ತೋರಿಸಿದ್ದಾರೆ. ಆದರೆ ಇಲ್ಲೇ ಗಮನಿಸ ಬೇಕಾದ
ಅಂಶಗಳು ಬಹಳ ಇವೆ. ಇದನ್ನು ನಿರ್ದೇಶಕ ನರೇಂದ್ರ ಬಾಬು ಚೆನ್ನಾಗಿ ಕೊಟ್ಟಿದ್ದಾರೆ ಅಂದರೆ ತಪ್ಪಾಗಲಾರದು.

ಇಂದು ನಾವು ಸರ್ವಸಾಮನ್ಯವಾಗಿ ಹೇಳುತ್ತಿರುವ ಪರಭಾಷಿಕರ ಆಕ್ರಮಣ ಮತ್ತು ಅವರು ಮಾಡುತ್ತಿರುವ ದೌರ್ಜನ್ಯವನ್ನು ಚಿತ್ರದಲ್ಲಿ
ಬೇರೆ ಬೇರೆಯಾಗಿ ತೋರಿಸಿದ್ದಾರೆ.

೧) ೪೦ ವರುಷಗಳಿಂದಲೂ ಇಲ್ಲೇ ಇದ್ದು, ಕನ್ನಡ ಬಾರದ ತಮಿಳಿಗ, ತಮಿಳಿಗ ತಾನು ಮುಖ್ಯವಾಹಿನಿಗೆ ಸೇರದೇ ಇರಲು ಇಲ್ಲಿನ
ಜನಗಳೇ ಕಾರಣ, ನನ್ನ ಜೊತೆ ಕನ್ನಡದಲ್ಲಿ ವ್ಯವಹರಿಸದೇ , ಕನ್ನಡವಿಲ್ಲದೇ ವ್ಯಾಪರ ಮಾಡಲು ಆಗುವದಿಲ್ಲ ಎಂದು ತಿಳಿ ಹೇಳದೇ
ನನ್ನ ಭಾಷೆಯಲ್ಲೇ ವ್ಯವಹರಿಸಿ, ತನಗೆ ಕನ್ನಡದ ಅವಶ್ಯಕತೆ ಇದೆ ಅಂದರೂ ಜನ ಆಸ್ಪದ ಕೊಡದಿರುವ ವಿಷಯ ಇಂದಿನ ಸಮಾಜದಲ್ಲಿ
ಬಹಳ ಪ್ರಸ್ತುತವಾಗಿ ಕಾಣುತ್ತದೆ. ಹಾಗೇಯೆ ಮುಖ್ಯವಾಹಿನಿಗೆ ಸೇರುವ ಅವರ ಚಿಕ್ಕ ಪುಟ್ಟ ಪ್ರಯತ್ನಗಳಿಗೆ ನಾವು ಸಹಾಯ ಮಾಡದೇ
"ಅಣ್ಣಾ..ಕನ್ನಡ ಕೊಲ್ಲಬೇಡ" ನಾವೇ ನಿನ್ನ ಭಾಷೆಯಲ್ಲಿ ಮಾತನಾಡುತ್ತೆವೆ ಎಂದು ಹೇಳುವ ನಮ್ಮ ಕನ್ನಡಿಗರ ಉದಾರತೆಯ ಮುಖವನ್ನು ತೋರಿಸಿಕೊಡುತ್ತದೆ.
ಇದಕ್ಕೆ ಲಕ್ಷೀ(ಪ್ರೇಮ್) ಪಾತ್ರ ಸರಿಯಾಗಿ ಉತ್ತರ ಕೊಟ್ಟು ಅವರು ಇಲ್ಲಿಯವರೇ, ಇದೇ ಮನೋಭಾವ ಪ್ರತಿಯೊಬ್ಬ ವಲಸಿಗನ ಮನದಲ್ಲಿ ಮೂಡಬೇಕು ಎಂಬ
ಸಂದೇಶ ಕೊಡುತ್ತದೆ. ಹಾಗೇಯೆ ನಮ್ಮ ಉದಾರತೆಯ ದುಷ್ಪರಿಣಾಮದ ಬಗ್ಗೆ ಬೆಳಕನ್ನು ಚೆಲ್ಲುತ್ತದೆ.

೨) ಕರ್ನಾಟಕದಲ್ಲಿ ಭೂ- ಮಾಫಿಯಾಕ್ಕೆ ಆಂದ್ರದಿಂದ ಬಂದು ಇಲ್ಲಿ ತಮ್ಮ ಧನ-ಬಾಹು ಬಲಗಳಿಂದ ನಮ್ಮ ಅಮಾಯಕರನ್ನು ಬೆದರಿಸಿ,
ತಮ್ಮ ದೌರ್ಜನ್ಯವನ್ನು ಮೆರೆಯುತ್ತಿರುವ ಜನಕ್ಕೆ ನಾವು ತಲೆ ಬಾಗಿದರೆ,ಅವರು ನಮ್ಮನ್ನು ಒಂದು ದಿನ ಬೀದಿಗೆ ನಿಲ್ಲುಸುತ್ತಾರೆ ಎಂದು
ಮಾರ್ಮಿಕವಾಗಿ ಹೇಳುತ್ತಾರೆ. ಆಂಧ್ರದ ಈ ಭೂ-ಮಾಫಿಯ ಜನ ತಾವು ಕೆಳಮಟ್ಟಕ್ಕೆ ಆದರೂ ಇಳಿಯಲು ಹಿಂಜರಿಯುವದಿಲ್ಲ,ಆದರೆ
ಗೌರವಕ್ಕೆ ಮಣೆ ಹಾಕುವ ನಾವು ಕನ್ನಡಿಗರ ಪಾತ್ರವನ್ನು ಮಂಗಳೂರಿನ ಲಕ್ಶ್ಮೀ ಗೆಳಯನ ಮೂಲಕ ಆವರಣ ಮಾಡಿದ್ದಾರೆ. ಇವರಿಗೆ ಒಳ್ಳೆಯ ಮಾತಿನಲ್ಲಿ
ಹೇಳಿದರೆ, ಕನ್ನಡ ಹೆಣ್ಣು ಮಕ್ಕಳನ್ನು ನನ್ನ ಹತ್ತಿರ ಬಿಡು ಎಂಬ ಕೆಟ್ಟ ದೃಷ್ತಿಯಲ್ಲಿ ಹೇಳಲು ಹಿಂಜರಿದ ಆ ಜನಕ್ಕೆ ಒದ್ದ್ದೇ ಬುದ್ಧಿ ಹೇಳಬೇಕು ಎಂಬುದು
ನಿರ್ದೇಶಕರ ಅಂಬೋಣ. ಬಲವಂತವಾಗಿ ಮತ್ತು ಅವ್ಯವತವಾಗಿ ತೆಲುಗನ್ನು ನಮ್ಮ ಮೇಲೆ ಹೇರುವುದು ಕೂಡ ಇದೇ ಜನ ಎಂದು ಬಿಡಿಸಿ ಹೇಳಿದ್ದಾರೆ.

೩) ಕನ್ನಡ ಕೆಲಸ ಅಂದರೆ ಕೇವಲ ರಾಜ್ಯೋತವ ಆಚರಿಸಿ, ಅಮ್ಮ-ಕನ್ನಡಮ್ಮ ಎಂದು ಹಾಡುವುದು ಮಾತ್ರವಲ್ಲ ಕನ್ನಡಿಗರು ಉದ್ಯಮಶೀಲರಾಗಬೇಕು
ಎಂದು ಮಧ್ಯಂತರ ಭಾಗದಲ್ಲಿ ಸಂದೇಶ ಸಾರಿದ್ದಾರೆ. ಉದ್ಯಮಶೀಲರಾಗಿ ಪರರಾಜ್ಯದವರ ಕೈನಲ್ಲಿ ಇರುವ ವ್ಯವಹಾರವನ್ನು ಚತುರತೆ ಇಂದ ಪಡೆಯಬೇಕೆಂಬ
ವಿಷಯವು ನಿರ್ದೇಶಕರ ಬಗ್ಗೆ ಒಳ್ಳೆಯ ಮೆಚ್ಚುಗೆ ಮೂಡುತ್ತದೆ.

Sunday, May 13, 2007

ನಿರೀಕ್ಷೆ ..(ಕವಿತೆ)


ಪೀಠಿಕೆ:- ಕೆಲ ದಿನಗಳ ಹಿಂದೆ ನನ್ನ ಹಳೇ ಗೆಳೆಯರು,ನಾನು ೨೦೦೪ ಇಸವಿಯಲ್ಲಿ ಬರೆದ ಕವಿತೆವನ್ನು ಜ್ಞಾಪಿಸಿಕೊಂಡು,ಕಳುಹಿಸಿ ಕೊಡಿ ಎಂದು ಹೇಳಿದರು. ನನಗೆ ಕಿಂಚಿತ್ತೂ ಕ್ಲೂ ಇರಲಿಲ್ಲ, ಯಾವುದರ ಬಗ್ಗೆ ಹೇಳುತ್ತ ಇದ್ದಾರೆ ಅಂತ. ಕೊನೆಗೂ ಅದನ್ನು ಹುಡುಕುವ ಕೆಲಸಕ್ಕೆ ಕೈ ಹಾಕಿ, ಆ ದಿನಗಳಲ್ಲಿ ನಾನು ಕವಿತೆ ಹಾಕುತ್ತಿದ್ದ ತಾಣದಿಂದ,ಹೆಕ್ಕಿ ಇಲ್ಲಿ ಹಾಕುತ್ತ ಇರುವೆ. ಇದು ಶಬರಿಯ ಹಾಗೇ ಕಾಯುತ್ತಿರುವ ನನ್ನ ಗೆಳತಿಗೆ ....



ಮರಳಿ ಬರುವೆನೆಂದು ಹೇಳಿ ಹೊದೆಯೆಲ್ಲ ನಲ್ಲ,

ಬಾರಿ ಬಾರಿ ಬೀಸಿ, ರೋಸಿ ಹೋಯಿತು ಗಾಳಿ,

ನೀನು ಇಲ್ಲ, ನಿನ್ನ ನೆರಳು ಇಲ್ಲ.


ಪ್ರತಿ ದಿನವೂ ನಿನ್ನ ನಿರೀಕ್ಷೆಯಲ್ಲಿ,

ಬಾಗಿಲಿಗೆ ಬಂದು, ಗೋಡೆಗೆ ಒರಗಿ ನಿಂತು,

ಹಾದು ಹೋಗುತ್ತಿದ್ದ ಜನಗಳ ನಡುವೆ ಹುಡುಕುತ್ತಿದ್ದೆ,

ನಿನ್ನ ಮುಖ ಎಲ್ಲಿ.


ಅತ್ತು,ಅತ್ತು ಕಣ್ಣಾಳಿಗಳು ಕೆಂಪಾಗಿ,

ಬಿರುಸಾಗಿ ಹೊಯ್ದ ಮಳೆಗಳಲ್ಲಿ, ಅಡಗಿಸಿತ್ತೆ ನಾ ಕಂಬನಿಗಳ,
ಬರಲಿಲ್ಲ ಕೊನೆಗೂ ನೀನು ಕರಗಿ.


ನಿನ್ನ ಮುಖವನ್ನು ಒಮ್ಮೆ ನೋಡಲು,

ನಿನ್ನ ಧ್ವನಿಯ ಒಮ್ಮೆ ಆಲಿಸಲು,

ಕಾದು ಕುಳಿತಿರುವೆ ನಾ,

ನೋಡುತ್ತಾ ಮುಳುಗುತ್ತಿರುವ ಹಗಲು.

Sunday, May 06, 2007

ಅದು ಹೇಗೆ ಗಾಂಚಲಿ ಆಗುತ್ತದೆ..... !!!

ರೇಖಾ ಬಗ್ಗೆ ಬರೆದು ನಾನು ಅವಳು ಕನ್ನಡದಲ್ಲಿ ಮಾತನಾಡಲಿಲ್ಲ ಅಂತ ಅದನ್ನು ಗಾಂಚಲಿ ಅಂದು ಬರೆದಿದ್ದೇನೋ ಸರಿ, ಆದರೆ ಸ್ವಲ್ಪ ಯೋಚಿಸಿದಾಗ ಕನ್ನಡ ಮುಕುಟ ಮಣಿಗಳು ಎಂದು ನಾವು ಕರೆಯುವ ಅನೇಕ ಕನ್ನಡ ಕವಿಗಳ ಮಾತುಗಳಲ್ಲಿ ೫೦% ಆಂಗ್ಲ ಇರುತ್ತಿದ್ದವು. ಅದರಲ್ಲೂ ಆ ಕವಿವೃಂದ ಬೇಟಿ ಮಾಡಿದರೆ ಅವರ ಮಾತುಗಳೆಲ್ಲಾ ಹೆಚ್ಚಾಗಿ ಆಂಗ್ಲದಲ್ಲಿ ಇದ್ದವು. ಅಷ್ಟಕ್ಕೆ ಏಕೆ, ಅವರ ಮನೆಯಲ್ಲಿ ತಮ್ಮ ಮಕ್ಕಳ ಜೊತೆ, ಇಲ್ಲ್ಲಾ ಇನ್ನೊಬ್ಬ ಕವಿಗಳ ಜೊತೆ ವ್ಯವಹರಿಸೊಕ್ಕೆ ಬರೀ ಇಂಗ್ಲೀಷ್ ಬಳಸಿದ್ದು ಸುಳ್ಳು ಅಲ್ಲ. ಹಾಗೇ ಅಂತ ಅವರಿಗೂ ಗಾಂಚಲಿ ಅಂತ ಕರೆಯಬಹುದೇ ???.

ಎಲ್.ಎಸ್.ಶೇಷಗಿರಿರಾಯರು ಇದನ್ನು ಚೆನ್ನಾಗಿ ಹೇಳಿದ್ದಾರೆ, ಅವರಿಗೆ ಹೃದಾಯಘಾತವಾದಾಗ , ಹೇಗಿದ್ದಿರಿ ಅಂದಾಗ
ಚೆನ್ನಾಗಿದ್ದೇನೆ ಅಂತ ಕನ್ನಡದಲ್ಲಿ ಅನ್ನುವ ಬದಲು ಆಂಗ್ಲದಲ್ಲಿ ಉತ್ತರಿಸಿದರು. ಇದು ಯಾಕೆ ಅಂದರೂ ಅಂತ ಅವರಿಗೂ ಗೊತ್ತಿಲ್ಲ,ಅವರ ಸುಪ್ತ ಆಂಗ್ಲಕರಣವಾಗಿರಬಹುದು. ಇದನ್ನೇ ಮುಂದುವರೆಸುತ್ತ ರೇಖ ಹೇಳಿದ್ದರಲ್ಲಿ ತಪ್ಪಿಲ್ಲ ಅಂತ ವಾದಿಸಬಹುದು. ಆದರೆ ಇದರಲ್ಲಿ ಗಮನಿಸಬೇಕಾದ ಅಂಶವಿದೆ.

೧) ಮನದಾಳವನ್ನು ಕನ್ನಡದಲ್ಲಿ ಹೇಳಲು ಆಗುವದಿಲ್ಲ ಎಂದು ನಮ್ಮ ಹಿರಿಯರು ಮತ್ತು ಸಮಾಜದಲ್ಲಿ ಪ್ರಭಾವಿ ವ್ಯಕ್ತಿಗಳು ತೋರಿಸಿಕೊಟ್ಟರೆ ಅದು ಸಮಾಜದ ಮೇಲೆ ಬಹಳ ದುಷ್ಪರೀಣಾಮ ಬೀರುತ್ತದೆ. ಅಷ್ಟು ಕನ್ನಡ ಸೇವೆ ಮಾಡಿ, ಅಷ್ಟು ತಿಳಿದುಕೊಂಡ ಜ್ಞಾನಿಗಳೇ ಇಂಗ್ಲೀಷ್ ಬಳಸಿರಬೇಕಾದರೆ ನಾವು ಮಾಡಿದರೆ ತಪ್ಪೇನು ಎಂದು ಉದಾಸೀನ ನಮ್ಮ ಸಮಾಜದಲ್ಲಿ ಮೂಡುತ್ತದೆ.

೨) ಪ್ರತಿ ಜನರಿಗೆ ತಾನು ಹೇಳುವ ವಿಚಾರ ಬೇರೆಯವರಿಗೆ ಅರ್ಥ ಆಗಬೇಕು ಎಂಬ ಚಟ ಇರುತ್ತದೆ, ಇದಕ್ಕೆ ಎನು ಬೇಕಾದರೂ ಮಾಡಬೇಕೆಂಬ ಛಲ ಮೂಡಿ, ತಾವು ಹೇಳುವ ವಿಷಯವನ್ನು ಆಂಗ್ಲದಲ್ಲಿ ಹೇಳಲು ಹೋಗುತ್ತಾರೆ. ಇದಕ್ಕೆ ನಮ್ಮ ಹಿಂದಿನ ಕವಿಗಳು ಕೊಡುವ ನೆವ ಅಂದರೆ, ಆಂಗ್ಲ ಭಾಷೆ "Langauge of Phrases", ಬಹಳ ಚೆನ್ನಾಗಿ ಹೇಳಬಹುದು, ಕನ್ನಡದಲ್ಲಿ ಅದು ಸಾಧ್ಯವಿಲ್ಲ ಎಂದು. ಅದ್ದರಿಂದ ಗಮನಿಸಿ ನೋಡಿ ಆ ಶತಮಾನದವರೂ ಇವತ್ತಿಗೂ ತಮ್ಮ ಭಾಷಣದಲ್ಲಿ ಕನ್ನಡದಲ್ಲಿ ಹೇಳಿದ್ದರೂ ಕೂಡ ಅದನ್ನೇ flowery English ನಲ್ಲಿ ಹೇಳಿ ನಾನು ಹೇಳಿದ್ದರ ಅರ್ಥ ಇದು ಎಂದು ಮನವರಿಕೆ ಮಾಡಿಕೊಡುತ್ತಾರೆ.

೩) ಇನ್ನೂ ಕೆಲವರು ತಾನು ಬುದ್ಧಿವಂತ, ಓದಿದವನು ಎಂದು ಬೇರೆಯವರಿಗೆ ತಿಳಿಯಲು ಇಂಗ್ಲೀಷ್ ಬಳಸುತ್ತಾರೆ. ಕನ್ನಡದಲ್ಲಿ ಹೇಳಿದ್ದರೆ ತನ್ನನ್ನು ಹಳ್ಳಿಗುಗ್ಗು ಎಂದು ಎಲ್ಲಿ ಅಂದು ಕೊಳ್ಳುತ್ತಾರೆ ಎಂಬ ಭಯ ಮೂಡಿ ಕಷ್ಟ ಪಟ್ಟಿ ಆದರೂ ಬಳಸುತ್ತಾರೆ. ನಮ್ಮ ದೌರ್ಭಾಗ್ಯವೆಂದರೆ ಇವರೇ ಹೆಚ್ಚು ಇರುವುದು, ಇವರಿಗೆ ಮೇಲೆ ಹೇಳಿದವರು ದಾರಿ ತಪ್ಪಿಸಿದರೆ, ಕೋತಿಗೆ ಹೆಂಡ ಕುಡಿಸಿದ ಹಾಗೆ ಆಗುತ್ತದೆ. ಇದನ್ನೇ ರೇಖಾ ಮಾಡಿದ್ದು, ಅವಳನ್ನು ಅನುಸರಿಸುವ ಯುವ ಪಡೆಗೆ ತಪ್ಪು ವಿಷಯ ರವಾನಿಸದ ಹಾಗೆ ಆಗುತ್ತದೆ.
ಅದಕ್ಕೆ ನಾನು ಅದನ್ನು ಗಾಂಚಲಿ ಅಂತ ಹೇಳಿದ್ದು,

ಕನ್ನಡವೆಂದರೆ ಕೇವಲ ಪದ್ಯ-ಗದ್ಯ ಬರೆದು ಜ್ಞಾನಪೀಠ ಪಡೆಯುವ ಭಾಷೆ ಅಲ್ಲ, ನಮ್ಮ ದೈನಿಂದಿನದ ಭಾಷೆ. ಇದರಲ್ಲಿ ಆಗದೇ ಇರುವುದು ಎನು ಇಲ್ಲಾ ಅಂತ ನಮ್ಮ ಸಮಾಜದ ಮಹನೀಯರು ತೋರಿಸಿಕೊಡಬೇಕು.